Kalaburagi | ಕುಖ್ಯಾತ ಮನೆಗಳ್ಳನ ಬಂಧನ: 13.40 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ವಶ

ಕಲಬುರಗಿ: ಸ್ಟೇಷನ್ ಬಜಾರ್ ಪೊಲೀಸರು ಕಾರ್ಯಾಚರಣೆ ನಡೆಸಿ ಕುಖ್ಯಾತ ಮನೆಗಳ್ಳನೊಬ್ಬನನ್ನು ಬಂಧಿಸಿದ್ದು, ಆತನಿಂದ ನಾಲ್ಕು ಮನೆ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ 13.40 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ. ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಬಂಧಿತನನ್ನು ತೆಲಂಗಾಣದ ಹೈದರಾಬಾದ್ನ ನಾಮಪಲ್ಲಿಯ ಹಜ್ ಹೌಸ್ ಸಮೀಪದ ನಿವಾಸಿ ಮಹ್ಮದ್ ಮುಜಾಹಿದ್ ಅಲಿಯಾಸ್ ಜಾವೀದ್ (32) ಎಂದು ಗುರುತಿಸಲಾಗಿದೆ ಎಂದು ತಿಳಿಸಿದರು.
ಮನೆಗೆ ಬೀಗ ಹಾಕಿ ತೆರಳಿದ್ದಾಗ ಕಳ್ಳತನ :
ಜೀವನ ಪ್ರಕಾಶ ಶಾಲೆಯ ಹಿಂಭಾಗದ ಹಳೆ ಜೇವರ್ಗಿ ರಸ್ತೆಯ ನಿವಾಸಿ ಶಿವರಾಜ ಅವಂಟಿ ಅವರು ಕುಟುಂಬ ಸಮೇತ ಬಾಗಲಕೋಟೆಗೆ ತೆರಳಿದ್ದರು. ಜನವರಿ 15ರಂದು ಬೆಳಿಗ್ಗೆ 10 ಗಂಟೆಗೆ ಮನೆಗೆ ಬೀಗ ಹಾಕಿ ತೆರಳಿದ್ದ ಅವರು, ಜನವರಿ 21ರಂದು ಮಧ್ಯಾಹ್ನ ವಾಪಸ್ ಬಂದಾಗ ಮನೆಯ ಬಾಗಿಲಿನ ಕೀಲಿ ಮುರಿದಿರುವುದು ಕಂಡುಬಂದಿತ್ತು.
ಮನೆಯಲ್ಲಿದ್ದ 5 ಗ್ರಾಂ ಚಿನ್ನದ ಉಂಗುರ, ತಲಾ 3 ಗ್ರಾಂ ತೂಕದ ಎರಡು ಸುತ್ತುಂಗುರಗಳು ಹಾಗೂ 16 ಸಾವಿರ ರೂ. ನಗದು ಕಳ್ಳತನವಾಗಿತ್ತು. ಈ ಕುರಿತು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಗಾಗಿ ರಚಿಸಲಾಗಿದ್ದ ವಿಶೇಷ ತಂಡವು ಖಚಿತ ಮಾಹಿತಿ ಆಧರಿಸಿ ಮಹ್ಮದ್ ಮುಜಾಹಿದ್ ಅಲಿಯಾಸ್ ಜಾವೀದ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಸ್ಟೇಷನ್ ಬಜಾರ್ ಠಾಣೆಯ ಎರಡು ಹಳೆಯ ಪ್ರಕರಣಗಳು ಸೇರಿದಂತೆ ಒಟ್ಟು ನಾಲ್ಕು ಮನೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.
ಬಂಧಿತನಿಂದ ಸ್ಟೇಷನ್ ಬಜಾರ್ ಠಾಣೆಯ ಗುನ್ನೆ ನಂ. 171/2025, 175/2025 ಹಾಗೂ 12/2026 ಮತ್ತು ಚೌಕ್ ಪೊಲೀಸ್ ಠಾಣೆಯ ಗುನ್ನೆ ನಂ. 110/2026ಕ್ಕೆ ಸಂಬಂಧಿಸಿದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಒಟ್ಟು 85 ಗ್ರಾಂ ಚಿನ್ನಾಭರಣ ಹಾಗೂ 260 ಗ್ರಾಂ ಬೆಳ್ಳಿ ಆಭರಣ, 13.40 ಲಕ್ಷ ರೂ. ಮೌಲ್ಯದ ಸ್ವತ್ತನ್ನು ಜಪ್ತಿ ಮಾಡಲಾಗಿದೆ. ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಡಾ. ಶರಣಪ್ಪ ಎಸ್.ಡಿ. ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಡಿಸಿಪಿ ಶಾಲೂ ಹಾಗೂ ಸ್ಟೇಷನ್ ಬಜಾರ್ ಠಾಣೆಯ ಪಿಐ ಜಿ.ಎಂ.ಪಾಟೀಲ ಉಪಸ್ಥಿತರಿದ್ದರು.






