ಕಲಬುರಗಿ | ಔಷಧಿ ಪಡೆಯುವಾಗ ಎಡವಿಬಿದ್ದು ವ್ಯಕ್ತಿಗೆ ಗಂಭೀರ ಗಾಯ

ಕಲಬುರಗಿ : ಇತ್ತೀಚೆಗೆ ಹೊಸದಾಗಿ ಲೋಕಾರ್ಪಣೆಗೊಂಡ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಆಸ್ಪತ್ರೆಯ ಮೆಡಿಕಲ್ ನಲ್ಲಿ ಔಷಧಿ ಪಡೆಯಲು ಹೋಗಿದ್ದ ವ್ಯಕ್ತಿಯೊಬ್ಬ 12 ಅಡಿ ಆಳಕ್ಕೆ ಬಿದ್ದು ಗಂಭೀರ ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ.
ನಗರದ ತಾರಫೈಲ್ ಬಡಾವಣೆಯ ನಿವಾಸಿ ಪಾಂಡುರಂಗ ಜಗನ್ನಾಥ್ ಮೋರೆ (37) ಗಾಯಗೊಂಡಿರುವ ವ್ಯಕ್ತಿಯಾಗಿದ್ದಾನೆ. ಕೂಲಿ ಕೆಲಸ ಮಾಡುವ ಪಾಂಡುರಂಗ ಅವರು, ಔಷಧಿ ಪಡೆಯಲು ಗೆಳೆಯನೊಂದಿಗೆ ಜಯದೇವ ಆಸ್ಪತ್ರೆಯ ಮೆಡಿಕಲ್ ಪಕ್ಕದಲ್ಲಿರುವ ಕಿಟಕಿಯಲ್ಲಿ ಔಷಧಿ ಪಡೆಯಲು ಹೋಗಿದ್ದರು. ಈ ವೇಳೆ ಆಯತಪ್ಪಿ 12 ಅಡಿ ಆಳದ ಕಂದಕಕ್ಕೆ ಬಿದ್ದಿದ್ದಾರೆ. ತೊಡೆ ಮತ್ತು ಟೊಂಕದ ಮೂಳೆ ಬಿರುಕು ಬಿಟ್ಟಿದ್ದು, ಎರಡೂ ಕಾಲುಗಳಿಗೆ ತೀವ್ರ ಪೆಟ್ಟಾಗಿದೆ ಎಂದು ತಿಳಿದುಬಂದಿದೆ.
ಗಾಯಗೊಂಡ ಪಾಂಡುರಂಗ, ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಾಂಡುರಂಗ ಮೋರೆಗೆ ಮೂರು ಮಕ್ಕಳಿದ್ದು, ಗಂಭೀರ ಗಾಯಗಳಾಗಿದ್ದರಿಂದ ಚಿಕಿತ್ಸಾ ವೆಚ್ಚ ಭರಿಸಲು ಕಷ್ಟವಾಗುತ್ತದೆ, ಜನಪ್ರತಿನಿಧಿಗಳು ನಮ್ಮ ಆಸರೆಗೆ ಬರಬೇಕು, ಪತಿಯ ಈ ಘಟನೆಗೆ ಕಾರಣವಾದ ಜಯದೇವ ಆಸ್ಪತ್ರೆಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವೆ ಎಂದು ಪತ್ನಿ ಪೂಜಾ ಜಗನ್ನಾಥ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಬಿದ್ದು ಗಾಯಗೊಂದಿರುವುದು ಇದು ಮೂರನೇ ಪ್ರಕರಣ ಎನ್ನಲಾಗಿದೆ. ಘಟನೆಯು ಬ್ರಹ್ಮಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.







