ಕಲಬುರಗಿ | ಶ್ರೋತೃಗಳ ಮನ ಆಕರ್ಷಿಸಿದ 'ಗಾನ ಘಮಲು'
ಬಹುತ್ವ ಸಂಸ್ಕೃತಿ ಭಾರತೋತ್ಸವದ ಎರಡನೇ ದಿನದ ಕಾರ್ಯಕ್ರಮ ಯಶಸ್ವಿ

ಕಲಬುರಗಿ: ಬಹುತ್ವ ಸಂಸ್ಕೃತಿ ಭಾರತೋತ್ಸವದ ಎರಡನೇ ದಿನದ ಪ್ರಯುಕ್ತ ಶನಿವಾರ ಸಂತ ಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ ಬೆಂಗಳೂರು, ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಮತ್ತು ರಂಗಾಯಣ ಕಲಬುರಗಿಯ ಸಹಕಾರದಲ್ಲಿ 'ತತ್ವಪದ ಗಾಯನ ಸಮಾವೇಶ' ಮತ್ತು 'ಗಾನ ಘಮಲು' ವಿಶೇಷ ಕಾರ್ಯಕ್ರಮದಲ್ಲಿ ತತ್ವಪದ, ವಚನ, ಖವ್ವಾಲಿ ಮತ್ತಿತರ ಕಲಾ ಪ್ರಕಾರಗಳ ಗಾಯನಗಳು ಶ್ರೋತೃಗಳ ಮನವನ್ನು ಆಕರ್ಷಣೆ ಮಾಡಿದವು.
ಕಾರ್ಯಕ್ರಮದಲ್ಲಿ ಶಿಶುನಾಳ ಶರೀಫರ ಪದಗಳು, ಕಡಕೋಳ ಮಡಿವಾಳಪ್ಪ ಅವರ ತತ್ವಪದಗಳು, ವಚನ, ಖವ್ವಾಲಿ ಗೀತಗಾಯನ, ಶಿವ ಭಜನೆ ಸೇರಿದಂತೆ ಇತರೆ ಗೀತಗಾಯನಗಳು ಯಶಸ್ವಿಯಾಗಿ ನಡೆದವು.
ಕಲಬುರಗಿಯ ಅಬ್ದುಲ್ ರೌಫ್ ಗನಿ ಬಂದೇನವಾಜ್ ತಂಡದಿಂದ ಖವ್ವಾಲಿ ನಡೆಸಿಕೊಟ್ಟರು. ವಿಜಯಪುರ ಮೂಲದ ಬಸವೇಶ್ವರ ಭಜನಾ ಮಂಡಳಿಯಿಂದ ಶರೀಫರ, ಮಡಿವಾಳಪ್ಪ ನವರ ಪದಗಳು, ರಾಯಚೂರು ಮೂಲದ ಕಲಾವಿದರಿಂದ ಕೂಡಲೂರು ಬಸಲಿಂಗಪ್ಪನ ಪದಗಳು, ಅಫಜಲಪುರ ತಾಲ್ಲೂಕಿನ ಕಲಾವಿದರಿಂದ ರಾಮಪೂರದ ಬಕ್ಕಪ್ಪಯ್ಯನ ಪದಗಳು, ಕಲಬುರಗಿಯ ಸಂಗೀತ ಕಲಾವಿದ ಸಿದ್ಧಾರ್ಥ್ ಚಿಮ್ಮಾ ಇದಲಾಯಿ ಮತ್ತು ಅವರ ತಂಡದಿಂದ ವಚನ, ತತ್ವಪದ ಗಾಯನಗಳು ಜರುಗಿದವು. ಮೇಘಾ ಚಿಚಕೋಟಿ ವಚನ ಗಾಯನ ನಡೆಸಿದರು.
ಇದಕ್ಕೂ ಮುನ್ನ ನಡೆದ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಕಲಬುರಗಿ ರಂಗಾಯಣ ನಿರ್ದೇಶಕಿ ಡಾ.ಸುಜಾತಾ ಜಂಗಮಶೆಟ್ಟಿ, ರಂಗಾಯಣ ಅಧಿಕಾರಿ ಜಗದೇಶ್ವರಿ ಶಿವಕೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ್, ಬಹಮನಿ ಫೌಂಡೇಶನ್ ಮುಖಂಡ ರಿಜ್ವಾನ್ ಸಿದ್ದಿಕಿ, ಮಳಖೇಡ ದರ್ಗಾದ ಪೀಠಾಧಿಪತಿ, ರಂಗಾಯಣ ಮಾಜಿ ನಿರ್ದೇಶಕ ಆರ್.ಕೆ.ಹುಡಗಿ, ಮೀನಾಕ್ಷಿ ಬಾಳಿ ಮತ್ತಿತರರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಕೆ.ನೀಲಾ, ಅಲ್ಲಮಪ್ರಭು ಬೆಟ್ಟದೂರು, ದತ್ತಾತ್ರೇಯ ಇಕ್ಕಳಕಿ, ಪ್ರಭು ಖಾನಾಪುರೆ, ಅಬ್ದುಲ್ ಖಾದರ್, ಅಬ್ದುಲ್ ರಹೀಂ, ಡಿ.ಎಂ ನದಾಫ್, ಶ್ರೀಶೈಲ ಘೂಳಿ, ಶರಣಬಸಪ್ಪ ಮಮಶೆಟ್ಟಿ, ಕೋದಂಡರಾಮ, ಪದ್ಮ ಪಾಟೀಲ್, ಪದ್ಮಿನಿ ಕಿರಣಗಿ, ಫಾತೀಮಾ ಶೇಖ್, ಚಂದಮ್ಮ ಗೋಳಾ, ಪ್ರಿಯಾಂಕ್ ಮಾವಿನಕರ್, ವಿಕ್ರಂ ತೇಜಸ್, ಡಾ.ಸಂಗನಗೌಡ ಹಿರೇಗೌಡ, ಲವಿತ್ರ ವಸ್ತ್ರದ್, ಸಲ್ಮಾನ್ ಖಾನ್, ಸುಜಾತಾ, ನಾಗೇಶ್ ಹರಳಯ್ಯ, ದಿಲಶ್ಯದ್ ಸೇರಿದಂತೆ ಹಲವಾರು ಉಪಸ್ಥಿತರಿದ್ದರು.







