Kalaburagi | ಡಾ.ಬಿ.ಎಸ್.ಶಂಕರ್ ಪ್ರತಿಷ್ಠಾನದ ಅಧ್ಯಕ್ಷರಾಗಿ ಡಾ.ಪಿ.ಎಂ.ಬಿರಾದಾರ್ ಆಯ್ಕೆ

ಕಲಬುರಗಿ : ಡಾ.ಬಿ.ಎಸ್.ಶಂಕರ್ ಪ್ರತಿಷ್ಠಾನದ ನೂತನ ಅಧ್ಯಕ್ಷರಾಗಿ ಖ್ಯಾತ ಚರ್ಮರೋಗ ತಜ್ಞ ಡಾ.ಪಿ.ಎಂ.ಬಿರಾದಾರ್ ಅವರನ್ನು ಪ್ರತಿಷ್ಠಾನದ ಸರ್ವ ಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ನಗರದ ಡಾ. ಬಿಎಸ್ ಶಂಕರ್ ಅವರ ಸ್ವಗೃಹ ‘ದೀಪ್ತಿ’ಯಲ್ಲಿ ಭಾನುವಾರ ನಡೆದ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು. ಡಾ. ಬಿಎಸ್ ಶಂಕರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಶ್ರೀಮತಿ ಅಂಬಿಕಾ ಶಂಕರ್ ಅವರ ಅಗಲಿಕೆಯಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಡಾ. ಪಿ.ಎಂ. ಬಿರಾದಾರ್ ಅವರನ್ನು ಆಯ್ಕೆ ಮಾಡಲಾಯಿತು.
ಈವರೆಗೆ ಪ್ರತಿಷ್ಠಾನದ ಕೋಶಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ. ಪಿ.ಎಂ. ಬಿರಾದಾರ್ ಅವರ ಸ್ಥಾನಕ್ಕೆ ಮಣಿಲಾಲ್ ಶಹಾ ಅವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಮಾತನಾಡಿದ ಡಾ. ಬಿಎಸ್ ಶಂಕರ್, ಪ್ರತಿಷ್ಠಾನದ ಪ್ರಮುಖ ಕಾರ್ಯಕ್ರಮಗಳಾದ ವೈದ್ಯಶ್ರೀ ಪ್ರಶಸ್ತಿ, ವೈದ್ಯ ಸಾಹಿತ್ಯ ಪ್ರಶಸ್ತಿ, ವೈದ್ಯಕೀಯ ವಿದ್ಯಾರ್ಥಿ ಪುರಸ್ಕಾರ, ಯುಗಾದಿ ಚೈತ್ರೋತ್ಸವ, ಚಿಗುರು ಚಿನ್ಮಯ ಪ್ರಶಸ್ತಿ, ದತ್ತಿ ಉಪನ್ಯಾಸಗಳು ಹಾಗೂ ವಾರ್ಷಿಕ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮಗಳನ್ನು ಹಿಂದಿನಂತೆ ಮುಂದುವರಿಸಲಾಗುವುದು ಎಂದು ತಿಳಿಸಿದರು.
ಪ್ರತಿಷ್ಠಾನದ ಕಾರ್ಯದರ್ಶಿ ಪ್ರೊ.ನರೇಂದ್ರ ಬಡಶೇಷಿ ಆಯ್ಕೆ ಪ್ರಕ್ರಿಯೆ ನಡೆಸಿ ಕಾರ್ಯಕ್ರಮ ನಿರೂಪಿಸಿದರು.
ಸಭೆಯಲ್ಲಿ ಡಾ.ಪಿ ಎಂ ಬಿರಾದಾರ ಸಿಎ ಮಣಿಲಾಲ್ ಶಹಾ, ದೀಪಕ್ ಪಾಟೀಲ್, ಡಾ. ರೂಪ ಹೆಬ್ಬಂಡಿ, ಡಾ ಸಿದ್ದರಾಮ ಪಾಟೀಲ್, ಡಾ. ಸದಾನಂದ ಪೆರ್ಲ, ಡಾ. ರಾಜೇಂದ್ರ ಕೊಂಡ ಡಾ. ಮಾಲಿ ಪಾಟೀಲ್, ಅನ್ನಪೂರ್ಣ ಇನಾಂದಾರ, ಸದಾನಂದ ಎಂ,ನ್ಯಾಯವಾದಿ ಉದಯ ಹೊನಗುಂಟಿಕರ್, ಶೇಖರ್ ಗಾದಾ, ನರೇಂದ್ರ ಬಡೆಶೇಷಿ ಮತ್ತಿತರರು ಉಪಸ್ಥಿತರಿದ್ದರು.






