ಕಲಬುರಗಿ | ಕುವೆಂಪು ಅವರು ಕರುನಾಡು ಕಂಡ ವಿಶ್ವಚೇತನ : ಡಿ.ಎಂ.ನದಾಫ್

ಕಲಬುರಗಿ : ಕುವೆಂಪು ಅವರು ಕರುನಾಡು ಕಂಡ ವಿಶ್ವಚೇತನವಾಗಿದ್ದಾರೆ ಎಂದು ಅಫಜಲ್ ಪುರ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಡಿ.ಎಂ ನದಾಫ್ ಹೇಳಿದರು.
ಅಫಜಲ್ ಪುರ ಪಟ್ಟಣದ ಮಹಾಂತೇಶ್ವರ ವಿದ್ಯಾವರ್ಧಕ ಸಂಘದ ಕನ್ನಡ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಆಶ್ರಯದಲ್ಲಿ ನಡೆದ ವಿಶ್ವಮಾನವ ದಿನದಂದು ಅವರು ಮಾತನಾಡಿದರು.
ಕುವೆಂಪು ಭಾರತ ಕಂಡ ವಿಶ್ವ ಮಾನವರಲ್ಲಿಯೇ ಅಗ್ರಗಣ್ಯರಾಗಿ ನಿಲ್ಲುತ್ತಾರೆ. ಅವರ ಸಾಹಿತ್ಯ ಕೇವಲ ಲಲಿತ ಕಲೆ ಮತ್ತು ಭಾಷಾಜ್ಞಾನ ಮಾತ್ರ ಆಗಿರಲಿಲ್ಲ. 20ನೇ ಶತಮಾನ ಕಂಡ ಈ ಅಪರೂಪದ ದಾರ್ಶನಿಕ, ಜೀವನ ಅನುಭವದ ಸಮಗ್ರ ಆಯಾಮಗಳನ್ನು ಕಲಾತ್ಮಕವಾಗಿ ತಮ್ಮ ಕೃತಿಗಳಲ್ಲಿ ಚಿತ್ರಿಸಿದ್ದಾರೆ. ಅವರ ಕನ್ನಡಪ್ರಜ್ಞೆ 'ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ' ಎಂದು ಹಾಡಿದರೆ 'ಓ ನನ್ನ ಚೇತನ ಆಗು ನೀ ಅನಿಕೇತನ' ಎಂದು ಅವರ ವಿಶ್ವಮಾನವ ಪ್ರಜ್ಞೆ ಜನಮನದಲ್ಲಿ ಮೂಡಿ ನಿಂತಿದೆ ಎಂದರು.
ಈ ಸಂದರ್ಭದಲ್ಲಿ ಪ್ರಭಾರಿ ಮುಖ್ಯ ಉಪಾಧ್ಯಾಯ ಚಂದ್ರಕಾಂತ ಗುಂಡದ ನಾರಾಯಣ ನೀಲಗಾರ್, ಮಳೆoದ್ರ, ಸುರೇಶ್ ಗಣಿಹಾರ್, ಶ್ರೀಕಾಂತ ಪಾಟೀಲ್, ಗಂಗಾಧರ ಕಾಂಬಳೆ, ಮಲ್ಲಮ್ಮ, ಅರ್ಚನಾ ಕಟ್ಟಿ, ಕೀರ್ತನಾ ಸರಾಫ್, ಶರಣಗೌಡ ಪಾಟೀಲ್, ಅನಿಲ್ ಹುಳ್ಳಿ ಮತ್ತು ಇತರರು ಉಪಸ್ಥಿತರಿದ್ದರು.







