Kalaburagi | ಜು.12ರಂದು ಸಾಹಿತಿ ರಮೇಶ್ ಮಾರನಾಳ ಅವರ ಮೂರು ಕೃತಿಗಳ ಲೋಕಾರ್ಪಣೆ

ಕಲಬುರಗಿ : ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಘಟಕ ಕಲಬುರಗಿ ಹಾಗೂ ನಿಹಾರಿಕಾ ಪಬ್ಲಿಕೇಷನ್ಸ್ ಸಂಯುಕ್ತ ಆಶ್ರಯದಲ್ಲಿ ಸಾಹಿತಿ ರಮೇಶ್ ಶಂಕರಪ್ಪ ಮಾರನಾಳ ಅವರ ಮೂರು ಕೃತಿಗಳ ಲೋಕಾರ್ಪಣೆ ಸಮಾರಂಭ ಜುಲೈ 12ರಂದು ಸಂಜೆ 4 ಗಂಟೆಗೆ ನಗರದ ಕನ್ನಡ ಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ‘ಭಾವಧಾರೆ’ (ಕವನ ಸಂಕಲನ), ‘ನಾನೊಂದು ಹೆಣ್ಣಾಗಿ’ (ಕಥಾ ಸಂಕಲನ) ಹಾಗೂ ‘ಶ್ರಮದ ಶಿಲ್ಪಿಗಳು’ (ಕವನ ಸಂಕಲನ) ಕೃತಿಗಳನ್ನು ಹಿರಿಯ ಸಾಹಿತಿ ಎ.ಕೆ. ರಾಮೇಶ್ವರ ಲೋಕಾರ್ಪಣೆ ಮಾಡಲಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ಅಜೀಮ್ ಪ್ರೇಮ್ಜಿ ಫೌಂಡೇಶನ್ನ ಕರ್ನಾಟಕ ಮುಖ್ಯಸ್ಥ ರುದ್ರೇಶ್ ಎಸ್. ವಹಿಸಲಿದ್ದು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ್ ಪಾಟೀಲ್ ತೇಗಲತಿಪ್ಪಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಅಜೀಮ್ ಪ್ರೇಮ್ಜಿ ಶಾಲೆಯ ಪ್ರಾಂಶುಪಾಲೆ ರಾಜಶ್ರೀ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಲಿದ್ದು, ಬಿಡುಗಡೆಯಾಗಲಿರುವ ಕೃತಿಗಳ ಕುರಿತು ಹಿರಿಯ ಪತ್ರಕರ್ತ ಪ್ರಭಾಕರ್ ಜೋಶಿ ಹಾಗೂ ಹಿರಿಯ ಸಾಹಿತಿಗಳಾದ ಸಂಧ್ಯಾ ಹೊನಗುಂಟಿಕರ್ ಮತ್ತು ಗವಿಸಿದ್ದಪ್ಪ ಎಚ್. ಪಾಟೀಲ್ ಪರಿಚಯ ಹಾಗೂ ವಿಮರ್ಶಾತ್ಮಕ ಅಭಿಪ್ರಾಯಗಳನ್ನು ಮಂಡಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ತಾಳಿಕೋಟೆಯ ಬ್ರಿಲಿಯನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾನಾಗೌಡ ನಡುವಿನಮನಿ, ಅಜೀಮ್ ಪ್ರೇಮ್ಜಿ ಫೌಂಡೇಶನ್ನ ಗ್ಲಾಡ್ಸನ್ ಇ., ಜೆಸ್ಕಾಂ ಜಾಗೃತ ದಳದ ಡಿವೈಎಸ್ಪಿ ಬಾಸು ಚವ್ಹಾಣ, ಯಾದಗಿರಿಯ ಅಜೀಮ್ ಪ್ರೇಮ್ಜಿ ಶಾಲೆಯ ಪ್ರಾಂಶುಪಾಲ ಅನಿಲ್ ಎಸ್. ಅಂಗಡಿಕಿ, ಕರ್ನಾಟಕ ಪ್ರದೇಶ ಬಂಜಾರ ಸೇವಾ ಸಂಘದ ವಿಜಯಪುರ ಜಿಲ್ಲಾಧ್ಯಕ್ಷ ಡಾ. ಬಸವರಾಜ ಚವ್ಹಾಣ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಪ್ರಭು ಚೆನ್ನೂರ, ರವಿಕುಮಾರ್ ಶಹಪೂರಕರ್, ರಾಜು ಎಸ್. ರಾಠೋಡ ಹಾಗೂ ರೇವಣಸಿದ್ದಪ್ಪ ಬುಯ್ಯಾರ್ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.
ಸಾಹಿತ್ಯಾಸಕ್ತರು, ಓದುಗರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಆಯೋಜಕರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.






