ಕಲಬುರಗಿ | ಅಜಿತ್ ಪವಾರ್ ನಿಧನಕ್ಕೆ ಮಾಜಿ ಸಂಸದ ಉಮೇಶ್ ಜಾಧವ್ ಸಂತಾಪ

ಕಲಬುರಗಿ: ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ವಿಮಾನ ಅಪಘಾತದಲ್ಲಿ ಮರಣ ಹೊಂದಿರುವ ವಿಷಯ ಮನಸ್ಸಿಗೆ ತುಂಬಾ ಆಘಾತ ಉಂಟುಮಾಡಿದೆ ಎಂದು ಮಾಜಿ ಸಂಸದ ಉಮೇಶ್ ಜಾಧವ್ ಸಂತಾಪ ಸೂಚಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪವಾರ್ ಅವರು ಮಹಾರಾಷ್ಟ್ರದಲ್ಲಿರುವ ಬಂಜಾರಾ ಸಮಾಜದ ಇಂದ್ರನಿಲ್ ನಾಯಕ್ ಅವರನ್ನು ಮಂತ್ರಿ ಮಾಡಿದ ಕೊಡುಗೆಯ ಋಣವನ್ನು ಸಮಾಜವು ಎಂದಿಗೂ ಮರೆಯುವುದಿಲ್ಲ. ಬಂಜಾರಾ ಸಮಾಜದ ಕಲ್ಯಾಣಕ್ಕಾಗಿ ಶ್ರಮ ಪಟ್ಟಿರುವ ಅಜಿತ್ ಪವಾರ್ ಅವರನ್ನು ಕಳೆದುಕೊಂಡು ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದ್ದಾರೆ.
ಬಾರಾಮತಿಯ ರಾಜಕೀಯ ಧುರೀಣ ಅಜಿತ್ ಪವಾರ್ ಮಹಾರಾಷ್ಟ್ರ ರಾಜ್ಯದಲ್ಲಿ ದೊಡ್ಡ ರಾಜಕೀಯ ಶಕ್ತಿಯಾಗಿ ಮಹಾನ್ ಕೊಡುಗೆ ನೀಡಿ ಸ್ಮರಣೀಯರಾಗಿದ್ದಾರೆ. ಎನ್ ಡಿಎ ಅಂಗ ಪಕ್ಷವಾಗಿ ರಾಜ್ಯವನ್ನು ಅಭಿವೃದ್ಧಿಯಲ್ಲಿ ಮುಂಚೂಣಿಗೆ ತರುವಲ್ಲಿ ಇವರ ಪಾತ್ರ ಮಹತ್ತರವಾದುದು. ಅಗಲಿದ ಅವರ ಆತ್ಮಕ್ಕೆ ಪರಮಾತ್ಮನು ಚಿರ ಶಾಂತಿ ಕರುಣಿಸಲಿ ಹಾಗೂ ಕುಟುಂಬದವರಿಗೆ ಅಗಲುವಿಕೆಯ ದುಃಖ ಸಹಿಸುವ ಶಕ್ತಿಯನ್ನು ನೀಡಲಿ ಎಂದು ಜಾಧವ್ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.





