ಕಲಬುರಗಿ | ಡಾ.ಶ್ರೀದೇವಿ ಕಲ್ಯಾಣ್ ರಿಗೆ ರಾಷ್ಟ್ರಪತಿಯಿಂದ ರಾಷ್ಟ್ರೀಯ ಉತ್ತಮ ಶಿಕ್ಷಕಿ ಪ್ರಶಸ್ತಿ ಪ್ರದಾನ

ಕಲಬುರಗಿ: ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯದ, ಉನ್ನತ ಶಿಕ್ಷಣ ಇಲಾಖೆಯು ನೀಡುವ 2025ರ ರಾಷ್ಟ್ರೀಯ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಕಲಬುರಗಿಯ ಡಾ.ಶ್ರೀದೇವಿ ಕಲ್ಯಾಣ್ ಅವರು ಇಂದು ಹೊಸದಿಲ್ಲಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿ ಸ್ವೀಕರಿಸಿದರು.
ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ಶ್ರೀದೇವಿ ಕಲ್ಯಾಣ್ ಯವರಿಗೆ 50,000 ರೂ. ನಗದು ಮತ್ತು ಬೆಳ್ಳಿ ಪದಕವನ್ನು ಹೊಂದಿರುವ ಪ್ರಶಸ್ತಿಯನ್ನು ರಾಷ್ಟ್ರಪತಿ ಪ್ರದಾನ ಮಾಡಿದರು. ಈ ವೇಳೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಉಪಸ್ಥಿತರಿದ್ದರು.
ನಗರದ ಶರಣಬಸವ ವಿಶ್ವವಿದ್ಯಾಲಯದ ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದಲ್ಲಿ ಗಣಿತಶಾಸ್ತ್ರದ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ.ಶ್ರೀದೇವಿ ಕಲ್ಯಾಣ್, 2025ನೇ ಸಾಲಿನ ರಾಷ್ಟ್ರೀಯ ಉತ್ತಮ ಶಿಕ್ಷಕಿಯಾಗಿ ಆಯ್ಕೆಯಾಗಿದ್ದರು.
ಕರ್ನಾಟಕದಿಂದ ಶ್ರೀದೇವಿ ಸೇರಿದಂತೆ ಉಡುಪಿಯ ಮಣಿಪಾಲ ತಂತ್ರಜ್ಞಾನ ಸಂಸ್ಥೆಯ ಡಾ.ಶೋಭಾ ಎಂ. ಇ. ಮತ್ತು ಬೆಂಗಳೂರಿನ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ನ ಪ್ರೊ. ಶ್ರೀವರ್ಧಿನಿ ಕೇಶವಮೂರ್ತಿ ಝಾ ಅವರಿಗೂ ಪ್ರಶಸ್ತಿ ಪ್ರದಾನ ಮಾಡಲಾಗಿದೆ.







