ಕಲಬುರಗಿ | ಆ.29 ರಂದು ಎಲ್ಬಿಕೆ ಆಲ್ದಾಳ್ ಟ್ರಸ್ಟ್ ಉದ್ಘಾಟನೆ, ಪುಸ್ತಕ ಬಿಡುಗಡೆ, ನಾಟಕ ಲೋಕಾರ್ಪಣೆ : ಬಿ.ಎಚ್.ನಿರಗುಡಿ

ಕಲಬುರಗಿ: ಹಿರಿಯ ರಂಗಕರ್ಮಿ ಎಲ್ಬಿಕೆ ಆಲ್ದಾಳ್ ಅವರ ಹೆಸರಿನಲ್ಲಿ ರಚಿಸಿರುವ 'ಎಲ್ಬಿಕೆ ಆಲ್ದಾಳ್ ಟ್ರಸ್ಟ್' ಉದ್ಘಾಟನೆ, ಆಲ್ದಾಳ್ ಕೃತ ಪುಸ್ತಕ ಬಿಡುಗಡೆ, ಪ್ರಶಸ್ತಿ ಪ್ರದಾನ ಹಾಗೂ ನಾಟಕ ಪ್ರದರ್ಶನವನ್ನು ಆ.29 ರಂದು ಬೆಳಿಗ್ಗೆ 10.30ಕ್ಕೆ ನಗರದ ಶರಣಬಸವೇಶ್ವರ ಜಾತ್ರಾ ಮೈದಾನದ ಕಮತಗಿ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಸಹ ಕಾರ್ಯದರ್ಶಿ ಬಿ.ಎಚ್.ನಿರಗುಡಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವಕಲ್ಯಾಣ ಸಂಸ್ಥಾನ ಹಿರೇಮಠದ ಡಾ.ಚನ್ನವೀರ ಶಿವಾಚಾರ್ಯರು, ಶಾಖಾಪುರ ತಪೋವನ ಮಠದ ಡಾ.ಸಿದ್ಧರಾಮ ಆಚಾರ್ಯರು, ಶ್ರೀನಿವಾಸ ಸರಡಗಿ ಸಂಸ್ಥಾನ ಹಿರೇಮಠದ ಡಾ.ರೇವಣಸಿದ್ದ ಶಿವಾಚಾರ್ಯರು, ಸೇಡಂನ ಕೊತ್ತಲಬಸವೇಶ್ವರ ದೇವಸ್ಥಾನದ ಸದಾಶಿವ ಮಹಸ್ವಾಮಿಗಳು, ಅಳ್ಳಳ್ಳಿ ಮಹಾತ್ಮಪೀಠ, ಗದ್ದಿಗೆಮಠದನಾಗಪ್ಪಯ್ಯ ಮಹಾಸ್ವಾಮಿಗಳು ಸಮಾರಂಭದ ಸಾನಿಧ್ಯ ವಹಿಸಲಿದ್ದು, ಕೆಕೆಆರ್ಡಿಬಿ ಅಧ್ಯಕ್ಷ ಹಾಗೂ ಜೇವರ್ಗಿ ಶಾಸಕ ಡಾ.ಅಜಯ್ ಸಿಂಗ್ ಅವರು ಸಮಾರಂಭವನ್ನು ಉದ್ಘಾಟಿಸುವರು ಎಂದರು.
ಈ ವೇಳೆಯಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ ಪ್ರಶಸ್ತಿ ಪ್ರದಾನ ಮಾಡುವರು. ಹಾಫ್ ಕಾಮ್ ಮಾಜಿ ಅಧ್ಯಕ್ಷ ಬಸವರಾಜ ಪಾಟೀಲ ಉಡಗಿ ಪುಸ್ತಕ ಬಿಡುಗಡೆ ಮಾಡುವರು. ಎಲ್ಬಿಕೆ ಅಲ್ಟಾಳ್ ಟ್ರಸ್ಟ್ ಅಧ್ಯಕ್ಷ ಶಿವಯ್ಯ ಸ್ವಾಮಿ ಬಿಬ್ಬಳ್ಳಿ ಅಧ್ಯಕ್ಷತೆ ವಹಿಸುವರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಶಾಸಕ ಬಸವರಾಜ ಮತ್ತಿಮಡು, ಕಾಂಗ್ರೆಸ್ ಮುಖಂಡ ನೀಲಕಂಠರಾವ ಮೂಲಗೆ ಮುಖ್ಯ ಅತಿಥಿಗಳಾಗಿ ಆಗಮಿಸುವರು ಎಂದು ತಿಳಿಸಿದರು.





