ಕಲಬುರಗಿ | ತಂದೆ-ತಾಯಿಗಳನ್ನು ವೃದ್ಧಾಶ್ರಮಕ್ಕೆ ಕಳುಹಿಸಬೇಡಿ : ಚರಲಿಂಗ ಮಹಾಸ್ವಾಮೀಜಿ

ಕಲಬುರಗಿ : ಹೆತ್ತು ಹೊತ್ತು ನಮ್ಮನ್ನೆಲ್ಲ ಬೆಳೆಸಿದ ತಂದೆ-ತಾಯಿಗಳನ್ನು ವೃದ್ಧಾಶ್ರಮಕ್ಕೆ ಕಳುಹಿಸಬೇಡಿ ಎಂದು ಗದ್ದುಗೆ ಮಠದ ಚರಲಿಂಗ ಮಹಾಸ್ವಾಮಿಗಳು ಹೇಳಿದರು.
ಛಪ್ಪರಬಂದಿ ಪ್ರಭಾಕರ ಫೌಂಡೇಶನ್ ವತಿಯಿಂದ ಪ್ರಭಾಕರ ಛಪ್ಪರಬಂದಿ ಸ್ಮರಣಾರ್ಥ ನಗರದ ಕನ್ನಡ ಭವನದಲ್ಲಿ ಏರ್ಪಡಿಸಿದ ʼಆದರ್ಶ ದಂಪತಿಗಳುʼ ಎಂಬ ಪ್ರಶಸ್ತಿ ಪ್ರದಾನ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ತಂದೆ ತಾಯಿಗಳು ಮಕ್ಕಳ ಏಳಿಗೆಗೆ ಅವಿರತವಾಗಿ ಶ್ರಮಿಸಿ ಉನ್ನತಿ ಬಯಸುತ್ತಾರೆ. ಜತೆಗೆ ಮಕ್ಕಳಲ್ಲಿ ಸಂಸ್ಕಾರ ಬೆಳೆಸಿ ನೀತಿವಂತರನ್ನಾಗಿ ಮಾಡುತ್ತಾರೆ. ಪ್ರಜ್ಞಾವಂತ ಸಮಾಜದಲ್ಲಿ ತಾಯಿ ತಂದೆಗಳ ಋಣ ಎಂದಿಗೂ ತೀರಿಸಲಾಗದು ಎಂದರು.
ಜಿಲ್ಲಾ ಕಸಾಪದ ಸಂಘ ಸಂಸ್ಥೆ ಪ್ರತಿನಿಧಿ ಕಲ್ಯಾಣಕುಮಾರ ಶೀಲವಂತ ಮಾತನಾಡಿ, ತಂದೆ ತಾಯಿ ಗುರು ಹಿರಿಯರನ್ನು ಗೌರವಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಸ್ವಾರ್ಥ ಮತ್ತು ಒತ್ತಡದ ಜೀವನದಲ್ಲಿ ಸೇವಾ ಮನೋಭಾವ ಮರೆತು ಜವಾಬ್ದಾರಿಗಳಿಂದ ವಿಮುಖರಾಗುತ್ತಿದ್ದೇವೆ. ಮಾನವೀಯ ಮೌಲ್ಯಗಳನ್ನು ಮರೆತು ಮನುಷ್ಯತ್ವ ಕಳೆದುಕೊಳ್ಳುತ್ತಿದ್ದೇವೆ. ಈ ದಿಸೆಯಲ್ಲಿ ನಮ್ಮ ಹೆತ್ತವರನ್ನು ಸದಾ ಸ್ಮರಿಸುವ ಕಾರ್ಯ ನಾವುಗಳು ಮಾಡಬೇಕಾಗಿದೆ ಎಂದರು.
ಸೇಡಂನ ಆದಂತ ಷಡಕ್ಷರಿ, ಲೋಕೋಪಯೋಗಿ ಇಲಾಖೆಯ ಮುಖ್ಯ ಅಭಿಯಂತರರಾದ ಶರಣಪ್ಪ ಸುಲಗುಂಟೆ ಕಾರ್ಯಕ್ರಮ ಉದ್ಘಾಟಿಸಿದರು. ಫೌಂಡೇಶನ್ ಕಾರ್ಯದರ್ಶಿ ಶರಣರಾಜ ಛಪ್ಪರಬಂದಿ, ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಲೋಕೋಪಯೋಗಿ ಇಲಾಖೆ ಅಧೀಕ್ಷಕ ಅಭಿಯಂತರರಾದ ಡಾ.ಸುರೇಶ ಶರ್ಮಾ, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಬಳ್ಳುಂಡಗಿ, ಪ್ರಮುಖರಾದ ಸುನೀಲ ಪಾಟೀಲ ಸರಡಗಿ, ರವೀಂದ್ರಕುಮಾರ ಭಂಟನಳ್ಳಿ, ರಾಜೂಗೌಡ ನಾಗನಳ್ಳಿ, ಮಹೇಶ ಹೂಗಾರ, ಪ್ರಭುಲಿಂಗ ಮೂಲಗೆ, ಧರ್ಮರಾಜ ಜವಳಿ ವೇದಿಕೆ ಮೇಲಿದ್ದರು. ಫೌಂಡೇಶನ್ ಮುಖ್ಯಸ್ಥೆ ಸುವರ್ಣಾ ಛಪ್ಪರಬಂದಿ ಅಧ್ಯಕ್ಷತೆ ವಹಿಸಿದ್ದರು.
ಲಕ್ಷ್ಮಿದೇವಿ ಶ್ರೀಧರ ರತ್ನಾಗಿರಿ, ಶಶಿಕಲಾ ಶಿವಶರಣಪ್ಪ ದೇಗಾಂವ, ಭೀಮಬಾಯಿ ಜಗನ್ನಾಥ ಮಂಠಾಳ, ಶೋಭಾ ವಿಠೋಬಾ ಪತ್ತಾರ, ಸಿದ್ದಮ್ಮ ರಾಚೋಟೆಪ್ಪ ಬಿರಾದಾರ ಅವರನ್ನು ಆದರ್ಶ ದಂಪತಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ವಿಶ್ವನಾಥ ಪಾಟೀಲ ಗೌನಳ್ಳಿ, ಸುರೇಶ ಡಿ.ಬಡಿಗೇರ, ಮಾಲಾ ಕಣ್ಣಿ, ಅಮೃತಪ್ಪ ಅಣೂರ ಕವಿಗಳು, ಶಿವಾನಂದ ಸುರವಸೆ, ಧರ್ಮಣ್ಣ ಎಚ್.ಧನ್ನಿ, ರೇವಯ್ಯಾ ಸ್ವಾಮಿ, ಬಾಬುರಾವ ಪಾಟೀಲ, ಮಾಲಿಪಾಟೀಲ, ಆದಿನಾಥ ಹೀರಾ, ಶಕುಂತಲಾ ಪಾಟೀಲ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.







