Kalaburagi | ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ

ಕಲಬುರಗಿ: ಬೀದರ್ ಮತ್ತು ಕಲಬುರಗಿ ಜಿಲ್ಲೆಗಳ ಡಿಜಿಟಲ್ ಸಖಿ ಯೋಜನೆಯಡಿ, ಅಕ್ಸಸ್ ಲಿವಲಿಹೂಡ್ಸ್ ಹಾಗೂ ಎಲ್ ಅಂಡ್ ಟಿ ಫೈನಾನ್ಸ್ ಸಹಯೋಗದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ನಗರದ ಕನ್ನಡ ಭವನದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ರಾಘವೇಂದ್ರ ಪೊಲೀಸ್ ಸ್ಟೇಷನ್ನ ಪಿಎಸ್ಐ ಯಶೋಧ ಕಟಕೆ ಉದ್ಘಾಟಿಸಿ ಮಾತನಾಡಿ, “ಮಹಿಳೆ ಮತ್ತು ಪುರುಷರು ಸಮಾಜದ ಎರಡು ಕಣ್ಣುಗಳಂತೆ. ಇಬ್ಬರೂ ಸಮಾನರಾಗಿದ್ದು, ಮಹಿಳಾ ದಿನಾಚರಣೆಯ ಜೊತೆಗೆ ಪುರುಷರ ದಿನಾಚರಣೆಯನ್ನೂ ಆಚರಿಸುವುದು ಅಗತ್ಯ” ಎಂದು ಹೇಳಿದರು.
ಡಿಜಿಟಲ್ ಸಖಿ ಯೋಜನೆಯ ಕ್ಲಸ್ಟರ್ ಮ್ಯಾನೇಜರ್ ವಿಜಯಲಕ್ಷ್ಮಿ ಅವರು ಕಾರ್ಯಕ್ರಮದ ಪರಿಚಯ ನೀಡಿ ಯೋಜನೆಯ ಉದ್ದೇಶ ಮತ್ತು ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿ ಅಡ್ವೋಕೇಟ್ ರೇಣುಕಾ ಬಿರಾದಾರ್ ಹಾಗೂ ಬಸವ ಟ್ರೇಡರ್ಸ್ ಸಂಸ್ಥಾಪಕ ಮಹೇಶ್ ಗಿರಾಣಿ ಭಾಗವಹಿಸಿದ್ದರು. ಈ ವೇಳೆ ರೇಣುಕಾ ಬಿರಾದಾರ್ ಮಹಿಳಾ ಸಬಲೀಕರಣದ ಅಗತ್ಯತೆಯನ್ನು ವಿವರಿಸಿದರು.
ಅತಿಥಿಗಳಾಗಿ ಮಲ್ಲಮ್ಮ ಕಾಡ್ಲಾ, ವಿಜಯಲಕ್ಷ್ಮಿ ಆರ್.ಶೀಲವಂತ್, ಶ್ರೀಪಾದ ಕುಲಕರ್ಣಿ, ಗೋಪಾಲ್ ಕುಲಕರ್ಣಿ, ಕವಿತಾ ನಾಯ್ಡು ಹಾಗೂ ಜಯಶ್ರೀ ಎಸ್.ಮಠ್ ಉಪಸ್ಥಿತರಿದ್ದರು.
ಶ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷೆ ಮಲ್ಲಮ್ಮ ಕಾಡ್ಲಾ ಅವರು ಡಿಜಿಟಲ್ ಸಖಿಗಳಿಗೆ ಆನ್ಲೈನ್ ಮಾರುಕಟ್ಟೆ ವ್ಯವಸ್ಥೆ ಮತ್ತು ಕಾನೂನು ಸೇವಾ ಪ್ರಾಧಿಕಾರದ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳಾ ಉದ್ಯಮಿಗಳನ್ನು ಸನ್ಮಾನಿಸಲಾಯಿತು. ಮಹಿಳೆಯರ ಹಕ್ಕುಗಳು, ಸಮಾನತೆ ಮತ್ತು ನ್ಯಾಯದ ಬಗ್ಗೆ ಜಾಗೃತಿ ಮೂಡಿಸುವ ಸಂದೇಶಗಳನ್ನು ನೀಡಲಾಯಿತು.
ನಾಗರಾಜ್ ಹೆಂಬಾಡಿ ಸ್ವಾಗತಿಸಿದರು. ವಿಜಯಲಕ್ಷ್ಮಿ ಎಂ.ಭರ್ಮಶೆಟ್ಟಿ ನಿರೂಪಿಸಿದರು. ರವಿ ಕುಮಾರ್ ವಿ.ಬಿ. ವಂದಿಸಿದರು.







