ಕಲಬುರಗಿ | ಹಸಿ ಬರಗಾಲ ಘೋಷಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳಿಂದ ಅನಿರ್ಧಿಷ್ಟಾವಧಿ ಧರಣಿ ಆರಂಭ

ಕಲಬುರಗಿ : ಅತಿವೃಷ್ಟಿಯಿಂದ ಹಾನಿಗೀಡಾದ ಕಲಬುರಗಿ ಜಿಲ್ಲೆಯನ್ನು ಹಸಿ ಬರಗಾಲ ಎಂದು ಘೋಷಣೆ ಮಾಡುವುದು ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ, ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಕಲಬುರಗಿ ಆಶ್ರಯದಲ್ಲಿ ರೈತ, ದಲಿತ, ಕನ್ನಡ, ಕಾರ್ಮಿಕ, ಮಹಿಳಾ ಸಂಘಟನೆಗಳ ಬೆಂಬಲದೊಂದಿಗೆ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಲಾಯಿತು.
ನೆರೆ ಹಾವಳಿಯಿಂದಾಗಿ ತತ್ತರಿಸಿದ ಈ ಭಾಗವನ್ನು ಕೂಡಲೇ ಹಸಿ ಬರಗಾಲ ಎಂದು ಘೋಷಿಸಿ, ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡಬೇಕು, ರೈತರ ಸಾಲ ಮನ್ನಾ ಮಾಡುವುದು, ಸಮೀಕ್ಷೆ ಮಾಡುವುದಕ್ಕಿಂತ ಮೊದಲು ತಕ್ಷಣವೇ ರೈತರಿಗೆ ಪರಿಹಾರ ನೀಡಬೇಕು, ಹಿಂಗಾರು ಬಿತ್ತನೆಗಾಗಿ ಉಚಿತ ಬೀಜ, ರಸಗೊಬ್ಬರಗಳನ್ನು ವಿತರಿಸಬೇಕೆಂದು ಆಗ್ರಹಿಸಿದರು.
ನದಿಗಳ ನೀರಿನಿಂದ ಮುಳುಗಡೆ ಪ್ರದೇಶಗಳ ಪ್ರವಾಹ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಕೊಡಿ, ಮನೆ ಕಳೆದುಕೊಂಡವರಿಗೆ ಹೊಸ ಮನೆ ಕಟ್ಟಿಸುವುದು, ಕೆಲವು ಗ್ರಾಮಸ್ಥರ ಒತ್ತಾಯದ ಮೇರೆಗೆ ಗ್ರಾಮಗಳ ಸ್ಥಳಾಂತರ ಮಾಡಬೇಕು, ಖಾಸಗಿ ಶಿಕ್ಷಣ ಸಂಸ್ಥೆಗಳು ಶಾಲಾ ಕಾಲೆಜುಗಳ 2ನೇ ಕಂತಿನ ಶುಲ್ಕ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಶರಣಬಸಪ್ಪ ಮಮಶೆಟ್ಟಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಭಾಗವನ್ನು ಹಸಿ ಬರಗಾಲ ಘೋಷಣೆ ಮಾಡಿ, ರೈತರ ಪರ ನಿಲ್ಲಬೇಕು, ತಕ್ಷಣದ ಪರಿಹಾರ ರೈತರ ಖಾತೆಗೆ ಜಮೆ ಮಾಡಬೇಕು. ಗಾಂಧಿ ಜಯಂತಿ ನಿಮಿತ್ತ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಲಾಗಿದ್ದು, ಇದು ಶುಕ್ರವಾರದಿಂದ ಅಹೋರಾತ್ರಿ ಧರಣಿಯ ಮೂಲಕ ಉಗ್ರ ರೂಪಕ್ಕೆ ಹೋಗಲಿದೆ, ಬರುವ ಅ.13ರ ಒಳಗಾಗಿ ಸೂಕ್ತ ಬೇಡಿಕೆಗಳನ್ನು ಈಡೇರಿಸದೇ ಇದ್ದರೆ ' ಕಲಬುರಗಿ ಬಂದ್' ಮಾಡಲಿದ್ದೇವೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ದಯಾನಂದ ಪಾಟೀಲ್, ಮೌಲಾ ಮುಲ್ಲಾ, ಭೀಮಾಶಂಕರ ಮಾಡ್ಯಾಳ, ಉಮಾಪತಿ ಪಾಟೀಲ್, ದಿಲೀಪ್ ನಾಗೂರೆ, ಪದ್ಮಿನಿ ಕಿರಣಗಿ, ಆದಿನಾಥ ಹೀರಾ, ಜಗದೇವಿ ಹೆಗಡೆ, ಭೀಮಶೆಟ್ಟಿ ಯಂಪಳ್ಳಿ, ಎಂ.ಬಿ.ಸಜ್ಜನ್, ಮಲ್ಲಿಕಾರ್ಜುನ್ ಪಾಟೀಲ್, ನಾಗಯ್ಯ ಸ್ವಾಮಿ, ದೇವು ಬಿರಾದಾರ, ಯಶವಂತ ಪಾಟೀಲ್, ಸಾಜಿದ್, ಹಣಮಂತರಾಯ ಅಟ್ಟೂರು, ಸೇರಿದಂತೆ ಮತ್ತಿತರರು ಇದ್ದರು.







