ಕಲಬುರಗಿ | ದಂಡಗುಂಡ ಬಸವಣ್ಣನವರ ಜಾತ್ರೆ ಪ್ರಯುಕ್ತ ಶಾಂತಿ ಸಭೆ

ಚಿತ್ತಾಪುರ; ತಾಲೂಕಿನ ದಂಡಗುಂಡ ಗ್ರಾಮದಲ್ಲಿ ಆ.31ರ ಸೋಮವಾರದಂದು ನಡೆಯಲಿರುವ ಐತಿಹಾಸಿಕ ದಂಡಗುಂಡ ಬಸವಣ್ಣನವರ ಜಾತ್ರೆ ಪ್ರಯುಕ್ತ ಚಿತ್ತಾಪುರ ಪೊಲೀಸ್ ಠಾಣೆ ವತಿಯಿಂದ ಶಾಂತಿ ಸಭೆ ಹಮ್ಮಿಕೊಳ್ಳಲಾಯಿತು.
ನಂತರ ಡಿವೈಎಸ್ಪಿ ಶಂಕರಗೌಡ ಪಾಟೀಲ್ ಮಾತನಾಡಿ, ಈ ಭಾಗದಲ್ಲಿ ದಂಡಗುಂಡ ಬಸವಣ್ಣನವರ ಜಾತ್ರೆ ಅದ್ಧೂರಿಯಾಗಿ ಜರುಗುತ್ತದೆ. ಕಳೆದ ಭಾರಿ ಏನೆಲ್ಲ ತಪ್ಪುಗಳಾಗಿವೆ. ಅವುಗಳು ಈ ಭಾರಿ ನಡೆಯದಂತೆ ಪೊಲೀಸ್ ಇಲಾಖೆಯವರು ನೋಡಿಕೊಳ್ಳುವುದರ ಜೊತೆಗೆ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸುವುದರ ಮೂಲಕ ದಂಡಗುಂಡ ಬಸವಣ್ಣನವರ ಜಾತ್ರೆಯ ಯಶಸ್ವಿಗೆ ನಾವೆಲ್ಲರು ಶ್ರಮಿಸೋಣಾ ಎಂದರು.
ಅಳ್ಳೋಳ್ಳಿ ಗ್ರಾಮದಿಂದ ದಂಡಗುಂಡ ಗ್ರಾಮದ ಬಸವಣ್ಣನವರ ದೇವಸ್ಥಾನಕ್ಕೆ ಆಗಮಿಸುವ ಭಕ್ತರು ರಸ್ತೆಯ ಮೇಲೆ ಎಲ್ಲಿಯೂ ವಾಹನಗಳನ್ನು ನಿಲ್ಲಿಸಬಾರದು. ನೀವು ವಾಹನಗಳನ್ನು ನಿಲ್ಲಿಸಿ ಲಾಕ್ ಮಾಡಿ ದರ್ಶನ ಪಡೆದುಕೊಳ್ಳಲು ಹೋದರೆ ಸಾಕಷ್ಟು ತೊಂದರೆಯಾಗುತ್ತದೆ. ವಾಹನಗಳನ್ನು ಪಾರ್ಕಿಂಗ್ ನಲ್ಲೇ ನಿಲ್ಲಿಸಬೇಕು ಎಂದರು.
ದೇವಸ್ಥಾನದ ಗರ್ಭಗುಡಿಯ ಮುಖ್ಯದ್ವಾರವನ್ನು ಹಿಡಿದು 5 ದ್ವಾರಗಳಿವೆ. ಮುಖ್ಯ ದ್ವಾರದಿಂದ ಪ್ರತಿಯೊಬ್ಬರಿಗೆ ದರ್ಶನ ಪಡೆದುಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗುವುದು, ಬಲಗಡೆಯಿಂದ ಮಹಿಳೆಯರಿಗೆ, ಎಡಗಡೆಯಿಂದ ಪುರುಷರಿಗೆ ಅವಕಾಶ ಕೊಡಲಾಗುತ್ತಿದೆ. ಅದರಂತೆ ತಾವುಗಳು ದರ್ಶನ ಪಡೆದುಕೊಂಡು ಹೋಗಲು ಅವಕಾಶ ನೀಡಲಾಗುವುದು. ಪ್ರದಕ್ಷಣಿಗೆ ನಾವು ಯಾವುದೇ ಕಾರಣಕ್ಕೂ ಅವಕಾಶ ನೀಡಲ್ಲ. ಹೀಗಾಗಿ ಎಲ್ಲರು ಸಹಕರಿಸಬೇಕು ಎಂದರು.
