Kalaburagi | ಕಿರುಕುಳ ಆರೋಪ : 4 ತಿಂಗಳ ಗರ್ಭಿಣಿ ಆತ್ಮಹತ್ಯೆ

ಕಲಬುರಗಿ : ಪ್ರೀತಿಸಿ ಮದುವೆಯಾದ ಪತ್ನಿಗೆ ನಿರಂತರ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿದ ಪರಿಣಾಮ ಮನನೊಂದ ನಾಲ್ಕು ತಿಂಗಳ ಗರ್ಭಿಣಿಯೊಬ್ಬರು ತವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿ ತಾಲೂಕಿನ ಔರಾದ್ (ಬಿ) ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಗ್ರಾಮದ ನಿವಾಸಿ ಶೃತಿ ಗಂಡ ಗೋಪಾಲಸಿಂಗ್ ತಿವಾರಿ (24) ಎಂದು ಗುರುತಿಸಲಾಗಿದೆ.
ಶೃತಿ ಹಾಗೂ ಗೋಪಾಲ್ ಇಬ್ಬರೂ ಎರಡು ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು. ಆದರೆ ಮದುವೆಯಾದ ಮೂರು ತಿಂಗಳಲ್ಲೇ ಗೋಪಾಲ್ ಕುಡಿತ, ಜೂಜಾಟ ಸೇರಿದಂತೆ ಹಲವು ದುಶ್ಚಟಗಳಿಗೆ ಒಳಗಾಗಿದ್ದು, ತನ್ನ ಜಮೀನನ್ನೂ ಮಾರಾಟ ಮಾಡಿದ್ದಾನೆ ಎನ್ನಲಾಗಿದೆ. ಅಲ್ಲದೆ ದುಶ್ಚಟಗಳಿಗಾಗಿ ಸುಮಾರು 3 ಲಕ್ಷ ರೂ. ಸಾಲ ಮಾಡಿಕೊಂಡಿದ್ದನು ಎಂದು ತಿಳಿದುಬಂದಿದೆ.
ಸಾಲ ತೀರಿಸಲು ತಾವು ವಾಸವಾಗಿದ್ದ ಮನೆಯನ್ನು ಮಾರಾಟ ಮಾಡಲು ಗೋಪಾಲ್ ಮುಂದಾಗಿದ್ದನು. ಆದರೆ ಪತ್ನಿ ಶೃತಿ ಸಹಿ ಹಾಕಲು ನಿರಾಕರಿಸಿದ್ದರಿಂದ ಆಕ್ರೋಶಗೊಂಡ ಆತ, ಆಕೆಗೆ ಹಲ್ಲೆ ನಡೆಸಿ, ಕೊರಳಿನಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಕ್ರೌರ್ಯ ಮೆರೆದಿದ್ದಾನೆ ಎಂದು ಆರೋಪಿಸಲಾಗಿದೆ.
ಗಂಡನ ದೌರ್ಜನ್ಯದಿಂದ ಬೇಸತ್ತ ಶೃತಿ ಕಳೆದ 15 ದಿನಗಳ ಹಿಂದೆ ಔರಾದ್ (ಬಿ) ಗ್ರಾಮದಲ್ಲಿರುವ ತನ್ನ ತವರು ಮನೆಗೆ ಬಂದು ವಾಸವಾಗಿದ್ದರು. ಬುಧವಾರ ಶೃತಿ ಇದ್ದ ಮನೆಗೆ ಬಂದ ಗೋಪಾಲ್ ಮತ್ತೆ ಗಲಾಟೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ಇದರಿಂದ ಮನನೊಂದ ಶೃತಿ, ಬುಧವಾರ ರಾತ್ರಿ ತವರು ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನೆ ಬಳಿಕ ತಲೆಮರೆಸಿಕೊಳ್ಳಲು ಯತ್ನಿಸುತ್ತಿದ್ದ ಆರೋಪಿ ಗೋಪಾಲ್ನನ್ನು ಮಹಿಳಾ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.






