ಕಲಬುರಗಿ | ನ.21ರಿಂದ ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ 'ಮಾದರಿ ನೆರೆಹೊರೆ, ಮಾದರಿ ಸಮಾಜ' ಅಭಿಯಾನ

ಕಲಬುರಗಿ: 'ಮಾದರಿ ನೆರೆಹೊರೆ, ಮಾದರಿ ಸಮಾಜ' ಎಂಬ ಶೀರ್ಷಿಕೆಯಡಿಯಲ್ಲಿ ನೆರೆಹೊರೆಯವರ ಹಕ್ಕುಗಳ ರಾಷ್ಟ್ರೀಯ ಮಟ್ಟದ ಅಭಿಯಾನವನ್ನು ಇದೇ ನ.21ರಿಂದ 30ರವರೆಗೆ ನಗರದ ಸಂತ್ರಾಸ್ ವಾಡಿಯಲ್ಲಿರುವ ಹಿದಾಯತ್ ಸೆಂಟರ್ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ಮುಖಂಡರಾದ ಮುಹಮ್ಮದ್ ಮಿನ್ಹಾಝುದ್ದೀನ್ ಹುಜೂರ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮುಹಮ್ಮದ್ ಮಿನ್ಹಾಝುದ್ದೀನ್, 10 ದಿನಗಳ ಕಾಲ ಈ ಅಭಿಯಾನದ ಪ್ರಯುಕ್ತ ಪ್ರವಚನ, ಮೊಹಲ್ಲಾ ಸಭೆಗಳು, ಕರಪತ್ರ ವಿತರಣೆ, ಕೌಟುಂಬಿಕ ಭೇಟಿ, ಸಂಸ್ಕೃತಿಕ ಕಾರ್ಯಕ್ರಮ, ಟ್ರಾಫಿಕ್ ನಿಯಮಗಳ ಜಾಗೃತಿ ಸಮಾವೇಶ, ಮೆರವಣಿಗೆ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ನೆರೆಹೊರೆಯರ ಹಕ್ಕುಗಳು, ಪರಸ್ಪರರ ಬಗ್ಗೆ ಕಾಳಜಿ, ಸಹಕಾರ, ಶಿಸ್ತು, ಶುಚಿತ್ವ ಮತ್ತಿತರ ಸಾಮಾಜಿಕ ಹೊಣೆಗಾರಿಕೆಗಳನ್ನು ನಿರ್ವಹಿಸಲು ಪ್ರೇರೇಪಿಸುವುದು ಅಭಿಯಾನದ ಉದ್ದೇಶವಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಅಬ್ದುಲ್ ಖಾದೀರ್, ಗುಲಾಮ್ ಮುಸಫ್ತಾ, ಸಯ್ಯದ್ ಇಲ್ಯಾಸ್ ಮುಹಿಯುದ್ದೀನ್, ಅಲ್ಲಾವುದ್ಧೀನ್ ಮುಹಮ್ಮದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.