ಸುರಕ್ಷತೆಗೆ ಹೆಚ್ಚಿನ ಮಹತ್ವ ಕೊಡಬೇಕು. ಅಂಗಡಿ ಮುಗ್ಗಂಟ್ಟುಗಳು ಸ್ವಲ್ಪ ಒಳಗಡೆ ಹಾಕಬೇಕು. ರಥದ ಗಾಲಿಗಳು ಸುಗಮವಾಗಿ ಹೋಗಲು ಸಹಕರಿಸಬೇಕು. ಇಲ್ಲದ್ದಿದ್ದರೆ ಅನಾಹುತಗಳು ಸಂಭವಿಸುವ ಸಾಧ್ಯತೆಗಳಿರುತ್ತವೆ. ದಾಸೋಹ ಮಾಡುವ ಸ್ಥಳದಲ್ಲೇ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದರು.
ಎಂ.ಎಲ್.ಸಿ, ದೇವಸ್ಥಾನ ಟ್ರಸ್ಟ್ ಕಮಿಟಿ ಉಪಾಧ್ಯಕ್ಷ ಬಿ.ಜಿ ಪಾಟೀಲ್ ಮಾತನಾಡಿ, ಕಳೆದ ವರ್ಷ ಪೊಲೀಸ್ ಇಲಾಖೆಯಿಂದ ಎಲ್ಲಾ ರೀತಿಯ ಸಕಲ ಸಿದ್ಧತೆಗಳನ್ನು ಮಾಡಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಕ್ರಮ ಕೈಗೊಂಡು ಜಾತ್ರೆ ಯಶಸ್ವಿಯಾಗಲು ಸಹಕರಿಸಿದರು. ಅದೇ ರೀತಿ ಈ ವರ್ಷವು ಕೂಡ ಪೊಲೀಸ್ ಇಲಾಖೆಯವರು ಎಲ್ಲಾ ರೀತಿಯ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಅದಕ್ಕೆ ಗ್ರಾಮದ ಮುಖಂಡರು, ಭಕ್ತರು ಸೇರಿದಂತೆ ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದರು.
ತಹಶೀಲ್ದಾರ್ ನಾಗಯ್ಯ ಹಿರೇಮಠ ಮಾತನಾಡಿ, ತಾಲೂಕು ಆಡಳಿತದ ವತಿಯಿಂದ ಭಕ್ತರಿಗೆ ಯಾವುದೇ ರೀತಿಯಿಂದ ತೊಂದರೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ನಾವೆಲ್ಲರು ಸೇರಿ ಜಾತ್ರೆ ಯಶಸ್ವಿಗೆ ಶ್ರಮಿಸೋಣ, ಜಾತ್ರೆಯಲ್ಲಿ ಯಾವುದೇ ರೀತಿಯ ಘಟನೆಗಳು ಜರುಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ವಿದ್ಯುತ್ ವ್ಯವಸ್ಥೆ, ಉಚಿತ ವೈದ್ಯಕೀಯ ಚಿಕಿತ್ಸೆ, ಆಂಬುಲೆನ್ಸ್ ವ್ಯವಸ್ಥೆ ಮಾಡಲು ತಾಲೂಕು ಆರೋಗ್ಯಾಧಿಕಾರಿಗೆ ಸೂಚಿಸಲಾಗುವುದು ಎಂದು ಭರವಸೆ ನೀಡಿದರು.
ಪಿಎಸ್ಐ ಮಂಜುನಾಥ ರೆಡ್ಡಿ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವು ಕೂಡ ಆ.31ರಂದು ದಂಡಗುಂಡ ಬಸವಣ್ಣನವರ ಜಾತ್ರೆ ಇರುವುದರಿಂದ ಯಾವುದೇ ರೀತಿಯ ಅಹಿತಕರ ಘಟನೆ ಜರುಗದಂತೆ ಮುನ್ನೆಚ್ಚರಿಕೆ ಕೈಗೊಂಡಿದ್ದು, ಗ್ರಾಮಸ್ಥರು ಹಾಗೂ ಭಕ್ತರು ಕೂಡ ಸಹಕಾರ ನೀಡಬೇಕು ಎಂದರು.
ದೇವಸ್ಥಾನ ಕಮಿಟಿ ಕಾರ್ಯದರ್ಶಿ ಚಂದ್ರಶೇಖರ ಆವಂಟಿ ಮಾತನಾಡಿದರು. ಈ ಸಂದರ್ಭದಲ್ಲಿ ದೇವಸ್ಥಾನ ಟ್ರಸ್ಟ್ ಸಮಿತಿ ಅಧ್ಯಕ್ಷ ಭಾಗಣ್ಣಗೌಡ ಸಂಕನೂರ, ಮಹಾಂತಗೌಡ, ರಾಜಶೇಖರ ಪಾಟೀಲ್ ಸೇರಿದಂತೆ ಗ್ರಾಮದ ಅನೇಕ ಮುಖಂಡರು ಹಾಗೂ ಭಕ್ತರು ಇದ್ದರು.
ಮಹೇಶ ರೋಮಾಲ್ ನಿರೂಪಿಸಿ, ವಂದಿಸಿದರು.






