ಕಲಬುರಗಿ : ಕೆಕೆಆರ್ಟಿಸಿ ಬಸ್-ಬೈಕ್ ಮುಖಾಮುಖಿ ಢಿಕ್ಕಿ; ಮೂವರು ಮೃತ್ಯು

ಚಿತ್ತಾಪುರ: ಕೆಕೆಆರ್ಟಿಸಿ ಬಸ್ ಮತ್ತು ಬೈಕ್ ಮುಖಾಮುಖಿ ಢಿಕ್ಕಿಯಾಗಿ ಬೈಕ್ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಕರದಾಳ ಹಾಗೂ ಚಿತ್ತಾಪುರ ರಸ್ತೆ ಮಧ್ಯದಲ್ಲಿ ನಡೆದಿದೆ.
ಬಮ್ಮನಳ್ಳಿ ಗ್ರಾಮದ ನಿವಾಸಿ ದೇವರಾಜ ಅಯ್ಯಪ್ಪ (19), ಮುಡಬೂಳ ಗ್ರಾಮದ ನಿವಾಸಿ ಲಕ್ಷ್ಮೀಕಾಂತ (24), ಸೇಡಂ ತಾಲೂಕಿನ ಬೀಜನಳ್ಳಿ ಗ್ರಾಮದ ನಿವಾಸಿ ಪ್ರಕಾಶ ಬಸ್ಸಪ್ಪ (22) ಮೃತಪಟ್ಟವರು.
ಕೆಕೆಆರ್ಟಿಸಿ ಬಸ್ ಚಿತ್ತಾಪುರದಿಂದ ಸನ್ನತಿ ಕಡೆಗೆ ಹಾಗೂ ಬೈಕ್ ಸವಾರರು ಬಮ್ಮನಳ್ಳಿ ಗ್ರಾಮದ ಕಡೆಯಿಂದ ಸೇಡಂ ತಾಲೂಕಿನ ಬೀಜನಳ್ಳಿ ಗ್ರಾಮಕ್ಕೆ ತೆರಳುವಾಗ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಸುದ್ದಿ ತಿಳಿಯುತ್ತಿದ್ದಂತೆ ಎಸ್ಪಿ ಅಡ್ಡೂರು ಶ್ರೀನಿವಾಸಲು, ಡಿವೈಎಸ್ಪಿ ಶಂಕರಗೌಡ ಪಾಟೀಲ್, ಸಿಪಿಐ ಎಸ್.ಸಿ. ಪಾಟೀಲ್, ಪಿಎಸ್ಐ ಮಂಜುನಾಥ ರೆಡ್ಡಿ, ಸಿಬ್ಬಂದಿಗಳಾದ ದತ್ತು, ಅಯ್ಯಣ್ಣ, ಅಝರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚಿತ್ತಾಪುರ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




