Kalaburagi | ಕನ್ನಡ ಸಾಹಿತ್ಯ ಸೌಹಾರ್ದ, ಮಾನವೀಯ ಮೌಲ್ಯಗಳ ಪ್ರತೀಕ: ರಾಜೇಂದ್ರ ಎಂ.ಕೊರಬಾ

ಕಲಬುರಗಿ: ಕನ್ನಡ ಸಾಹಿತ್ಯವು ಬಹುಶತಮಾನಗಳ ಶ್ರೀಮಂತ ಪರಂಪರೆಯನ್ನು ಹೊಂದಿದ್ದು, ಸೌಹಾರ್ದ, ಸಾಮರಸ್ಯ, ಮಾನವೀಯ ಮೌಲ್ಯಗಳು ಮತ್ತು ಸಹಬಾಳ್ವೆಯ ಸಂದೇಶವನ್ನು ಸಾರುವ ಮೂಲಕ ಸಮಾಜದ ಸಾಂಸ್ಕೃತಿಕ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದೆ ಎಂದು ಹಿರಿಯ ಸಾಹಿತಿ ರಾಜೇಂದ್ರ ಎಂ. ಕೊರಬಾ ಹೇಳಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು ಹಾಗೂ ಚಕೋರ ಸಾಹಿತ್ಯ ವಿಚಾರ ವೇದಿಕೆ, ಕಲಬುರಗಿ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ರೋಜಾ ತೈನ್ ಪಾಚಾಪೂರದ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ‘ಕನ್ನಡ ಸಾಹಿತ್ಯ ಪರಿಚಯ’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯದ ಪಯಣವು ಜನಪದ ಕಾವ್ಯಗಳಿಂದ ಆರಂಭವಾಗಿ ಶ್ರೀವಿಜಯನ ಕವಿರಾಜಮಾರ್ಗ, ವಡ್ಡಾರಾಧನೆ, ಪಂಪ, ಪೊನ್ನ, ನಾಗಚಂದ್ರ, ಲಕ್ಷ್ಮೀಶ, ಅಂಬಲಗಿ ಚನ್ನಮಲ್ಲ, ವಚನಕಾರರು, ದಾಸ ಸಾಹಿತ್ಯಕಾರರು, ತತ್ವಪದಕಾರರು ಹಾಗೂ ಸೂಫಿ ಸಂತರ ಸಾಹಿತ್ಯದ ಮೂಲಕ ವೈವಿಧ್ಯಮಯವಾಗಿ ಬೆಳೆದಿದೆ. ಈ ಪರಂಪರೆಯು ಸಮಾಜದಲ್ಲಿ ಪ್ರೀತಿ, ಸಹಿಷ್ಣುತೆ ಮತ್ತು ಸಾಮರಸ್ಯವನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಹೇಳಿದರು.
ಕನ್ನಡ ಭಾಷೆ ಜೀವನೋತ್ಸಾಹ ತುಂಬುವ ಶಕ್ತಿಯನ್ನು ಹೊಂದಿದ್ದು, ವಿದ್ಯಾರ್ಥಿಗಳು ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಅಧ್ಯಯನ ಮಾಡುವ ಮೂಲಕ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಜೊತೆಗೆ ಇತರ ಭಾಷೆಗಳ ಸಾಹಿತ್ಯವನ್ನೂ ಅಧ್ಯಯನ ಮಾಡಿ ಜ್ಞಾನವನ್ನು ವಿಸ್ತರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯಗುರು ಕರಬಸಯ್ಯ ಮಠ ಮಾತನಾಡಿ, ಭಾಷೆ ಮತ್ತು ಸಾಹಿತ್ಯದ ಅರಿವು ವ್ಯಕ್ತಿಯ ಮಾತು, ನಡವಳಿಕೆ ಹಾಗೂ ಚಿಂತನೆಗೆ ಸಂಸ್ಕಾರ ನೀಡುತ್ತದೆ. ಕನ್ನಡೇತರ ವಿದ್ಯಾರ್ಥಿಗಳಲ್ಲಿ ಕನ್ನಡ ಸಾಹಿತ್ಯದ ಆಸಕ್ತಿ ಬೆಳೆಸುವ ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಚಕೋರ ಸಾಹಿತ್ಯ ವಿಚಾರ ವೇದಿಕೆಯ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.
