Kalaburagi | ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ನಿಮಿತ್ತ ಎ.10ರಿಂದ ಅರಿವು ಉತ್ಸವ: ಹನುಮಂತ ಇಟಗಿ

ಕಲಬುರಗಿ : ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿ ಅಂಗವಾಗಿ ನಗರದ ಹೀರಾಪುರ ಕ್ರಾಸ್ ಸಮೀಪ ಎ.10ರಿಂದ ಆರು ದಿನಗಳ ಕಾಲ “ಅಂಬೇಡ್ಕರ್ ಅರಿವು ಉತ್ಸವ”ವನ್ನು ಆಯೋಜಿಸಲಾಗಿದೆ ಎಂದು ಜಯಂತ್ಯೋತ್ಸವ ಸಮಿತಿಯ ಜಿಲ್ಲಾಧ್ಯಕ್ಷ ಹನುಮಂತ ಇಟಗಿ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ಸವದ ಅವಧಿಯಲ್ಲಿ ಪ್ರತಿದಿನವೂ ವಿಶೇಷ ಉಪನ್ಯಾಸ ಕಾರ್ಯಕ್ರಮಗಳು ನಡೆಯಲಿದ್ದು, ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನಾಧಾರಿತ ನಾಟಕ ಪ್ರದರ್ಶನ, ಸಂಗೀತ ಕಾರ್ಯಕ್ರಮಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಅಭಿನಂದನಾ ಸಮಾರಂಭಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಇದೇ ವೇಳೆ ಏಪ್ರಿಲ್ 6ರಂದು ಡಾ. ಬಿ.ಆರ್. ಅಂಬೇಡ್ಕರ್, ಭಾರತದ ಸಂವಿಧಾನ ಹಾಗೂ ಜ್ಯೋತಿರಾವ್ ಫುಲೆ ಅವರ ಕುರಿತು ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಭಾಷಣ ಸ್ಪರ್ಧೆಗಳು ನಡೆಯಲಿವೆ.
ಅದೇ ರೀತಿ ಏಪ್ರಿಲ್ 12ರಂದು 135ಕ್ಕೂ ಹೆಚ್ಚು ಜನರಿಂದ ನೇತ್ರದಾನ ಕಾರ್ಯಕ್ರಮವೂ ನಡೆಯಲಿದೆ. ಜ್ಞಾನ ಪ್ರಕಾಶ್ ಸ್ವಾಮೀಜಿ, ಹ.ರಾ ಮಹೇಶ್, ಆರ್.ಡಿ. ಮಲ್ಲಯ್ಯ, ಕೋಟಿ ರಾಮಯ್ಯ, ಕವಿತಾ ರೆಡ್ಡಿ, ಅಪ್ಪಗೆರೆ ಸೋಮಶೇಖರ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅರವಿಂದ ಕಮಲಾಪುರ, ಡಾ.ಅನಿಲ್ ಟೆಂಗಳಿ, ಅಲ್ಲಮಪ್ರಭು ನಿಂಬರ್ಗಾ, ಸಲೀಮ್ ಶೇಖ್, ಮಹೇಶ್ ತೆಲ್ಲೂರು, ದಶರಥ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.






