ಕಲಬುರಗಿ | ಅನುದಾನಿತ ಪದವಿ ಪೂರ್ವ ಕಾಲೇಜುಗಳ ಸಮಸ್ಯೆಗಳನ್ನು ಬಗೆಹರಿಸಲು ಐ.ಕೆ.ಪಾಟೀಲ್ ಆಗ್ರಹ

ಕಲಬುರಗಿ: ಕರ್ನಾಟಕ ರಾಜ್ಯದ ಅನುದಾನಿತ ಪದವಿ ಪೂರ್ವ ಕಾಲೇಜುಗಳ ಸಿಬ್ಬಂದಿಗಳು ಅನೇಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಪದವಿಪೂರ್ವ ಕಾಲೇಜುಗಳ ವಿವಿಧ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕು ಎಂದು ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆಯ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಐ.ಕೆ.ಪಾಟೀಲ್ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈಗಾಗಲೇ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರಿಗೆ ಸಂಘಟನೆಯಿಂದ ಮನವಿ ಸಲ್ಲಿಸಲಾಗಿದೆ, ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ 2015 ರಿಂದ ಖಾಲಿಯಾಗಿರುವ ಯಾವ ಹುದ್ದೆಗಳಿಗೂ ಅನುದಾನ ನೀಡುತ್ತಿಲ್ಲ, ಹೀಗಾಗಿ ಖಾಲಿಯಾಗಿರುವ ಹುದ್ದೆಗಳು ಖಾಲಿಯಾಗಿಯೇ ಉಳಿದಿವೆ. ಉಪನ್ಯಾಸಕರಿಲ್ಲದ ಒಂದು ಎರಡು ವಿಷಯಗಳಲ್ಲಿ ವಿದ್ಯಾರ್ಥಿಗಳು ಫೇಲಾಗಿ ಇಡಿ ಕಾಲೇಜಿನ ಫಲಿತಾಂಶ ಹಾಗೂ ಜಿಲ್ಲೆಯ ಫಲಿತಾಂಶದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಇದರಿಂದಾಗಿ ಸರಿಯಾಗಿ ಕಾರ್ಯನಿರ್ವಹಿಸಿದ ಉಪನ್ಯಾಸಕರಿಗೂ ಹಿನ್ನಡೆಯಾಗುತ್ತಿದೆ.
ಮೇಲಾಗಿ ಅಧಿಕಾರಿಗಳು ದಿನಕ್ಕೊಂದು ಆದೇಶ ಹೊರಡಿಸಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಉಪನ್ಯಾಸಕರಿಗೆ ಹಾಗೂ ಸಿಬ್ಬಂದಿಗಳಿಗೆ ಆತಂಕದಲ್ಲಿ ಕಾರ್ಯನಿರ್ವಹಿಸುವಂತೆ ಮಾಡುತ್ತಿದ್ದಾರೆ. ಇದು ಅವರ ಪಾಠ ಪ್ರವಚನಗಳ ಮೇಲೆ ಹಾಗೂ ಪರೀಕ್ಷಾ ಫಲಿತಾಂಶದ ಮೇಲೂ ಕೆಟ್ಟ ಪ್ರಭಾವ ಬೀರುತ್ತಿದೆ ಎಂದಿದ್ದಾರೆ.
ರಾಜ್ಯದ ಅನುದಾನಿತ ಪದವಿ ಪೂರ್ವ ಕಾಲೇಜುಗಳ ಪ್ರಾಂಶು ಪಾಲರು, ಉಪನ್ಯಾಸಕರನ್ನು ಮತ್ತು ಭೋದಕೇತರ ಸಿಬ್ಬಂದಿಗಳಿಗೆ ಕಡ್ಡಾಯ ಸ್ವಯಂ ನಿವೃತ್ತಿ ಆದೇಶ ಮಾಡಲಾಗಿದೆ. ಕೂಡಲೇ ಸರಕಾರ ಈ ಆದೇಶವನ್ನು ಹಿಂಪಡೆದು ಕಾರ್ಯಭಾರ ಅಧಿಕವಿರುವ ಸರಕಾರಿ ಪದವಿ ಪೂರ್ವ ಕಾಲೇಜುಗಳಿಗೆ, ಮೋರಾರ್ಜಿ, ಕಿತ್ತೂರು ರಾಣಿ ಚನ್ನಮ್ಮ ಮತ್ತು ಆದರ್ಶ ವಿದ್ಯಾಲಯಗಳಿಗೆ ನಿಯೋಜನೆ ಮಾಡಬೇಕು. ಇದರಿಂದ ಸರಕಾರಕ್ಕೆ ಹಣಕಾಸಿನ ತೊಂದರೆಯೂ ಆಗುವುದಿಲ್ಲ. ಸರಕಾರಿ ಸಿಬ್ಬಂದಿಗಳಿಗೆ ಜಾರಿ ಮಾಡುತ್ತಿರುವ ಹಳೆ ಪಿಂಚಣಿ ಯೋಜನೆ, ಆರೋಗ್ಯ ಯೋಜನೆ ಜ್ಯೋತಿ ಸಂಜೀವಿನಿಯನ್ನು, ಹಾಗೂ ಇನ್ನುಳಿದ ಸರಕಾರಿ ನೌಕರರಿಗೆ ಇರುವ ಸೌಲಭ್ಯಗಳನ್ನು ಅನುದಾನಿತ ಸಿಬ್ಬಂದಿಗಳಿಗೆ ಜಾರಿಗೆ ತರುವ ಮೂಲಕ ಸೇವಾ ಭದ್ರತೆ ನೀಡಬೇಕು, ಪ್ರತಿ ತಿಂಗಳು 5ನೇ ತಾರೀಕಿನ ಒಳಗೆ ಕರ್ನಾಟಕ ರಾಜ್ಯದ ಅನುದಾನಿತ ಪದವಿ ಪೂರ್ವ ಕಾಲೇಜುಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ವೇತನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.







