ಕಲಬುರಗಿ | ಸಮಾಜ ಸುಧಾರಣೆಗೆ ಹೋರಾಡುತ್ತಿರುವ ಸರ್ವೋನ್ನತ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ : ಕಮಕನೂರು

ಕಲಬುರಗಿ : ಬುದ್ಧ, ಬಸವ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಗಳಿಂದ ಪ್ರಭಾವಿತರಾದ ದೇಶದ ಸರ್ವೋನ್ನತ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಉನ್ನತ ಸ್ಥಾನದಲ್ಲಿದ್ದು, ಸಮಾಜ ಸುಧಾರಣೆಗಾಗಿ ಹೋರಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು ಅಭಿಪ್ರಾಯಪಟ್ಟರು.
ಪಾಲಿ ಇನಸ್ಟಿಟ್ಯೂಟ್, ನಳಂದ ಆವರಣ ಹಾಗೂ ಸಪ್ನ ಬುಕ್ ಹೌಸ್ ಬೆಂಗಳೂರು ಇವರ ಸಹಯೋಗದಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಆಯೋಜಿಸಿದ ಪ್ರೊ.ಎಚ್.ಟಿ ಪೋತೆ ಅವರ ಸವೋನ್ನತ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ ಅವರ ಪ್ರವಾಸಿಗರು ಕಂಡ ಬೌದ್ಧ ಸಂಸ್ಕೃತಿ ಗ್ರಂಥಗಳ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ದೇವಸ್ಥಾನದ ಮುಂದೆ ಸಾಲುಗಟ್ಟುವುದಕ್ಕಿಂತ ಗ್ರಂಥಾಲಯದ ಮುಂದೆ ಸರದಿ ನಿಂತಾಗ ಜಗತ್ತೇ ಗೌರವಿಸುತ್ತದೆ. ಖರ್ಗೆ ಅವರ ವಿಚಾರಗಳು ಮತ್ತು ಹೋರಾಟದ ಬದುಕನ್ನು ಅರ್ಥಮಾಡಿಕೊಳ್ಳಬೇಕಿದೆ. ಖರ್ಗೆ ಅವರು 1976ರಲ್ಲಿ ಶಿಕ್ಷಣ ಸಚಿವರಿದ್ದಾಗ 18 ಸಾವಿರ ಬ್ಯಾಕ್ಲಾಗ್ ಹುದ್ದೆಗಳನ್ನು ನೇಮಕ ಮಾಡಿರುವುದು ಹಿಂದುಳಿದ ಸಮುದಾಯ ಸ್ಮರಿಸಿಕೊಳ್ಳಬೇಕು ಎಂದರು.
ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ಪ್ರಾಧ್ಯಾಪಕ ಪ್ರೊ.ಕಾ.ವೆಂ.ಶ್ರೀನಿವಾಸ ಮೂರ್ತಿ ಎರಡು ಕೃತಿಗಳನ್ನು ಕುರಿತು ಮಾತನಾಡಿ, ಪ್ರೊ.ಎಚ್.ಟಿ ಪೋತೆ ಅವರು ಖರ್ಗೆ ಅವರ ನ್ಯಾಯ, ಸ್ವಾಬಿಮಾನ ಮತ್ತು ಹೋರಾಟದ ಸಾಂಗತ್ಯಗಳನ್ನು ಬರೆದಿದ್ದಾರೆ. ಒಬ್ಬ ಸಾಮಾನ್ಯ ವ್ಯಕ್ತಿ ಹೋರಾಟದ ಮೂಲಕ ಅತ್ಯುನ್ನತ ಸ್ಥಾನ ಪಡೆಯಲು ಹೋರಾಟಗಳ ಹಿನ್ನಲೆಗಳನ್ನು ಕಟ್ಟಿಕೊಟ್ಟಿದ್ದಾರೆ. ಖರ್ಗೆ ಅವರ ಕುರಿತ ಕವನ, ಕಥೆ, ಕಾದಂಬರಿ ಮತ್ತು ಆತ್ಮಕಥೆಗಳಲ್ಲಿ ಖರ್ಗೆ ಅವರ ಜೀವನ ಸಾಧನೆಗಳನ್ನು ರಾಜ್ಯದ ವಿವಿಧ ಬರಹಗಾರರು ಅಕ್ಷರಕ್ಕಿಳಿಸಿದ್ದಾರೆ. ಸಮಜಕ್ಕಾಗಿ ಮತ್ತು ಶೋಷಿತರ ಬದುಕಿಗೆ ಧ್ವನಿಯಾದವರ ಕುರಿತು ನ್ಯಾಯಮೂರ್ತಿ ಶಿವರಾಜ್ ಪಾಟೀಲ್, ದಲಿತ ಕವಿ ಸಿದ್ದಲಿಂಗಯ್ಯ, ಬರಗೂರು ರಾಮಚಂದ್ರಪ್ಪ, ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ, ಪೋತೆ ಅವರ ಸೃಜನಶೀಲ ಬರಹಗಳಲ್ಲಿ ಖರ್ಗೆ ಅವರ ವ್ಯಕ್ತಿತ್ವವನ್ನು ಕಂಡರಿಸಿದ್ದಾರೆ.
