ಕಲಬುರಗಿ | ಬಡವರ ಸೇವೆಯಲ್ಲಿ ವೈದ್ಯರು ದೇವರನ್ನು ಕಾಣಬೇಕು : ತಿಪ್ಪಣ್ಣಪ್ಪ ಕಮಕನೂರ

ಕಲಬುರಗಿ: ಬಡವರ ಸೇವೆಯಲ್ಲಿ ವೈದ್ಯರು ದೇವರನ್ನು ಕಾಣಬೇಕು. ರೋಗಿಗಳಿಗೆ ವೈದ್ಯರೇ ನಡೆದಾಡುವ ದೇವರು ಎಂದು ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರು ಹೇಳಿದರು.
ನಗರದ ಜವಳಿ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಆರಂಭಗೊಂಡ ಹರಿದಾಸ ಹಾರ್ಟ್ ಹಾಸ್ಪಿಟಲ್ ಜು.28ರಂದು ಉದ್ಘಾಟನೆ ಮಾಡಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗದಲ್ಲಿ ತಜ್ಞ ವೈದ್ಯರ ಕೊರತೆಯಿಂದ ಸೋಲಾಪುರ ಬೆಂಗಳೂರಿಗೆ ರೋಗಿಗಳು ತೆರಳುತ್ತಿದ್ದ ಯುಗಕ್ಕೆ ಅಂತ್ಯ ಹಾಡಲು ತಜ್ಞ ವೈದ್ಯರು ಕಲಬುರಗಿಯಲ್ಲಿ ಆಸ್ಪತ್ರೆ ಪ್ರಾರಂಭಿಸುವುದರ ಮೂಲಕ ಈ ಭಾಗದ ಜನರ ಸೇವೆಗೆ ಮುಂದಾಗಿರುವುದು ಶ್ಲಾಘನೀಯ ವಿಷಯ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಹೃದ್ರೋಗವು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಡಾ.ಅರುಣ್ ಕುಮಾರ್ ಹರಿದಾಸ್ ಜಗದ್ವಿಖ್ಯಾತ ವೈದ್ಯರು ಕಲಬುರಗಿಯಲ್ಲಿ ಸೇವೆಗೆ ಸಿಗುತ್ತಿರುವುದು ಈ ಭಾಗದ ದೊಡ್ಡ ಭಾಗ್ಯ. ಇಂತಹ ವೈದ್ಯರುಗಳಿಗೆ ಸರಕಾರ ಹಾಗೂ ಸಾರ್ವಜನಿಕರು ಬೆಂಬಲ ನೀಡಬೇಕು ಎಂದು ಶುಭ ಹಾರೈಸಿದರು.
ಈ ಭಾಗದ ಬಡ ರೋಗಿಗಳ ಸೇವೆಗಾಗಿ ಅತ್ಯಾಧುನಿಕ ಆಸ್ಪತ್ರೆ ತೆರೆಯಲಾಗಿದ್ದು, ಕೈಗೆಟಕುವ ದರದಲ್ಲಿ ಸೇವೆ ಒದಗಿಸಲಾಗುವುದು ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಅರುಣ್ ಕುಮಾರ್ ಹರಿದಾಸ್ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಉದ್ಯಮಿಗಳಾದ ರಾಘವೇಂದ್ರ ಮೈಲಾಪುರ ಮಾತನಾಡಿದರು. ಎಚ್ ಕೆ ಇ ಕೌನ್ಸಿಲ್ ನ ಮಾಜಿ ಸದಸ್ಯ ನಿತಿನ್ ಬಿ.ಜವಳಿ ಶುಭ ಹಾರೈಸಿದರು.
ಉದ್ಯಮಿಗಳಾದ ವೆಂಕಟೇಶ ಕಡೇ ಚೂರ್, ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಶರಣಬಸಪ್ಪ ಕ್ಯಾತನಾಳ್, ಕಲಬುರಗಿ ಮಹಾನಗರ ಪಾಲಿಕೆಯ ಮಾಜಿ ಉಪಮೇಯರ್ ನಾಗವೇಣಿ ತಿಪ್ಪಣ್ಣಪ್ಪ ಕಮಕನೂರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ಪ್ರಮೀಳಾ ಎಂ.ಕೆ, ಡಾ.ರಾಜೇಶ್ ಕಡೇಚೂರ್, ಕೋಮಲೇಶ್ವರಿ ಅರುಣ್ ಕುಮಾರ್, ಅಂತರಾಷ್ಟ್ರೀಯ ಖ್ಯಾತಿಯ ಜಾದುಗಾರ ಕುದ್ರೋಳಿ ಗಣೇಶ್ ಇದ್ದರು. ಆಕಾಶವಾಣಿಯ ನಿವೃತ್ತ ಕಾರ್ಯಕ್ರಮಕ್ಕೆ ಸ್ವಾಗತಿಸಿ ನಿರೂಪಣೆ ಮಾಡಿದರು.







