ಕಲಬುರಗಿ | ಪತ್ರಕರ್ತ ಸೂರ್ಯಕಾಂತ ಜಮಾದಾರ ಅವರಿಗೆ ಸ್ನೇಹಶ್ರೀ ಪ್ರಶಸ್ತಿ ಪ್ರದಾನ

ಕಲಬುರಗಿ: ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಬದಲಾವಣೆಗಳು, ಬೆಳವಣಿಗೆಗಳು ಆಗುತ್ತಿವೆ. ಆದರೆ, ತಳವರ್ಗದ ಶಿಕ್ಷಣ ಸಂಸ್ಥೆಗಳಲ್ಲಿ ಇಂತಹ ಬೆಳವಣಿಗೆ ನೋಡಲು ಸಿಗುತ್ತಿಲ್ಲ. ಆದ್ದರಿಂದ ಆ ಶಿಕ್ಷಣ ಸಂಸ್ಥೆಗಳಿಗೆ ಜನರು ಬೆಂಬಲ ನೀಡಬೇಕು ಎಂದು ಕಲ್ಯಾಣ ಕರ್ನಾಟಕ ಶೈಕ್ಷಣಿಕ ಗುಣಮಟ್ಟದ ಸುಧಾರಣಾ ಸಮಿತಿ ಸದಸ್ಯರು, ಲೋಕಸೇವಾ ಆಯೋಗದ ಮಾಜಿ ಸದಸ್ಯರಾದ ಡಾ.ನಾಗಾಬಾಯಿ ಬುಳ್ಳಾ ಹೇಳಿದರು.
ನಗರದ ಆಳಂದ ರಸ್ತೆಯ ಖಾದ್ರಿಚೌಕ್ ಬಳಿ ಇರುವ ಅಖಿಲ ಕರ್ನಾಟಕ ಸ್ನೇಹಗಾಂಗಾವಾಹಿನಿಯಯ ಕಸ್ತೂರಿಬಾಯಿ ಬುಳ್ಳಾ ಸಾಂಸ್ಕೃತಿಕ ಭವನದಲ್ಲಿ ರವಿವಾರ ನಡೆದ ಅಖಿಲ ಕರ್ನಾಟಕ ಸ್ನೇಹಗಂಗಾವಾಹಿನಿ ಸಂಸ್ಥೆಯ ಸಂಸ್ಥಾಪನ ದಿನಾಚರಣೆ, ಪ್ರತಿಭಾ ಪುರಸ್ಕಾರ ಹಾಗೂ ಪತ್ರಕರ್ತ ಸೂರ್ಯಕಾಂತ ಜಮಾದಾರಗೆ ಸ್ನೇಹಶ್ರೀ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಲಬುರಗಿ ಉತ್ತರ ವಲಯ ಬಿಇಓ ಸೋಮಶೇಖರ ಹಂಚಿನಾಳ ಮಾತನಾಡಿ, ಶಿಕ್ಷಣ ಎನ್ನುವುದು ಹುಲಿಯ ಹಾಲಿದ್ದಂತೆ ಅದನ್ನು ಎಲ್ಲರೂ ಕುಡಿದಾಗಲೇ ನಮ್ಮ ವ್ಯವಸ್ಥೆಯಲ್ಲಿ ತುಳಿತಕ್ಕೊಳಗಾದ ಸಮಾಜಗಳು ಘರ್ಜಿಸಲು ಸಾಧ್ಯ ಎಂದ ಅವರು, ಸ್ನೇಹಗಂಗಾವಾಹಿನಿ ಶಿಕ್ಷಣ ಸಂಸ್ಥೆಯಿಂದ ಪ್ರೌಢ ಶಾಲೆ ವಿಭಾಗವನ್ನು ಆರಂಭಿಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಹೇಳಿದರು.
ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಬಳುಂಡಗಿ, ಸಂಸ್ಥೆಯ ಗೌರವ ಅಧ್ಯಕ್ಷ ಡಾ.ಬಿ.ಪಿ.ಬುಳ್ಳಾ, ಪ್ರಶಸ್ತಿ ಸ್ವೀಕರಿಸಿ ಸೂರ್ಯಕಾಂತ್ ಎಂ.ಜಮಾದಾರ ಮಾತನಾಡಿದರು.
ಈ ವೇಳೆಯಲ್ಲಿ ಸಂಸ್ಥೆಯ ಕಾರ್ಯಾಧ್ಯಕ್ಷ ಸೈಬಣ್ಣ ಕೆ.ವಡಗೇರಿ, ಉಪಾಧ್ಯಕ್ಷರಾಮಲಿಂಗ ನಾಟೀಕಾರ, ಧರ್ಮರಾಜ್ ಜವಳಿ ಸೇರಿದಂತೆ ಅನೇಕರು ಇದ್ದರು.
ಪ್ರಾಸ್ತಾವಿಕವಾಗಿ ಡಾ.ರಾಘವೇಂದ್ರ ಗುಡಗುಂಟಿ ಮಾತನಾಡಿದರು. ಯಲ್ಲಾಲಿಂಗ ಕೋಬಾಳ ಸ್ವಾಗತಿಸಿದರು. ವಿಜಯಲಕ್ಷ್ಮಿ ಪಾಟೀಲ ವಂದಿಸಿದರು. ಚಂದ್ರಕಾಂತ ತಳವಾರ ನಿರೂಪಿಸಿದರು. ಸಮಾಜದ ಬಂಧುಗಳು ಹಾಗೂ ಇತರರು ಇದ್ದರು.







