Kalaburagi | ಗುಲ್ಬರ್ಗಾ ವಿವಿ ಬಳಿ ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ ಜಮೀನು ಮಂಜೂರು: ಸಿಂಡಿಕೇಟ್ ಸದಸ್ಯರಿಗೆ ಸತ್ಕಾರ

ಕಲಬುರಗಿ: ಸೇಡಂ ಮಾರ್ಗವಾಗಿ ಸಂಚರಿಸುವ ಬಸ್ಸುಗಳ ಸುಗಮ ಸಂಚಾರಕ್ಕಾಗಿ ಗುಲ್ಬರ್ಗಾ ವಿಶ್ವವಿದ್ಯಾಲಯದ ಬಳಿ ಸ್ಯಾಟಲೈಟ್ ಬಸ್ ನಿಲ್ದಾಣ ನಿರ್ಮಾಣಕ್ಕೆ 2 ಎಕರೆ ಜಮೀನು ಕೆಕೆಆರ್ಟಿಸಿ ಸಂಸ್ಥೆಗೆ ಮಂಜೂರು ಮಾಡಿದ ಗುಲ್ಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ನಿರ್ಧಾರಕ್ಕೆ ಕೆಕೆಆರ್ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ ಸಂತಸ ವ್ಯಕ್ತಪಡಿಸಿದರು.
ಬುಧವಾರ ಸಿಂಡಿಕೇಟ್ ಸದಸ್ಯರನ್ನು ಸತ್ಕರಿಸಿ ಅಭಿನಂದಿಸಿದ ಅವರು, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಪ್ರಸ್ತಾವನೆಗೆ ಸಾರ್ವಜನಿಕ ಹಿತಾಸಕ್ತಿ ಹಾಗೂ ಜನಸೇವೆಯ ದೃಷ್ಟಿಯಿಂದ ಜಮೀನು ಮಂಜೂರು ಮಾಡಿರುವುದು ಮಹತ್ವದ ನಿರ್ಧಾರವಾಗಿದೆ ಎಂದು ಹೇಳಿದರು.
ಈ ಸ್ಯಾಟಲೈಟ್ ಬಸ್ ನಿಲ್ದಾಣ ನಿರ್ಮಾಣದಿಂದ ಕಲಬುರಗಿ ನಗರದ ಸಾರಿಗೆ ವ್ಯವಸ್ಥೆಗೆ ಹೊಸ ದಿಕ್ಕು ದೊರೆಯಲಿದ್ದು, ವಿದ್ಯಾರ್ಥಿಗಳು, ಪ್ರಯಾಣಿಕರು ಹಾಗೂ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದರು.
ಜಮೀನು ಮಂಜೂರಾತಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಉನ್ನತ ಶಿಕ್ಷಣ ಸಚಿವ ಹಾಗೂ ಗುಲ್ಬರ್ಗಾ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಎಂ.ಸಿ. ಸುಧಾಕರ್, ಶಾಸಕರಾದ ಅಲ್ಲಮಪ್ರಭು ಪಾಟೀಲ್ ಹಾಗೂ ಕನೀಜ್ ಫಾತಿಮಾ ಅವರ ಸಹಕಾರವನ್ನು ಇದೇ ಸಂದರ್ಭದಲ್ಲಿ ಕೊಂಡಾಡಿದರು.
ಸ್ಯಾಟಲೈಟ್ ಬಸ್ ನಿಲ್ದಾಣ ನಿರ್ಮಾಣಗೊಂಡ ಬಳಿಕ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಸಂಚಾರಕ್ಕೆ ಮತ್ತಷ್ಟು ಅನುಕೂಲ ಕಲ್ಪಿಸುವ ಜೊತೆಗೆ ವಿಶ್ವವಿದ್ಯಾಲಯಕ್ಕೆ ಪ್ರತ್ಯೇಕ ಬಸ್ ಸೇವೆ ಒದಗಿಸಲಾಗುವುದು ಎಂದು ಅರುಣಕುಮಾರ ಪಾಟೀಲ ಭರವಸೆ ನೀಡಿದರು.
ಸಿಂಡಿಕೇಟ್ ಸದಸ್ಯರು ನೀಡಿದ ಪ್ರಮುಖ ಸಲಹೆಗಳನ್ನು ಸಹ ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು ಹಾಗೂ ಕುಲಪತಿ ಪ್ರೊ. ಶಶಿಕಾಂತ ಎಸ್. ಉಡಿಕೇರಿ, ರಿಜಿಸ್ಟ್ರಾರ್ ರಮೇಶ್ ಲಂಡನ್ಕರ್, ಮೌಲ್ಯಾಮಾಪನ ವಿಭಾಗದ ಕುಲಸಚಿವ ನಿಂಗಪ್ಪ ಕಣ್ಣೂರ್, ವಿತ್ತಾಧಿಕಾರಿ ಜಯಾಂಬಿಕಾ, ಸಿಂಡಿಕೇಟ್ ಸದಸ್ಯರುಗಳಾದ ಉದಯ್ ಕಾಂತ್ ಪಾಟೀಲ, ಪೀರ್ ಜಾದ್ ಫಹಿಮುದ್ದೀನ್, ಮಲ್ಲಣ್ಣ ಎಸ್. ಮಡಿವಾಳ, ರಾಘವೇಂದ್ರ ಎಂ. ಭೈರಪ್ಪ, ಸಿದ್ದಪ್ಪ ಸುಳ್ಳದ ಉಪಸ್ಥಿತರಿದ್ದರು.