ನಿವೃತ್ತ ಶಿಕ್ಷಕ ಅಜೀಜ್ ಮಾತನಾಡಿ, ಮಾತೃಭಾಷೆಯ ಬಳಕೆಯ ಜೊತೆಗೆ ಬಹುಭಾಷಾ ಜ್ಞಾನವೂ ಇಂದಿನ ಅವಶ್ಯಕತೆಯಾಗಿದೆ. ಆದಾಗ್ಯೂ ಕನ್ನಡ ಭಾಷೆಗೆ ಆದ್ಯತೆ ನೀಡುವ ಮೂಲಕ ಅದರ ಬೆಳವಣಿಗೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.
ಕನ್ನಡ ಉಪನ್ಯಾಸಕರಾದ ಡಾ. ರಾಜಕುಮಾರ ಮಾಳಗೆ ಹಾಗೂ ಡಾ. ಶೀಲಾದೇವಿ ಬಿರಾದಾರ ಅವರು ಸಾಹಿತ್ಯದ ಓದು, ಅಧ್ಯಯನ ಮತ್ತು ಭಾಷಾ ಪ್ರಾವೀಣ್ಯದ ಮಹತ್ವವನ್ನು ವಿವರಿಸಿದರು.
ಚಕೋರ ಸಾಹಿತ್ಯ ವಿಚಾರ ವೇದಿಕೆಯ ಸಂಚಾಲಕ ಡಾ. ಗವಿಸಿದ್ಧಪ್ಪ ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಿವಿಧ ಯೋಜನೆಗಳು ಹಾಗೂ ಚಕೋರ ವೇದಿಕೆಯ ಉದ್ದೇಶಗಳನ್ನು ವಿವರಿಸಿದರು.
ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆ ವಿವಿಧ ಭಾಷೆಗಳ ಪದಗಳನ್ನು ಅಳವಡಿಸಿಕೊಂಡು ತನ್ನದೇ ಆದ ವಿಶಿಷ್ಟತೆಯನ್ನು ಉಳಿಸಿಕೊಂಡಿದೆ. ಕನ್ನಡೇತರ ವಿದ್ಯಾರ್ಥಿಗಳಲ್ಲಿ ಕನ್ನಡ ಸಾಹಿತ್ಯದ ಓದು ಮತ್ತು ಆಸಕ್ತಿ ಬೆಳೆಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯದ ಶ್ರೀಮಂತಿಕೆಗೆ ಸಾಕ್ಷಿಯಾಗಿ ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ. ಕನ್ನಡವು ಉದ್ಯೋಗದ ಭಾಷೆಯಾಗಿ ಬೆಳೆಯಬೇಕಾದರೆ ಸಾಹಿತ್ಯದ ಅಧ್ಯಯನ ಮತ್ತು ಭಾಷಾ ಪ್ರಾವೀಣ್ಯತೆ ಅಗತ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಸಂಜೀವ ಸರ್, ವಿಜಯಕುಮಾರ ಕಂಚಾಗಾರ, ತಲಾತ್ ಸುಲ್ತಾನ್, ನಾಜಿಯಾ ಸಹೇರ್, ಸೈಯದಾ ಶಕೀಬಾ ಫಾತಿಮಾ, ರುಕ್ಸಾನಾ ಬೇಗಂ, ನಸೀಮಾ ಬಾನು, ಆಕಾಶ ತೆಗನೂರು ಸೇರಿದಂತೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ತಾಹೇರಿ ಪ್ರಾರ್ಥನಾ ಗೀತೆ ಹಾಡಿದರು. ಡಾ.ಸಿದ್ಧಪ್ಪ ಹೊಸಮನಿ ಕಾರ್ಯಕ್ರಮ ನಿರೂಪಿಸಿದರೆ, ಡಾ. ಪೀರಪ್ಪ ಸಜ್ಜನ ವಂದಿಸಿದರು.






