Kalaburagi | ಸೆ.27ರ ‘ಬಸವಾದಿ ಶರಣರ ಹಿಂದೂ ಸಮಾವೇಶ’ಕ್ಕೆ ವಿರೋಧ; ಸೆ.25ರಂದು ಬೃಹತ್ ಪ್ರತಿಭಟನೆಗೆ ಕರೆ

ಕಲಬುರಗಿ: ಸೆಪ್ಟೆಂಬರ್ 27ರಂದು ಕಲಬುರಗಿಯಲ್ಲಿ ಆಯೋಜಿಸಲಾಗಿರುವ ‘ಬಸವಾದಿ ಶರಣರ ಹಿಂದೂ ಸಮಾವೇಶ’ಕ್ಕೆ ವಿರೋಧ ವ್ಯಕ್ತಪಡಿಸಿರುವ ಬಸವ ತತ್ವ ಹಾಗೂ ಸಂವಿಧಾನ ಸಂರಕ್ಷಣೆ ಹೋರಾಟ ಸಮಿತಿ, ಸೆಪ್ಟೆಂಬರ್ 25ರಂದು ನಗರದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ಹಾಗೂ ವಿಚಾರ ಸಂಕಿರಣ ಆಯೋಜಿಸಲು ನಿರ್ಧರಿಸಿದೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಮುಖಂಡರಾದ ಆರ್.ಜಿ. ಶೆಟಗಾರ ಮತ್ತು ಮೀನಾಕ್ಷಿ ಬಾಳಿ, ಸೆ.25ರಂದು ಬೆಳಿಗ್ಗೆ 11 ಗಂಟೆಗೆ ಕನ್ನಡ ಭವನದಿಂದ ಜಗತ್ ವೃತ್ತದವರೆಗೆ ಬೃಹತ್ ರ್ಯಾಲಿ ನಡೆಯಲಿದ್ದು, ಬಳಿಕ ಜಗತ್ ವೃತ್ತದಲ್ಲಿ ವಿಚಾರ ಸಂಕಿರಣ ಆಯೋಜಿಸಲಾಗುವುದು ಎಂದು ತಿಳಿಸಿದರು.
ಸಮಿತಿ ಮುಖಂಡರ ಪ್ರಕಾರ, ವೈದಿಕ ತತ್ವ ಹಾಗೂ ವರ್ಣಾಶ್ರಮ ವ್ಯವಸ್ಥೆಯನ್ನು ವಿರೋಧಿಸಿದ 12ನೇ ಶತಮಾನದ ಬಸವಣ್ಣನವರ ವಚನಗಳು ಮತ್ತು ಬಸವಾದಿ ಶರಣರ ತತ್ವಗಳನ್ನು ನಿರ್ದಿಷ್ಟ ಧಾರ್ಮಿಕ ಚೌಕಟ್ಟಿನಲ್ಲಿ ವ್ಯಾಖ್ಯಾನಿಸುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಆತಂಕವಿದೆ ಎಂದು ಹೇಳಿದರು.
ಶರಣರನ್ನು ಕೇಂದ್ರವಾಗಿಟ್ಟುಕೊಂಡು ಚಿಂತನೆ ಮತ್ತು ಮಂಥನ ನಡೆಸುವುದು ಎಲ್ಲರ ಹಕ್ಕು. ಆದರೆ ಬಸವಾದಿ ಶರಣರ ತತ್ವಗಳನ್ನು ಹಿಂದೂ ಧರ್ಮದೊಂದಿಗೆ ಜೋಡಿಸುವುದು ಸರಿಯಲ್ಲ ಎಂಬುದು ಸಮಿತಿಯ ಅಭಿಪ್ರಾಯ ಎಂದು ಅವರು ತಿಳಿಸಿದರು.
ಸಮಿತಿ ಗೌರವಾಧ್ಯಕ್ಷ ಪ್ರೊ. ಆರ್.ಕೆ. ಹುಡಗಿ ಮಾತನಾಡಿ, ಬಸವ ಜಯಂತಿ ಆಚರಣೆ ಹಾಗೂ ಸೆ.27ರ ಸಮಾವೇಶದ ಸಂಘಟನೆ ಕುರಿತು ತಮ್ಮ ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಅರ್ಜುನ ಭದ್ರೆ, ಪಿಡ್ಡಪ್ಪ ಜಾಲಗಾರ, ರವೀಂದ್ರ ಶಾಬಾದಿ, ಅಶೋಕ ಭೂಳಿ, ರವಿ ಸಜ್ಜನ, ಶಾಮ ನಾಟೀಕಾರ ಹಾಗೂ ಸುಧಾಮ ಧನ್ನಿ ಉಪಸ್ಥಿತರಿದ್ದರು.






