ಕಲಬುರಗಿ | ಗ್ರಾಮಗಳ ಪ್ರವೇಶ ದ್ವಾರದಲ್ಲಿ ತಂಬಾಕು ನಿಷೇಧ ಫಲಕ ಅಳವಡಿಸಿ : ರಾಯಪ್ಪ ಹುಣಸಗಿ

ಕಲಬುರಗಿ: ಪ್ರತಿಯೊಂದು ಗ್ರಾಮಗಳ ಪ್ರವೇಶ ದ್ವಾರಕ್ಕೆ ಹಾಗೂ ಶಾಲಾ ಕಾಲೇಜು ಆವರಣದಲ್ಲಿ ತಂಬಾಕು ನಿಷೇಧ ಫಲಕ ಅಳವಡಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದಲ್ಲಿ ಬುಧವಾರ ಜಿಲ್ಲಾಡಳಿತ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ತಂಬಾಕು ನಿಯಂತ್ರಣ ಸಮನ್ವಯ ಸಮಿತಿ ಸಭೆಯನ್ನುದೇಶಿಸಿ ಮಾತನಾಡಿದ ಅವರು, ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರರ ನೇತೃತ್ವದಲ್ಲಿ 3 ತಿಂಗಳಿಗೊಮ್ಮೆ ತ್ರೈಮಾಸಿಕ ಸಭೆಯನ್ನು ನಡೆಸಿ ಸಭಾ ನಡಾವಳಿಯನ್ನು ಕಚೇರಿಗೆ ಸಲ್ಲಿಸಬೇಕು ಎಂದರು.
ಎಲ್ಲಾ ಸರ್ಕಾರಿ ಮತ್ತು ಖಾಸಗಿ ಅನುದಾನಿತ ಶಾಲಾ ಕಾಲೇಜುಗಳಲ್ಲಿ ತಂಬಾಕು ನಿಯಂತ್ರಣ ಸಮಿತಿ ರಚಿಸಿ, ಸುತ್ತ-ಮುತ್ತ 100 ಮೀಟರ್ ಒಳಗೆ ತಂಬಾಕು ಉತ್ಪನ್ನಗಳ ಮಾರಾಟ ಅಂಗಡಿಗಳು ಕಂಡು ಬಂದಲ್ಲಿ ಪೊಲೀಸ್ ಇಲಾಖೆಗೆ ತಿಳಿಸಬೇಕು, ಪರವಾನಿಗೆ ಇಲ್ಲದ ಅಂಗಡಿಗಳ ಮೇಲೆ ದಾಳಿ ಕೈಗೊಂಡು ದಂಡ ವಿಧಿಸಿ, ತಂಬಾಕು ಮಾರಾಟ ಆಗದಂತೆ ಕಠಿಣ ಕ್ರಮ ವಹಿಸಬೇಕೆಂದು ಎಚ್ಚರಿಸಿದರು
ತಂಬಾಕು ನಿಯಂತ್ರಣ ಸಲಹೆಗಾರ್ತಿ ಸುಜಾತಾ ಪಾಟೀಲ ಮಾತನಾಡಿ, ಜಿಲ್ಲೆಯಾದ್ಯಂತ ಕೋಟ್ಪಾ-2003 (COTPA) ಕಾಯ್ದೆಯಡಿ ಏಕಕಾಲಕ್ಕೆ ದಾಳಿ ನಡೆಸಲಾಗಿದ್ದು, ಒಟ್ಟು 519 ಪ್ರಕರಣಗಳನ್ನು ದಾಖಲಿಸಲಾಗಿದೆ. ಒಟ್ಟು 5,46,500 ರೂ. ದಂಡವನ್ನು ಸಂಗ್ರಹಿಸಿ ಸರ್ಕಾರಕ್ಕೆ ಜಮೆ ಮಾಡಲಾಗಿದೆ. ಈ ಕುರಿತು ಶಾಲಾ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುತ್ತದೆ ಎಂದು ವಿವರಿಸಿದರು.
ಇದೇ ವೇಳೆಯಲ್ಲಿ ಗುಲ್ಬರ್ಗಾ ಹಾಗೂ ಕೇಂದ್ರೀಯ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿದ್ಯಾರ್ಥಿಗಳಿಂದ ತಂಬಾಕು ಮುಕ್ತ ಯುವ ಅಭಿಯಾನ ಪ್ರಬಂಧ ಸ್ಪರ್ಧೆಯಲ್ಲಿ ಭಾಗಿಯಾದ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು.
ರಾಜ್ಯ ತಂಬಾಕು ನಿಯಂತ್ರಣ ಕೋಶದ ವಿಭಾಗೀಯ ಸಂಯೋಜಕ ಮಹೇಶ್ ಉಳ್ಳಾಗಡ್ಡಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶರಣಬಸಪ್ಪ ಖ್ಯಾತನಾಳ, ಜಿಲ್ಲಾ ಎನ್ಫೋರ್ಸ್ ಮೆಂಟ್ ಅಧಿಕಾರಿ ಡಾ.ಶಿವಶರಣಪ್ಪ ಬಿ, ಜಿಲ್ಲಾ ಸಮೀಕ್ಷಣಾ ಅಧಿಕಾರಿ ಡಾ.ರಾಕೇಶ್ ಕಾಂಬಳೆ, ಜಿಲ್ಲಾ ಕುಷ್ಠರೋಗ ಆಧಿಕಾರಿಗಳು ಡಾ. ವಿವೇಕಾನಂದ ರೆಡ್ಡಿ, ಜಿಲ್ಲಾ ಆರೋಗ್ಯ ಕಾರ್ಯಕ್ರಮ ಅಧಿಕಾರಿಗಳು ಡಾ. ಸಂಧ್ಯಾ ಕಾನೇಕರ್ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ತಂಡದವರು ಉಪಸ್ಥಿತರಿದ್ದರು.







