ಕಲಬುರಗಿ| ಸರಕಾರ ಸ್ವಾಧೀನಪಡಿಸಿದ ರೈತರ ಭೂಮಿ ಮರಳಿ ನೀಡುವಂತೆ ಆಗ್ರಹ

ಕಲಬುರಗಿ: 2013ರಲ್ಲಿ ಕೈಗಾರಿಕೆ ಸ್ಥಾಪಿಸುವುದಾಗಿ ಹೇಳಿಕೊಂಡು ಕಲಬುರಗಿ ತಾಲೂಕಿನ ಹಲವು ಗ್ರಾಮಗಳಲ್ಲಿ ಸ್ವಾಧೀನಪಡಿಸಿಕೊಂಡಿರುವ ಒಟ್ಟು 1821 ಎಕರೆ ಭೂಮಿಯನ್ನು ಪುನಃ ರೈತರಿಗೆ ವಾಪಸ್ ಕೊಡಬೇಕೆಂದು ಭೂ ಸಂತ್ರಸ್ತ ರೈತರು ಆಗ್ರಹಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟಿಸಿ ಮನವಿ ಸಲ್ಲಿಸಿದ ರೈತರು, ಕೈಗಾರಿಕೆ ಸ್ಥಾಪನೆ ಮಾಡುವುದಾಗಿ ಸರಕಾರ, ರೈತರ ಜಮೀನುಗಳನ್ನು ಸ್ವಾಧೀನಪಡಿಸಿಕೊಂಡಿದೆ. ಉದ್ದೇಶಿತ ಭೂಮಿಯಲ್ಲಿ ಈವರೆಗೆ ಯಾವುದೇ ಕಂಪೆನಿಗಳನ್ನು ಸ್ಥಾಪಿಸಿಲ್ಲ. ಸರಕಾರ ಸುಳ್ಳು ಹೇಳಿಕೊಂಡು ರೈತರ ಭೂಮಿಯನ್ನು ಪಡೆದುಕೊಂಡಿದೆ. ಹಾಗಾಗಿ ಸಾಗುವಳಿ ಮಾಡುತ್ತಾ ಬಂದಿರುವ ರೈತರ ಎಲ್ಲಾ ಭೂಮಿಗಳನ್ನು ವಾಪಸ್ ಕೊಡಬೇಕೆಂದು ಒತ್ತಾಯಿಸಿದರು.
ಕಲಬುರಗಿ ತಾಲೂಕಿನ ಕಿರಣಗಿ, ಫಿರೋಜಾಬಾದ್, ಸೋಮನಾಥ ಹಳ್ಳಿ ಗ್ರಾಮಗಳಲ್ಲಿ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಕೈಗಾರಿಕಾ ಸ್ಥಾಪನೆ ಮಾಡುವುದಾಗಿ ಸುಳ್ಳು ಹೇಳಿ ಪಡೆದ ಭೂಮಿಯನ್ನು ರೈತರಿಗೆ ಹಿಂದಿರುಗಿಸಬೇಕು, ಭೂಸಂತ್ರಸ್ಥರಿಗೆ ಸರಕಾರ ರಕ್ಷಣೆ ನೀಡಬೇಕೆಂದು ಆಗ್ರಹಿಸಿದರು.
ಈ ಪ್ರದೇಶದಲ್ಲಿ ಬಿತ್ತಿದ ತೊಗರಿ, ಜೋಳ, ಕುಸುಬಿ, ಬೆಳೆಗಳಲ್ಲಿ ಟಿಪ್ಪರ್ ಓಡಾಡಿಸಿ ಬೆಳೆ ಹಾನಿ ಮಾಡುತ್ತಿರುವ ಸಿಮೆಂಟ್ ಕಂಪೆನಿ ಮೇಲೆ ಕಾನೂನಿನ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಶರಣಬಸಪ್ಪ ಮಮಶೆಟ್ಟಿ, ಶರಣಪ್ಪ ನರಿಬೋಳ, ನಾಗಪ್ಪ ನರಿಬೋಳ, ಭೀಮರಾಯ ಪೂಜಾರಿ, ಯಲ್ಲಪ್ಪ ನರಿಬೋಳ, ಸಾಯಬಣ್ಣ ಹಳ್ಳಿ, ಅಂಬಣ್ಣ ಕೊರಮಾ, ಪ್ರಭು ಭೈರಾಮಡಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.







