Kalaburagi | ಸಂಭ್ರಮದ ಹಾಲುಗಂಬ ಉತ್ಸವ

ಕನಕಗಿರಿ: ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಐತಿಹಾಸಿಕ ಪ್ರಸಿದ್ಧ ಕನಕಾಚಲಪತಿ ದೇವಸ್ಥಾನದ ಆವರಣದಲ್ಲಿ ಶನಿವಾರ ರಾತ್ರಿ ಹಾಲುಗಂಬ ಉತ್ಸವ ವಿಜೃಂಭಣೆಯಿಂದ ನಡೆಯಿತು. ಸಾವಿರಾರು ಭಕ್ತರು ಹಾಗೂ ಸಾರ್ವಜನಿಕರು ಉತ್ಸವವನ್ನು ಕಣ್ತುಂಬಿಕೊಂಡರು.
ಉತ್ಸವದ ಅಂಗವಾಗಿ ಅರ್ಚಕ ಮನೆತನದವರು ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಪಟ್ಟಣ ಸೇರಿದಂತೆ ಬಂಕಾಪುರ, ಗುಡದೂರ, ಕರಡಿಗುಡ್ಡ, ಚಿಕ್ಕಮಾದಿನಾಳ, ಉಮಳಿ, ಕಾಟಾಪುರ ಹಾಗೂ ಹಿರೇಮಾದಿನಾಳ ಗ್ರಾಮಗಳ ಯಾದವ (ಗೊಲ್ಲ) ಸಮುದಾಯದವರು ಸಂಪ್ರದಾಯಬದ್ಧವಾಗಿ ಹಾಲುಗಂಬ ಉತ್ಸವ ಆಚರಿಸಿದರು.
ಗೊಲ್ಲ ಸಮುದಾಯದವರು ಹಲವು ದಿನಗಳಿಂದ ಸಂಗ್ರಹಿಸಿದ್ದ ಹಾಲು, ಮೊಸರು ಹಾಗೂ ತುಪ್ಪವನ್ನು ಮಡಿಕೆಗಳಲ್ಲಿ ತುಂಬಿಕೊಂಡು ಎದುರು ಹನುಮಪ್ಪ ದೇವಸ್ಥಾನದ ಆವರಣದಲ್ಲಿ ಜಮಾಯಿಸಿದರು. ಇದಕ್ಕೂ ಮುನ್ನ ಅಶ್ವರೋಹಣ ಉತ್ಸವ ನೆರವೇರಿತು.
ಹಾಲುಗಂಬಕ್ಕೆ ಜಿಡ್ಡುಗಟ್ಟಿದ ಪದಾರ್ಥಗಳು ಹಾಗೂ ಹೈನು ಉತ್ಪನ್ನಗಳನ್ನು ಲೇಪಿಸಲಾಗಿತ್ತು. ಕಂಬದ ಮೇಲಿದ್ದ ವ್ಯಕ್ತಿಯೊಬ್ಬ ಹಾಲು-ಮೊಸರು ಮಿಶ್ರಿತ ಹೈನು ಪದಾರ್ಥವನ್ನು ಕಂಬದ ಮೇಲೆ ಸುರಿಯುತ್ತಿದ್ದಂತೆ ಯುವಕರು ಕಂಬ ಏರಲು ಹರಸಾಹಸ ಪಟ್ಟರು. ಈ ದೃಶ್ಯ ಉತ್ಸವದ ಪ್ರಮುಖ ಆಕರ್ಷಣೆಯಾಗಿದ್ದು, ನೆರೆದಿದ್ದ ಭಕ್ತರ ಗಮನ ಸೆಳೆಯಿತು.
ಉತ್ಸವದಲ್ಲಿ ತಾಲೂಕಿನ ವಿವಿಧ ಗ್ರಾಮಗಳ ಯಾದವ (ಗೊಲ್ಲ) ಸಮುದಾಯದ ಮುಖಂಡರು, ಮಹಿಳೆಯರು ಹಾಗೂ ಸಾವಿರಾರು ಭಕ್ತರು ಭಾಗವಹಿಸಿದ್ದರು.






