ಕಲಬುರಗಿ | ಕಡಬೂರ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ಕಲಬುರಗಿ : ಚಿತ್ತಾಪೂರ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಡಬೂರ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿಸಲಾಯಿತು.
ಸಸಿಗೆ ನೀರು ಹಾಕುವುದರ ಮೂಲಕ ಕಾರ್ಯಕ್ರಮವನ್ನು ಶಾಲೆಯ ಪ್ರಭಾರಿ ಮುಖ್ಯಗುರುಗಳಾದ ವೀರಭದ್ರ ದೊಡಮನಿ ಹಾಗೂ ವಿಜ್ಞಾನ ಶಿಕ್ಷಕರಾದ ಗುಂಡಪ್ಪಾ ಭಂಕೂರ ಉದ್ಘಾಟಿಸಿದರು.
ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಉದ್ದೇಶಿಸಿ ಶ್ರೀ ಗುಂಡಪ್ಪಾ ಬಸವರಾಜ ಭಂಕೂರ ವಿಶೇಷ ಉಪನ್ಯಾಸ ನೀಡುತ್ತಾ, ಸರ್.ಸಿ.ವಿ.ರಾಮನ್ ಅವರು 7 ನವೆಂಬರ್ 1888 ರಂದು ತಮಿಳುನಾಡಿನ ತಿರುಚಿನಾಪಳ್ಳಿ ಜಿಲ್ಲೆಯ 'ತಿರುವನೈಕಾವಲ್' ಎಂಬಲ್ಲಿ ಜನಿಸಿದರು. ಪ್ರತಿ ವರ್ಷ ಫೆ.28 ರಂದು "ರಾಮನ್ ಪರಿಣಾಮ" ಸಂಶೋಧನೆಯ ಸವಿ ನೆನಪಿಗಾಗಿ ಹಾಗೂ 1930 ರಲ್ಲಿ ಈ ಸಂಶೋಧನೆಗೆ ನೊಬೆಲ್ ಪ್ರಶಸ್ತಿ ದೊರಕಿದ್ದಕ್ಕಾಗಿ ಫೆ.28 ನ್ನು ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನಾಗಿ ದೇಶದ ಎಲ್ಲೆಡೆ ಆಚರಿಸಲಾಗುತ್ತದೆ ಎಂದರು.
ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯಿಂದ ದೇಶದ ಭವಿಷ್ಯ ಉಜ್ವಲವಾಗುತ್ತದೆ. ಯಾವುದೇ ಮೂಢನಂಬಿಕೆಯ ಸತ್ಯಾಸತ್ಯತೆಯನ್ನು ವಿಜ್ಞಾನ ತಿಳಿಸಿಕೊಡುತ್ತದೆ ಇದರಿಂದ ಮೂಢನಂಬಿಕೆಗಳು ನಾಶವಾಗುತ್ತವೆ. ಎಲ್ಲಾ ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವನೆ ಮತ್ತು ವೈಜ್ಞಾನಿಕ ದೃಷ್ಟಿಕೋನವನ್ನು ಬೆಳಸಿಕೊಳ್ಳಬೇಕು ಎಂದು ಹೇಳಿದರು.
ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ಶಾಲಾ ಮಕ್ಕಳಿಗೆ ವಿನೂತನ ಬಹಿರಂಗ ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮವನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಪೂಜಾ ಹೆರೂರ್ ನಿರೂಪಿಸಿದರು. ನಾಗರತ್ನ ಹಡಪದ ಸ್ವಾಗತಿಸಿದರು. ಮಲ್ಲಮ್ಮ ತಳವಾರ ವಂದಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಪ್ರಭಾರಿ ಮುಖ್ಯ ಗುರುಗಳಾದ ವೀರಭದ್ರ ದೊಡಮನಿ, ಕಡಬೂರ ಗ್ರಾಮ ಪಂಚಾಯತ್ ಸದಸ್ಯರಾದ ಗುರಣ್ಣ ರಾವೂರ, ಸಿದ್ದು ಕಟ್ಟಿಮನಿ, ಗುಂಡಪ್ಪಾ ಬಸವರಾಜ ಭಂಕೂರ, ಪೂಜಾ ಹೆರೂರ, ಸೋನಾಬಾಯಿ ರಾಠೋಡ್ ಮತ್ತು ಮಲ್ಲಮ್ಮ ತಳವಾರ ಉಪಸ್ಥಿತರಿದ್ದರು.







