ಕಲಬುರಗಿ | ದೇವದಾಸಿ ಸಮರ್ಪಣಾ ನಿಷೇಧ ಕುರಿತು ಜಾತ್ರಾ ಜಾಗೃತಿಗೆ ಚಾಲನೆ

ಕಲಬುರಗಿ : ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ದೇವದಾಸಿ ಪುನರ್ವಸತಿ ಯೋಜನೆ ವತಿಯಿಂದ ಆಳಂದ ತಾಲೂಕಿನ ಹೊನ್ನಳ್ಳಿ ಗ್ರಾಮದ ಯಲ್ಲಮ್ಮ ದೇವಿ ಜಾತ್ರೆಯಲ್ಲಿ ದೇವದಾಸಿ ಸಮರ್ಪಣಾ ನಿಷೇಧ ಕುರಿತು ಜಾತ್ರಾ ಜಾಗೃತಿ ಕಾರ್ಯಕ್ರಮಕ್ಕೆ ಆಳಂದ ಸಬ್ ಇನ್ ಸ್ಪೆಕ್ಟರ್ ಭೀಮರಾಯ ಭಂಕಲಗಿ ಅವರು ಬುಧವಾರ ಚಾಲನೆ ನೀಡಿದರು.
ನಂತರ ಅವರು ಮಾತನಾಡಿ, ಸಮಾಜಕ್ಕೆ ಕಂಟಕವಾಗಿರುವ ದೇವದಾಸಿ ಅನಿಷ್ಠ ಪದ್ಧತಿಯನ್ನು ನಿರ್ಮೂಲನೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದ್ದು, ದೇವದಾಸಿ ಪದ್ದತಿ ಸಮಪರ್ಣಾ ಮಾಡುವ ಪ್ರಕರಣಗಳು ಕಂಡು ಬಂದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಭಾಗಿಯಾಗುವವರಿಗೆ ದೇವದಾಸಿ ಸಮರ್ಪಣಾ ನಿಷೇಧ ಕಾಯ್ದೆ 1982ರ ಪ್ರಕಾರ 5,000 ರೂ.ಗಳ ದಂಡ ಮತ್ತು 5 ವರ್ಷ ಜೈಲು ಶಿಕ್ಷೆಯ ವಿಧಿಸಲಾಗುತ್ತದೆ ಎಂದು ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ದೇವದಾಸಿ ಅನಿಷ್ಟ ಪದ್ದತಿಗೆ ದೂಡುವ ಪ್ರಕರಣಗಳು ಕಂಡುಬಂದಲ್ಲಿ ದೇವದಾಸಿ ಸಮರ್ಪಣಾ ಕಾಯ್ದೆಯಡಿ ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಬಾಲ್ಯ ವಿವಾಹ ಪ್ರಕರಣ ಕಂಡು ಬಂದಲಿ ಕೂಡಲೇ ಕ್ರಮ ಜರುಗಿಸಲಾಗುತ್ತದೆ ಎಂದರು.
ಆಳಂದ ಶಿಶು ಅಭಿವೃದ್ದಿಯೋಜನಾಧಿಕಾರಿ ಶ್ರೀಂಕಾತ ಮೇಂಗೆಜಿ ಮಾತನಾಡಿ, ದೇವದಾಸಿ ಪದ್ಧತಿ ಇದೊಂದು ಸಮಾಜಕ್ಕೆ ಮಾರಕ ರೋಗವಿದ್ದಂತೆ. ಅಮಾಯಕ ಹೆಣ್ಣು ಮಕ್ಕಳಿಗೆ ಮುತ್ತು ಕಟ್ಟಿ ದೇವದಾಸಿಯನ್ನಾಗಿ ಮಾಡುವುದು ಅಕ್ಷಮ ಅಪರಾಧವಾಗಿದೆ. ಇದಕ್ಕೆ ಪ್ರೋತ್ಸಾಹಿಸಿದವರಿಗೂ ಮತ್ತು ಭಾಗಿಯಾದವವರೂ ಕೂಡಾ ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ಬಾಲ್ಯ ವಿವಾಹ ತಡೆ ಕಾಯ್ದೆಯನ್ವಯ ಹೆಣ್ಣು ಮಕ್ಕಳ ಮದುವೆ ವಯಸ್ಸು 18 ವರ್ಷ ಹಾಗೂ ಹುಡುಗರಿಗೆ ವಯಸ್ಸು 21 ವರ್ಷ ಆದ ನಂತರ ಮದುವೆ ಮಾಡಬೇಕು ಎಂದು ಅರಿವು ಮೂಡಿಸಿದರು. ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡ ಕಲ್ಯಾಣಪ್ಪ ಕೋರೆ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ದೇವದಾಸಿ ಪುನರ್ವಸತಿ ಯೋಜನೆ, ಪ್ರಭಾರಿ ಯೋಜನಾಧಿಕಾರಿ ಹಾಗೂ ಅಭಿವೃದ್ದಿ ನಿರೀಕ್ಷಕ ಶಾಂತಲಾ ಟಿ.ಎನ್., ಗ್ರಾಮದ ಮುಖಂಡ ಬಸವರಾಜ ಕಾಮಗೆ, ಅಂಗನವಾಡಿ ಮೇಲ್ವಿಚಾರಕಿ ಮಾಹಾದೇವಿ ಎಸ್, ಅಂಗನವಾಡಿ ಕಾರ್ಯಕರ್ತೆ ಬೌರಮ್ಮ ಪಾಟೀಲ್, ಕಲ್ಪನಾ ಎನ್,ಚವ್ಹಾಣ. ಶ್ರೀಶೈಲ್ ಆರ್, ಎಸ್.ಮೌನೇಶ ಜಿ.ನಾಮದೇವ ಎಮ್ ಡಿ. ಬಸವರಾಜ ಎನ್ ಪಾಟೀಲ, ಜಾತ್ರಾ ಕಮೀಟಿಯ ಅಧ್ಯಕ್ಷ ಹೊನ್ನಳ್ಳಿ, ಮಾಳಪ್ಪ ಎಸ್.ಬಿ., ಮಲ್ಲಿಕಾರ್ಜುನ ಎಸ್.ದೊಡ್ಡಮನಿ, ಯೋಜನಾನುಷ್ಠನಾಧಿಕಾರಿ ಬಸವರಾಜ ನಿಂಬರ್ಗಿಕರ್, ವೈ.ಡಿ.ಬಡಿಗೇರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ಜಾತ್ರೆಯಲ್ಲಿ ದೇವದಾಸಿ ನಿಷೇಧ ಕಾಯ್ದೆ ಕುರಿತು ಸಾರ್ವಜನಿಕರಿಗೆ ಕರಪತ್ರಗಳನ್ನು ಹಂಚುವುದರ ಮೂಲಕ ಹಾಗೂ ಧ್ವನಿವರ್ಧಕಗಳ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.







