ಕಲಬುರಗಿ | ಗೋದುತಾಯಿ ಕಾಲೇಜಿನಲ್ಲಿ ನಡೆದ ‘ಯುವ ಪ್ರತಿಭಾ ಸಂಭ್ರಮ’ಕ್ಕೆ ತೆರೆ

ಕಲಬುರಗಿ : ಗೋದುತಾಯಿ ದೊಡ್ಡಪ್ಪ ಅಪ್ಪ ಪದವಿ ಮಹಿಳಾ ಮಹಾವಿದ್ಯಾಲಯ ಮತ್ತು ಗೋದುತಾಯಿ ಶಿಕ್ಷಣ (ಬಿ.ಎಡ್) ಮಹಾವಿದ್ಯಾಲಯಗಳ ಸಂಯುಕ್ತಾಶ್ರಯದಲ್ಲಿ ಲಿಂ. ಡಾ.ಶರಣಬಸವಪ್ಪ ಅಪ್ಪ, ಡಾ.ದಾಕ್ಷಾಯಿಣಿ ಎಸ್.ಅಪ್ಪ ಮತ್ತು ಚಿ.ದೊಡ್ಡಪ್ಪ ಅಪ್ಪ ಅವರ ಜನ್ಮದಿನದ ಪ್ರಯುಕ್ತ ಮೂರು ದಿನಗಳ ಅಂತರ್ ಮಹಾವಿದ್ಯಾಲಯಗಳ ವಿವಿಧ ಸ್ಪರ್ಧೆಗಳ ‘ಯುವ ಪ್ರತಿಭಾ ಸಂಭ್ರಮ-2025’ದಲ್ಲಿ ಸರಕಾರಿ ಮಹಾವಿದ್ಯಾಲಯವು (ಸ್ವಾಯತ್ತ) ಸಮಗ್ರ ಪ್ರಶಸ್ತಿ ಪಡೆಯಿತು. ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯವು ರನ್ನರ್ಅಫ್ ಪ್ರಶಸ್ತಿ ಪಡೆದುಕೊಂಡಿತು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿ ಮಹಾನಗರ ಪಾಲಿಕೆಯ ಉಪಮಹಾಪೌರರಾಗಿರುವ ತೃಪ್ತಿ ಅಲ್ಲದ್ಲಾಖೆ ಮಾತನಾಡಿ, ವಿದ್ಯಾರ್ಥಿಗಳು ರಾಷ್ಟ್ರದ ಭವಿಷ್ಯ, ಅವರಲ್ಲಿ ಅಡಗಿರುವ ಸೃಜನಶೀಲತೆ, ಶಕ್ತಿಯು ಮತ್ತು ಆತ್ಮವಿಶ್ವಾಸವು ದೇಶದ ಪ್ರಗತಿಯ ದಿಕ್ಕನ್ನು ನಿರ್ಧರಿಸುತ್ತದೆ. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ, ಸಹಕಾರದ ಮನೋವೃತ್ತಿ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸುತ್ತವೆ ಎಂದರು.
ಕಾರ್ಯಕ್ರಮದ ಇನ್ನೋರ್ವ ಅತಿಥಿ ಶರಣಬಸವ ವಿಶ್ವವಿದ್ಯಾಲಯದ ಡೀನ್ ಡಾ.ಲಕ್ಷ್ಮಿ ಪಾಟೀಲ ಮಾಕಾ ಮಾತನಾಡಿ, ಸೋಲು-ಗೆಲವುಗಳು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯವಾಗಿದೆ. ಆದರೆ ನಿಮ್ಮ ಪ್ರಯತ್ನ ಮತ್ತು ನಿಷ್ಠೆ ಶಾಶ್ವತ. ಪೂಜ್ಯ ಡಾ.ಅಪ್ಪ ಅವರು ಮಹಿಳೆಯರ ಸಬಲೀಕಣಕ್ಕೆ ಹೆಚ್ಚು ಒತ್ತು ಕೊಟ್ಟಿದ್ದರು. ಅದರಲ್ಲೂ ನಮ್ಮ ಸಂಸ್ಥೆಯಲ್ಲಿ ಸುಮಾರು 60 ರಿಂದ 65 ಪ್ರತಿಶತ ಮಹಿಳಾ ವಿದ್ಯಾರ್ಥಿಗಳಿದ್ದಾರೆ. ಮಹಿಳೆಯರು ಸಾಧನೆಗೈಯುವುದಕ್ಕೆ ಶರಣಬಸವೇಶ್ವರ ಸಂಸ್ಥಾನದ ಕೊಡುಗೆ ಬಹಷ್ಟಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಪುಟ್ಟಮಣಿ ದೇವಿದಾಸ ಮಾತನಾಡಿದರು. ವೇದಿಕೆ ಮೇಲೆ ಮಹಾವಿದ್ಯಾಲಯದ ಸಂಗೀತ ವಿಭಾಗದ ಮುಖ್ಯಸ್ಥೆ ಡಾ.ಸೀಮಾ ಪಾಟೀಲ, ನ್ಯಾಕ್ ಸಂಯೋಜಕರಾದ ಡಾ.ಸಿದ್ಧಲಿಂಗರೆಡ್ಡಿ ಮತ್ತು ಸುಪ್ರಿಯಾ ನಾಗಶೆಟ್ಟಿ ಇದ್ದರು.
ಗೋದುತಾಯಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಕಲ್ಪನಾ ಭೀಮಳ್ಳಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಪ್ರಾಧ್ಯಾಪಕ ಪ್ರಸಾದ ಅಷ್ಟಗೀಕರ್ ನಿರೂಪಿಸಿ, ವಂದಿಸಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವಿವಿಧ ಮಹಾವಿದ್ಯಾಲಯದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.







