Kalaburagi | ಮಧುಮೇಹ ರೋಗಿಗಳಲ್ಲಿ ಪಿಎಡಿ ಅಪಾಯ ಹೆಚ್ಚಳ, ನಿರ್ಲಕ್ಷ್ಯ ಬೇಡ : ಡಾ.ವಿನಯ್ ಕುಮಾರ್

ಕಲಬುರಗಿ : ಮಧುಮೇಹ ರೋಗಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಪೆರಿಫೆರಲ್ ಆರ್ಟೀರಿಯಲ್ ಡಿಸೀಸ್ (ಪಿಎಡಿ) ಕುರಿತು ಎಚ್ಚರಿಕೆ ನೀಡಿರುವ ಯಶೋದಾ ಆಸ್ಪತ್ರೆಯ ಹಿರಿಯ ವಾಸ್ಕುಲರ್ ಮತ್ತು ಎಂಡೋವಾಸ್ಕ್ಯುಲರ್ ಶಸ್ತ್ರಚಿಕಿತ್ಸಕರಾದ ಡಾ. ವಿನಯ್ ಕುಮಾರ್ ಕೆ, ಸಮಯಕ್ಕೆ ಸರಿಯಾಗಿ ಪತ್ತೆಹಚ್ಚದಿದ್ದರೆ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗಬಹುದು ಎಂದು ತಿಳಿಸಿದ್ದಾರೆ.
ನಗರದ ಯಶೋಧ ಮೆಡಿಕಲ್ ಸೆಂಟರ್ನ ವೈಷ್ಣವಿ ಸ್ಕ್ಯಾನಿಂಗ್ ಸೆಂಟರ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಲು ಮತ್ತು ಪಾದಗಳಿಗೆ ರಕ್ತವನ್ನು ಸರಬರಾಜು ಮಾಡುವ ರಕ್ತನಾಳಗಳು ಇಳಿಕೆಯಾಗುವುದು ಅಥವಾ ತಡೆಯಾಗುವುದರಿಂದ ಪಿಎಡಿ ಉಂಟಾಗುತ್ತದೆ ಎಂದು ವಿವರಿಸಿದರು. ಇದರಿಂದ ಕಾಲುಗಳಿಗೆ ರಕ್ತಸಂಚಾರ ಕಡಿಮೆಯಾಗಿ ವಿವಿಧ ತೊಂದರೆಗಳು ಕಾಣಿಸಿಕೊಳ್ಳುತ್ತವೆ ಎಂದರು.
ನಡೆಯುವಾಗ ಕಾಲಿನಲ್ಲಿ ನೋವು, ಕಾಲುಗಳಲ್ಲಿ ದೌರ್ಬಲ್ಯ, ಪಾದಗಳು ತಣ್ಣಗಾಗುವುದು, ಗಾಯಗಳು ತಡವಾಗಿ ಗುಣಮುಖವಾಗುವುದು ಹಾಗೂ ಬೆರಳುಗಳ ಬಣ್ಣ ಬದಲಾವಣೆ ಪಿಎಡಿನ ಪ್ರಮುಖ ಲಕ್ಷಣಗಳಾಗಿವೆ. ವಿಶೇಷವಾಗಿ ಮಧುಮೇಹಿಗಳಲ್ಲಿ ಸಣ್ಣ ಗಾಯಗಳೂ ಗಂಭೀರವಾಗುವ ಸಾಧ್ಯತೆ ಹೆಚ್ಚಿದ್ದು, ನರ ಹಾನಿಯಿಂದ ನೋವು ಅರಿಯದ ಪರಿಸ್ಥಿತಿಯೂ ಉಂಟಾಗಬಹುದು ಎಂದು ಹೇಳಿದರು.
ಕಾಲಿನ ರಕ್ತದೊತ್ತಡ ಪರೀಕ್ಷೆ ಹಾಗೂ ಡಾಪ್ಲರ್ ಸ್ಕ್ಯಾನ್ನಂತಹ ಸರಳ ಪರೀಕ್ಷೆಗಳ ಮೂಲಕ ರೋಗವನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಬಹುದು. ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿ ಇಡುವುದು, ಧೂಮಪಾನದಿಂದ ದೂರವಿರುವುದು ಹಾಗೂ ಪಾದಗಳಲ್ಲಿ ಗಾಯಗಳಿರುವುದನ್ನು ನಿಯಮಿತವಾಗಿ ಪರಿಶೀಲಿಸುವುದರಿಂದ ಗಂಭೀರ ಸಮಸ್ಯೆಗಳನ್ನು ತಡೆಯಬಹುದು ಎಂದು ಸಲಹೆ ನೀಡಿದರು.
ರೋಗದ ತೀವ್ರತೆಗೆ ಅನುಗುಣವಾಗಿ ಔಷಧ ಚಿಕಿತ್ಸೆ ಮತ್ತು ಆಂಜಿಯೋಪ್ಲಾಸ್ಟಿ ಸೇರಿದಂತೆ ವಿವಿಧ ಚಿಕಿತ್ಸೆಗಳು ಲಭ್ಯವಿದ್ದು, ಸಮಯಕ್ಕೆ ಸರಿಯಾದ ಚಿಕಿತ್ಸೆ ಪಡೆದರೆ ಅಂಗವಿಚ್ಛೇದನದಂತಹ ಗಂಭೀರ ಪರಿಸ್ಥಿತಿಯನ್ನು ತಪ್ಪಿಸಬಹುದು ಎಂದು ತಿಳಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಕೇಶವ್ ಕುಲಕರ್ಣಿ, ಸತೀಶ್ ಸಿ.ಎಚ್. ಇದ್ದರು.






