ಕಲಬುರಗಿ: ನಿವೃತ್ತಿಗೆ ಮುನ್ನವೇ ಹೆದ್ದಾರಿ ಯೋಜನಾಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ

ಕಲಬುರಗಿ: ಇದೇ ತಿಂಗಳು ಮಾರ್ಚ್ 31ರಂದು ನಿವೃತ್ತಿಯಾಗಲಿರುವ ಲೋಕೋಪಯೋಗಿ ಇಲಾಖೆಯ ರಾಜ್ಯ ಹೆದ್ದಾರಿ ಯೋಜನಾಧಿಕಾರಿಯ ಕಲಬುರಗಿ ಮನೆ ಸೇರಿದಂತೆ ಇತರ ಕಡೆಗಳಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.
ರಾಜ್ಯ ಹೆದ್ದಾರಿ ಯೋಜನಾಧಿಕಾರಿ ಆಗಿರುವ ಜಗನ್ನಾಥ್ ಹಲಿಂಗೆ ಅವರ ಮನೆ ಫಾರ್ಮ್ ಹೌಸ್ ಸೇರಿ ಆರು ಕಡೆ ದಾಳಿ ನಡೆಸಿ, ಕಡತಗಳನ್ನು ಶೋಧಿಸುತ್ತಿದ್ದಾರೆ.
ಕಲಬುರಗಿಯಲ್ಲಿನ ಎನ್ ಜಿಒ ಕಾಲೋನಿ, ಬೀದರ್ ಮತ್ತು ಬೆಂಗಳೂರು ನಗರದ ಮನೆ, ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಧನ್ನೂರ್ ಗ್ರಾಮದಲ್ಲಿರುವ ಆಸ್ತಿ ಮಾಡಿರುವ ಬಗ್ಗೆ ಪತ್ತೆಯಾಗಿದೆ.
ಕಲಬುರಗಿ ನಗರದ ಎನ್ ಜಿಒ ಕಾಲೋನಿಯಲ್ಲಿರುವ ಮನೆಯಲ್ಲಿ 2 ಕೆಜಿಗೂ ಹೆಚ್ಚು ಬೆಳ್ಳಿ, ಆಳಂದದಲ್ಲಿ 30 ಎಕರೆ ಜಮೀನು ಇರುವ ಬಗ್ಗೆ ಮಾಹಿತಿ ಲಭಿಸಿದೆ ಎಂದು ಲೋಕಾಯುಕ್ತ ಪೊಲೀಸ್ ಮೂಲಗಳು ತಿಳಿಸಿವೆ.
ಕಲಬುರಗಿ ಲೋಕಾಯುಕ್ತ ಎಸ್ಪಿ ಬಿ.ಕೆ.ಉಮೇಶ್, ಡಿವೈಎಸ್ಪಿ ಗೀತಾ ಬೇನಾಳ ಮತ್ತು ಇತರ ಸಿಬ್ಬಂದಿ ಒಳಗೊಂಡ ತಂಡದಿಂದ ಕ್ಷಿಪ್ರ ಕಾರ್ಯಾಚರಣೆ ನಡೆಸಲಾಗಿದ್ದು, ಇನ್ನಷ್ಟು ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ತಿಳಿದುಬಂದಿದೆ.





