ಕಲಬುರಗಿ| ಮುಂಗಾರು ಹಂಗಾಮಿನ ಅಂದೋಲನಕ್ಕೆ ಚಾಲನೆ

ಚಿತ್ತಾಪುರ; ಪಟ್ಟಣದ ಪ್ರಜಾಸೌಧದ ಆವರಣದಲ್ಲಿ ಕೃಷಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ 2026-27ನೇ ಸಾಲಿನ ಮುಂಗಾರು ಹಂಗಾಮಿನ ಆಂದೋಲನಕ್ಕೆ ತಹಶೀಲ್ದಾರ್ ನಾಗಯ್ಯ ಹಿರೇಮಠ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ನಾಗಯ್ಯ ಹಿರೇಮಠ, ಈ ವರ್ಷ ಮುಂಗಾರು ರಾಜ್ಯಕ್ಕೆ ಒಂದು ವಾರ ಮುಂಚೆ ಪ್ರವೇಶಿಸುತ್ತಿರುವುದರಿಂದ ಪ್ರಚಾರ ಆಂದೋಲನವನ್ನು ಎಲ್ಲಾ ಪಂಚಾಯಿತಿಗಳಲ್ಲಿ ಪರಿಣಾಮ ಕಾರಿಯಾಗಿ ಕೈಗೊಳ್ಳಬೇಕು ಎಂದು ತಿಳಿಸಿದರು.
ಕೃಷಿಕ ಸಮಾಜದ ಅಧ್ಯಕ್ಷ ನಾಗರೆಡ್ಡಿ ಗೋಪಸೇನ್ ಮಾತಾನಾಡಿ, ಕೃಷಿ ಇಲಾಖೆಯ ಎಲ್ಲಾ ಸಿಬ್ಬಂದಿಯವರು ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ರೈತರಿಗೆ ಸಮಗ್ರ ಮಾಹಿತಿಯನ್ನು ನೀಡುವರು, ಆದ್ದರಿಂದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ ಮಾತನಾಡಿ, ರೈತ ದೇಶದ ಬೆನ್ನೆಲುಬು ಹೀಗಾಗಿ ರೈತರಿಗೆ ಸೂಕ್ತ ಸಮಯಕ್ಕೆ ಬೀಜ ರಸಗೊಬ್ಬರ ಪೂರೈಸಲು ಕ್ರಮವಹಿಸಬೇಕು ಎಂದು ತಿಳಿಸಿದರು.
ಸಹಾಯಕ ಕೃಷಿ ನಿರ್ದೇಶಕ ಸಂಜೀವಕುಮಾರ್ ಮಾನಕರ್ ಮಾತಾನಾಡಿ, ಸದರಿ ಆಂದೋಲನದಲ್ಲಿ ರೈತರಿಗೆ ಮಣ್ಣು ಪರೀಕ್ಷೆ, ಬಿತ್ತನೆ ಬೀಜಗಳ ಗಟ್ಟಿಗೊಳುಸುವಿಕೆ, ಬೀಜೋಪಚಾರ, ರಾಸಾಯನಿಕ ಗೋಬ್ಬರಗಳ ಸಮತೋಲನ ಬಳಕೆ ಹಾಗೂ ಗೊಡ್ಡು ರೋಗ ನಿರ್ವಹಣೆ, ತಿಪ್ಪೆಗೊಬ್ಬರ ಉಪಚಾರ, ಬಸವನ ಹುಳು ನಿರ್ವಹಣೆ, ಕಸ್ತೂಟ ಕಳೆ ನಿಯಂತ್ರಣ, ಕಬ್ಬು ನಿರ್ವಹಣೆ ಹಾಗೂ ಬರ ನಿರೋಧಕ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗುವುದು, ಹಾಗಾಗಿ ರೈತರು ಗ್ರಾಮ ಪಂಚಾಯತಿವಾರು ನಿಗದಿ ಪಡಿಸಿರುವ ದಿನಾಂಕದಂದು ಹಾಜರಿದ್ದು, ಸದರಿ ಆಂದೋಲನದ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಕೃಷಿಕ ಸಮಾಜದ ಉಪಾಧ್ಯಕ್ಷ ಚೆನ್ನಬಸ್ಸಪ್ಪ ಜೀವಣಗಿ, ಕೃಷಿ ಅಧಿಕಾರಿಗಳಾದ ಸುರೇಖಾ ಬಸವರಾಜ ಬಂಗರಗಿ, ಮಲ್ಲಿಕಾರ್ಜುನ, ಕರಣಕುಮಾರ, ಶ್ರೀನಿವಾಸ, ತಾಂತ್ರಿಕ ಸಹಾಯಕರಾದ ಸಚೀನಕುಮಾರ, ಜಗದೀಶ್, ವಿಶ್ವಾರಾಧ್ರ ಸೇರಿದಂತೆ ರೈತರು ಇದ್ದರು.






