ಕಲಬುರಗಿ | ಅರಿವೇ ಅಂಬೇಡ್ಕರ್ ಕೃತಿಗೆ ಡಾ.ಅಂಬೇಡ್ಕರ್ ಪುಸ್ತಕ ಪ್ರಶಸ್ತಿ

ಕಲಬುರಗಿ : ಮಹತ್ವಾಕಾಂಕ್ಷಿ ಸಾಮಾಜಿಕ ಸೇವಾ ಸಂಸ್ಥೆ ಹಾಗೂ ಬಿಸಿಲನಾಡು ಪ್ರಕಾಶನ ಸಂಸ್ಥೆ ವತಿಯಿಂದ ಕೊಡಮಾಡುವ ರಾಜ್ಯಮಟ್ಟದ ಡಾ.ಬಿ.ಆರ್.ಅಂಬೇಡ್ಕರ್ ಪುಸ್ತಕ ಪ್ರಶಸ್ತಿಗೆ ವಿಜಯಪುರ ಜಿಲ್ಲೆಯ ತಾಳಿಕೋಟೆಯ ಶ್ರೀ ಖಾಸ್ಗತೇಶ್ವರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ.ಸುಜಾತಾ ಚಲವಾದಿ ಅವರ ‘ಅರಿವೇ ಅಂಬೇಡ್ಕರ್’ ಕೃತಿ ಆಯ್ಕೆಗೊಂಡಿದೆ.
ಡಾ.ಅಂಬೇಡ್ಕರ್ ಯುವ ಪುರಸ್ಕಾರಕ್ಕೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕಕ್ಕೇರಾದ ಡಾ.ಪಿ.ನಂದಕುಮಾರ ಅವರ ‘ಹಂಗಿನ ಕಿರೀಟಕ್ಕೆ ಜೋತು ಬಿದ್ದ ನಾಲಿಗೆ’ ಹಾಗೂ ಬೀದರ್ ಜಿಲ್ಲೆಯ ಔರಾದ ತಾಲೂಕಿನ ನಾಗೂರ ಗ್ರಾಮದ ಡಾ.ಕಿರಣ ವಲ್ಲೇಪುರೆ ಅವರ ‘ಕಂದೀಲಿನ ಬೆಳಕು’ ಕೃತಿ ಆಯ್ಕೆಗೊಂಡಿದೆ.
ಪ್ರಶಸ್ತಿಯು ತಲಾ 5,000 ರೂ. ನಗದು ಹಾಗೂ ಪ್ರಶಸ್ತಿ ಪತ್ರ, ಫಲಕ ಒಳಗೊಂಡಿದೆ. ನವೆಂಬರ್ ಕೊನೇ ವಾರದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಪ್ರಭುಲಿಂಗ ನೀಲೂರೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಾ.ಬಿ.ಆರ್.ಅಂಬೇಡ್ಕರ್ ಚಿಂತನೆ ಆಧರಿಸಿ ಬರೆದ ಕೃತಿಗೆ ಡಾ.ಅಂಬೇಡ್ಕರ್ ಪುಸ್ತಕ ಪ್ರಶಸ್ತಿ ಹಾಗೂ ದಲಿತ, ಬಂಡಾಯ ಹಾಗೂ ವೈಚಾರಿಕತೆ ಕುರಿತು ಬರೆದ ಯಾವುದೇ ಪ್ರಕಾರದ ಕೃತಿಗೆ ಡಾ.ಅಂಬೇಡ್ಕರ್ ಯುವ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ.







