Kalaburagi | ಪಿಡಿಎ ಕಾಲೇಜಿನಲ್ಲಿ ಮೇ 22, 23ರಂದು ‘ನಿರ್ಮಾಣ-2026’ ಉತ್ಸವ : ಶಶೀಲ್ ಜಿ. ನಮೋಶಿ

ಕಲಬುರಗಿ: ನಗರದ ಪಿ.ಡಿ.ಎ. ಎಂಜಿನಿಯರಿಂಗ್ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ತಾಂತ್ರಿಕ ಹಾಗೂ ಸಾಂಸ್ಕೃತಿಕ ಉತ್ಸವ ‘ನಿರ್ಮಾಣ-2026’ ಅನ್ನು ಮೇ 22 ಮತ್ತು 23ರಂದು ಭವ್ಯವಾಗಿ ಆಯೋಜಿಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯರು ಹಾಗೂ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶಶೀಲ್ ಜಿ. ನಮೋಶಿ ತಿಳಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 22ರಂದು ಬೆಳಿಗ್ಗೆ 10 ಗಂಟೆಗೆ ಮಹಾವಿದ್ಯಾಲಯದ ಪಿಡಿಎ ಆಡಿಟೋರಿಯಂನ ವಿದ್ಯಾರ್ಥಿ ಚಟುವಟಿಕೆ ಕೇಂದ್ರದಲ್ಲಿ ಉತ್ಸವಕ್ಕೆ ಚಾಲನೆ ನೀಡಲಾಗುವುದು ಎಂದು ಹೇಳಿದರು.
ಉತ್ಸವದ ಉದ್ಘಾಟಕರಾಗಿ ಕಲಬುರಗಿಯ ಕಾನೂನು ಮತ್ತು ಸುವ್ಯವಸ್ಥೆಯ ಉಪ ಪೊಲೀಸ್ ಆಯುಕ್ತರಾದ ಶಾಲೂ ಅವರು ಭಾಗವಹಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಶೀಲ್ ಜಿ. ನಮೋಶಿ ವಹಿಸಲಿದ್ದಾರೆ. ಗೌರವ ಅತಿಥಿಗಳಾಗಿ ಬೆಂಗಳೂರಿನ ಇನ್ಫಿನಿಯಾನ್ ಟೆಕ್ನಾಲಜೀಸ್ ಸಂಸ್ಥೆಯ ಹಿರಿಯ ನಿರ್ದೇಶಕ ಹಾಗೂ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿ ಡಾ. ಪ್ರಕಾಶ ಬಾಲಸುಬ್ರಮಣಿಯನ್ ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು ಮತ್ತು ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.
ಉತ್ಸವದ ಅಂಗವಾಗಿ ‘ಟೆಕ್ನೋವಿಷನ್’ ಅಡಿಯಲ್ಲಿ ವಿವಿಧ ತಾಂತ್ರಿಕ ಸ್ಪರ್ಧೆಗಳು ನಡೆಯಲಿದ್ದು, 12 ಗಂಟೆಗಳ ಕೋಡಿಂಗ್ ಸ್ಪರ್ಧೆ ‘ಕೋಡ್ ಎಕ್ಸರೇಟ್’, ‘ಸ್ಪೀಕ್ ಟ್ಯಾಕೂಲರ್’, ‘ಟೆಕ್ ಆಕ್ಷನ್ ವಾರ್ಸ್’ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕಲ್ಯಾಣ ಕರ್ನಾಟಕ ಭಾಗದ ವಿವಿಧ ತಾಂತ್ರಿಕ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಗುವುದು ಎಂದು ವಿವರಿಸಿದರು.
ಇದೇ ವೇಳೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದ್ದು, ನೃತ್ಯ, ಗಾಯನ ಸೇರಿದಂತೆ ವಿವಿಧ ಕಲಾ ಪ್ರದರ್ಶನಗಳು ನಡೆಯಲಿವೆ. ಕ್ರೀಡಾ ಚಟುವಟಿಕೆಗಳ ಭಾಗವಾಗಿ ವಾಲಿಬಾಲ್, ಫುಟ್ಬಾಲ್, ಗಲ್ಲಿ ಕ್ರಿಕೆಟ್ ಸೇರಿದಂತೆ ಹಲವು ಸ್ಪರ್ಧೆಗಳು ಜರುಗಲಿವೆ ಎಂದು ಹೇಳಿದರು.
ಉತ್ಸವದ ಅಂಗವಾಗಿ ಮೇ 22ರಂದು ಬೆಳಿಗ್ಗೆ 6 ಗಂಟೆಗೆ “ಮಾಡು ಅಥವಾ ಮಡಿ – ನಿಮ್ಮ ಭವಿಷ್ಯ ನಿಮ್ಮ ಆಯ್ಕೆ” ಎಂಬ ಘೋಷವಾಕ್ಯದೊಂದಿಗೆ ಮ್ಯಾರಥಾನ್ ಆಯೋಜಿಸಲಾಗಿದೆ. ಮಿನಿ ವಿಧಾನಸೌಧದಿಂದ ಆರಂಭವಾಗುವ ಮ್ಯಾರಥಾನ್ ಸರ್ದಾರ್ ವಲ್ಲಭಭಾಯಿ ವೃತ್ತದ ಮೂಲಕ ಪಿ.ಡಿ.ಎ. ಕಾಲೇಜಿಗೆ ತಲುಪಲಿದೆ. ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಮ್ಯಾರಥಾನ್ನಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಉತ್ಸವದ ನಿರ್ವಹಣೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎಸ್.ಆರ್. ಪಾಟೀಲ, ಉಪಪ್ರಾಚಾರ್ಯರಾದ ಡಾ. ಎಸ್.ಆರ್. ಹೊಟ್ಟಿ ಹಾಗೂ ಡಾ. ಭಾರತಿ ಹರಸೂರು ವಹಿಸಿಕೊಂಡಿದ್ದಾರೆ. ಸಂಯೋಜಕರಾಗಿ ಪ್ರೊ. ಜಯಪ್ರಕಾಶ ಎ.ಕೆ. ಕಾರ್ಯನಿರ್ವಹಿಸಲಿದ್ದು, ವಿವಿಧ ವಿಭಾಗಗಳ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿ ಸಂಚಾಲಕರು ಉತ್ಸವದ ಯಶಸ್ಸಿಗೆ ಕೈಜೋಡಿಸಲಿದ್ದಾರೆ.
ಎರಡು ದಿನಗಳ ಈ ಉತ್ಸವ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳಿಸುವುದರ ಜೊತೆಗೆ ಆತ್ಮವಿಶ್ವಾಸ ಬೆಳೆಸುವ ವೇದಿಕೆಯಾಗಲಿದೆ ಎಂದು ಶಶೀಲ್ ನಮೋಶಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಡಾಶರಣಬಸಪ್ಪ ಹರವಾಳ, ಡಾ.ಅನಿಲ್ ಕುಮಾರ್ ಪಟ್ಟಣ, ಪ್ರಾಚಾರ್ಯ ಡಾ. ಎಸ್.ಆರ್. ಪಾಟೀಲ್, ಎಸ್.ಆರ್. ಹೊರಟ್ಟಿ, ಡಾ.ಭಾರತಿ ಹರಸೂರು ಸೇರಿದಂತೆ ಸಿಬ್ಬಂದಿ ವರ್ಗದವರು ಇದ್ದರು.






