Kalaburagi | ಮಕ್ಕಳನ್ನು ಸಾಂಸ್ಕೃತಿಕ ಲೋಕದತ್ತ ಸೆಳೆಯುವುದು ಶಿಕ್ಷಕರು ಮತ್ತು ಪಾಲಕರ ಜವಾಬ್ದಾರಿ : ಡಾ.ಶಾಂತಾ ಮಠ

ಕಲಬುರಗಿ : ಇಂದಿನ ತಂತ್ರಜ್ಞಾನ ಯುಗದಲ್ಲಿ ಮಕ್ಕಳು ತಮ್ಮಲ್ಲಿರುವ ಸ್ವಾಭಾವಿಕ ಪ್ರತಿಭೆಯನ್ನು ಮರೆತು ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಅವರನ್ನು ಹಾಡು, ನೃತ್ಯ, ಅಭಿನಯ, ಚಿತ್ರಕಲೆ, ಕ್ರೀಡೆ ಹಾಗೂ ಇತರ ಕಲಾ ಚಟುವಟಿಕೆಗಳ ಮೂಲಕ ಸಾಂಸ್ಕೃತಿಕ ಲೋಕದತ್ತ ಸೆಳೆಯುವುದು ಶಿಕ್ಷಕರು ಮತ್ತು ಪಾಲಕರ ಜವಾಬ್ದಾರಿಯಾಗಿದೆ ಎಂದು ಸಾಹಿತಿ ಹಾಗೂ ಶಿಕ್ಷಣ ತಜ್ಞೆ ಡಾ.ಶಾಂತಾ ಮಠ ಹೇಳಿದರು.
ನಗರದ ಶ್ರೀಮತಿ ಕಸ್ತೂರಬಾಯಿ ಬುಳ್ಳಾ ಸ್ಮಾರಕ ಸಾಂಸ್ಕೃತಿಕ ಭವನದಲ್ಲಿ ರಂಗಸಂಗಮ ಕಲಾ ವೇದಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ‘ಸಂಸ್ಕೃತಿ ಸಂಭ್ರಮ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಲ್ಲಿ ನೈತಿಕತೆ, ಮಾನವೀಯ ಮೌಲ್ಯಗಳು ಮತ್ತು ಸಾಂಸ್ಕೃತಿಕ ಪ್ರಜ್ಞೆಯನ್ನು ಬೆಳೆಸುವ ಅಗತ್ಯವಿದೆ. ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಪರಿಚಯದ ಮೂಲಕ ಮಕ್ಕಳ ಪ್ರತಿಭೆಯನ್ನು ಸಮಾಜದ ಮುಂದೆ ತರುವ ಕೆಲಸವನ್ನು ಪೋಷಕರು ಹಾಗೂ ಶಿಕ್ಷಕರು ಮಾಡಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಡಾ.ಬುಳ್ಳಾ ಮಾತನಾಡಿ, ಜನಪದ ಮತ್ತು ಸಾಂಸ್ಕೃತಿಕ ಪರಂಪರೆಯ ಅಮೂಲ್ಯ ಸಂಪತ್ತಾಗಿರುವ ಕಥೆಗಳು ಇಂದಿನ ಪೀಳಿಗೆಗೆ ಪರಿಚಯವಾಗದೆ ಮರೆಯಾಗುತ್ತಿವೆ. ಇಂತಹ ಕಥೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಮಕ್ಕಳಿಗೆ ಪರಿಚಯಿಸುವ ಕೆಲಸ ನಡೆಯಬೇಕು. ಕಲಾವಿದರಿಗೆ ಪ್ರೋತ್ಸಾಹ ನೀಡುವ ಕಲಾಪೋಷಕರ ಅಗತ್ಯವಿದ್ದು, ರಂಗಸಂಗಮ ಕಲಾ ವೇದಿಕೆ ಈ ನಿಟ್ಟಿನಲ್ಲಿ ಉತ್ತಮ ಕಾರ್ಯ ಮಾಡುತ್ತಿದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ರಂಗಸಂಗಮ ಕಲಾ ವೇದಿಕೆಯ ಅಧ್ಯಕ್ಷೆ ಡಾ.ಸುಜಾತಾ ಜಂಗಮಶೆಟ್ಟಿ, ಕಳೆದ 16 ವರ್ಷಗಳಿಂದ ಸಂಸ್ಥೆ ವೈವಿಧ್ಯಮಯ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿದೆ. ಕಲೆ, ಸಂಸ್ಕೃತಿ, ಸಾಹಿತ್ಯ ಮತ್ತು ರಂಗಭೂಮಿ ಉಳಿಯಬೇಕಾದರೆ ಕನ್ನಡ ಭಾಷೆ ಉಳಿಯಬೇಕು. ಕನ್ನಡ ಉಳಿಯಬೇಕಾದರೆ ಕನ್ನಡ ಶಾಲೆಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು.
ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಮನಸೂರೆಗೊಂಡವು. ಆಕಾಶವಾಣಿ ಕಲಾವಿದ ಶಿವಕುಮಾರ ಹಿರೇಮಠ ಅವರಿಂದ ಸುಗಮ ಸಂಗೀತ, ಪ್ರಶಾಂತ್ ಗೋಲ್ಡ್ ಸ್ಮಿತ್ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಬಾನ್ಸೂರಿ ವಾದನ, ಉದಯಕುಮಾರ್ ಫುಲಾರಿ ಅವರಿಂದ ತಬಲಾ ಸೋಲೋ, ಶಾಂತಾ ಕುಲಕರ್ಣಿ ಅವರಿಂದ ರಂಗಗೀತೆಗಳ ಗಾಯನ ಹಾಗೂ ಸಮೀರ ಸುಬೇದಾರ ಮತ್ತು ತಂಡದವರಿಂದ ‘ಅವ್ಯಕ್ತ’ ನಾಟಕ ಪ್ರದರ್ಶನ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಗೀತಾ ಬಸವಪ್ರಭು ವಹಿಸಿದ್ದರು. ರಾಜೇಶ್ವರಿ ಗಲಗಲಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಕಪಿಲದೇವ ಚಕ್ರವರ್ತಿ ಕಾರ್ಯಕ್ರಮ ನಿರೂಪಿಸಿದರು.






