ಕಲಬುರಗಿ | ರಾಜ್ಯ ಸರ್ಕಾರಕ್ಕೆ ಎರಡು ವರ್ಷದ ಸಂಭ್ರಮ: ಮಾಹಿತಿ ಮಳಿಗೆ ಉದ್ಘಾಟಿಸಿದ ಸಚಿವ ಡಾ.ಶರಣಪ್ರಕಾಶ್ ಪಾಟೀಲ್

ಕಲಬುರಗಿ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಕಲಬುರಗಿ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಬುಧವಾರ ಆಯೋಜಿಸಿದ ರಾಜ್ಯ ಸರ್ಕಾರದ ಎರಡು ವರ್ಷಗಳ ಸಾಧನೆ ಬಿಂಬಿಸುವ ಮಾಹಿತಿ ಮಳಿಗೆ ಪ್ರದರ್ಶನವನ್ನು ಸಚಿವ ಡಾ.ಡಾ.ಶರಣಪ್ರಕಾಶ್ ಪಾಟೀಲ್ ಅವರು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಸಚಿವರು, ರಾಜ್ಯ ಸರ್ಕಾರ ನಾಡಿನ 7 ಕೋಟಿ ಜನರ ಬದುಕು ಗಟ್ಟಿಗೊಳಿಸಲು ಪಂಚ ಗ್ಯಾರಂಟಿ ಯೋಜನೆ ಜಾರಿಗೆ ತಂದಿದೆ. ಚುನಾವಣೆ ಪೂರ್ವ ನೀಡಿದ ಭರವಸೆಯಂತೆ 5 ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ತರಲಾಗಿದೆ. ವಿರೋಧ ಪಕ್ಷಗಳು ಸುಖಾ ಸುಮ್ಮನೆ ಆರೋಪ ಮಾಡುವುದನ್ನು ಬಿಟ್ಟು ವಾಸ್ತಾವಂಶ ನೋಡಿ ಮಾತನಾಡಬೇಕು ಎಂದು ಹೇಳಿದರು.
ಕಳೆದ ಎರಡು ವರ್ಷದಲ್ಲಿ ಕೃಷಿ, ಆರೋಗ್ಯ, ಮೂಲಸೌಕರ್ಯ, ವಸತಿ ಕ್ಷೇತ್ರದಲ್ಲಿ ಸಾಧನೆ, ಅನ್ನದಾತನ ಮೊಗದಲ್ಲಿ ಮಂದಹಾಸ ಮೂಡಿಸುವಂತೆ ರೈತಾಪಿ ವರ್ಗಕ್ಕೆ ಯೋಜನೆಗಳು, ಹಿಂದುಳಿದದವರ ಕಲ್ಯಾಣ ಸೇರಿದಂತೆ ಸಾಧನೆ ಪ್ರತಿಬಿಂಬ ಹಾಗೂ ಪಂಚ ಗ್ಯಾರಂಟಿ ಯೋಜನೆಗಳಿಂದ ಜನರಿಗಾದ ಅನುಕೂಲ, ಪಲಾನುಭವಿಗಳ ಅಭಿಪ್ರಾಯ, ಸರ್ಕಾರ ಇದಕ್ಕೆ ಭರಿಸಿದ ಹಣ ಹೀಗೆ ಸಮಗ್ರ ಮಾಹಿತಿಯನ್ನು ಈ ಮಳಿಗೆ ಹೊಂದಿದೆ. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳ ಸಂದೇಶದೊಂದಿಗೆ ಸಾರ್ಥಕ ಸಂಭ್ರಮದ "ಪ್ರಗತಿಯತ್ತ ಕರ್ನಾಟಕ" ಬಿಂಬಿಸುವ ಈ ಮಾಹಿತಿ ಮಳಿಗೆಗೆ ಸಾರ್ವಜನಿಕರು, ಪ್ರಯಾಣಿಕರು ಭೇಟಿ ನೀಡಿ ವೀಕ್ಷಿಸಬೇಕೆಂದರು.
ಈ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಹೊರತರಲಾದ ಪಂಚ ಗ್ಯಾರಂಟಿ ಪ್ರಗತಿ ಕಿರುಹಿತ್ತಿಗೆಯನ್ನು ಸಾರ್ವಜನಿಕರಿಗೆ ವಿತರಿಸಲಾಯಿತು. ಜೂ.4 ರಿಂದ 10ರ ವರೆಗೆ ಮಾಹಿತಿ ಮಳಿಗೆ ಜನರ ವೀಕ್ಷಣೆಗೆ ಮುಕ್ತವಾಗಿರಲಿದೆ. ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆ ವರೆಗೂ ಸಾರ್ವಜನಿಕರು, ಪ್ರಯಾಣಿಕರು ವೀಕ್ಷಿಸಬಹುದಾಗಿದೆ.
ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರಿ, ಉಪಾಧ್ಯಕ್ಷ ಸೋಮಶೇಖರ ಹಿರೇಮಠ, ನರಸಿಂಹಲು, ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್, ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ, ಜಿಲ್ಲಾ ಪಂಚಾಯತ್ ಸಿಇಓ ಭಂವರ್ ಸಿಂಗ್ ಮೀನಾ, ಕೆ.ಕೆ.ಆರ್.ಟಿ.ಸಿ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ, ಕಲಬುರಗಿ ವಿಭಾಗ-2ರ ನಿಯಂತ್ರಣಾಧಿಕಾರಿ ಎಸ್.ಜಿ.ಗಂಗಾಧರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಡಿ.ಕೆ.ರಾಜರತ್ನ, ರವಿ ಮಿರಸ್ಕರ್, ಉಮಾಶಂಕರ ಚಿನಮಳ್ಳಿ, ಸೈಯದ್ ಇಸ್ಮಾಯಿಲ್ ಪಾಷಾ, ನರಸಿಂಹ, ಅಶೋಕ ಸೇರಿದಂತೆ ಮತ್ತಿತರರು ಇದ್ದರು.