ಪಾಲಿ ಸಂಸ್ಥೆ, ಬುದ್ಧ ವಿಹಾರ, 371ಜೆ ಕುರಿತು ಬರೆದಿರುವ ಲೇಖನಗಳಲ್ಲಿ ಸ್ವಾರಸ್ಯಕರ ಸಂಗತಿಗಳು ಅರಳಿವೆ. ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ ಅವರ ‘ಪ್ರವಾಸಿಗರು ಕಂಡ ಬೌದ್ಧ ಸಂಸ್ಕೃತಿ’ ಕೃತಿಯಲ್ಲಿ ಭಾರತ ಪ್ರವಾಸ ಕೈಗೊಂಡ ವಿದೇಶಿ ಪ್ರವಾಸಿಗರು ಭಾರತ ಮತ್ತು ಬೌದ್ಧ ಸಂಸ್ಕೃತಿಯ ನೈಜ ಘಟನೆಗಳನ್ನು ದಾಖಲಿಸಿದ್ದಾರೆ. ಬುದ್ಧ ಮತ್ತು ಬೌದ್ಧ ಧರ್ಮ ಅಧ್ಯಯನ ಮಾಡಲು ವಿದೇಶಗಳ ಅನೇಕ ಸಂತರು, ದಾರ್ಶನಿಕರು ಭಾರತಕ್ಕೆ ಬಂದಿದ್ದಾರೆ. ಸಮುದ್ರ, ಪರ್ವತಗಳಿದ್ದರು ಮುಕ್ತವಾಗಿ ಉತ್ತರ ದಿಕ್ಕಿಗೆ ತೆರೆದುಕೊಂಡ ಭಾರತದಲ್ಲಿ ಸುಮಾರು ವರ್ಷಗಳಿದ ಆರೋಗ್ಯಕರ ಗಾಳಿ ಬೀಸುತ್ತಿದೆ ಎಂದು ತಿಳಿಸಿದರು.
ಕಲಬುರಗಿ ರಂಗಾಯಣದ ನಿಕಟಪೂರ್ವ ನಿರ್ದೇಶಕ ಪ್ರಭಾಕರ ಜೋಶಿ ಮುಖ್ಯ ಅತಿಥಿಯಾಗಿ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆಯವರು ಸರಳತೆ ಮತ್ತು ವ್ಯಕ್ತಿತ್ವ ಎಲ್ಲರಿಗೂ ಆದರ್ಶ. ಅವರ ನಿಷ್ಠತೆ ಮತ್ತು ಬದ್ಧತೆ ಅವರನ್ನು ಉನ್ನತ ನಾಯಕನ ಪಟ್ಟದವರೆಗೂ ಬೆಳೆಸಿದೆ. ಸೇಡಂ ಪ್ರೆಸ್ ಕ್ಲಬ್ ಉದ್ಘಾಟನೆಗೆ ಬಂದಿದ್ದ ಖರ್ಗೆ ಅವರು, ಪತ್ರಕರ್ತರಿಗೂ ಸಹ ಎಜುಕೇಟ್ ಮಾಡುವ ಸಾಮರ್ಥ್ಯವನ್ನು ಬಲ್ಲವರಾಗಿದ್ದಾರೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಬಗೆ ಅವರಿಗೆ ಅಪಾರ ಕಳಕಳಿಯಿದೆ. ಅವರ ಕುರಿತು ಕೃತಿ ಹೊರತಂದಿರುವ ಪ್ರೊ.ಹೆಚ್.ಟಿ.ಪೋತೆಯವರಿಗೆ ಕೃತಜ್ಞತೆ ಹೇಳಿದರು.
ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ಎಚ್.ಟಿ.ಪೋತೆ, ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕನ್ನಡ ಅಧ್ಯಯನ ಸಂಸ್ಥೆ ಅತಿಥಿ ಉಪನ್ಯಾಸಕರು, ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು, ಶಿಕ್ಷಕೇತರ ಸಿಬ್ಬಂದಿಗಳು, ನಗರದ ನಾಗರೀಕರು ಭಾಗವಹಿಸಿದ್ದರು. ಡಾ.ಎಂ.ಬಿ.ಕಟ್ಟಿ ಸ್ವಾಗತಿಸಿದರು. ಡಾ.ಪ್ರೇಮ ಅಪಚಂದ ನಿರೂಪಿಸಿದರು.