ಕಲಬುರಗಿ | ಸುಸ್ಥಿರ ಕಲಬುರಗಿ ನಗರ ವಿನ್ಯಾಸಕ್ಕೆ ಯೋಜನಾ ತತ್ವ ಅತ್ಯಗತ್ಯ: ಶೈಲೇಂದ್ರ ಸಿಂಗ್

ಕಲಬುರಗಿ: ನಗರದ ಭವಿಷ್ಯವನ್ನು ರೂಪಿಸುವಲ್ಲಿ ಯೋಜನಾ ವಿನ್ಯಾಸ ಪ್ರಮುಖ ಪಾತ್ರ ವಹಿಸುತ್ತದೆ. ಯೋಜಿತವಲ್ಲದ ಬೆಳವಣಿಗೆಯು ನಗರ ವಿಘಟನೆಗೆ ಕಾರಣವಾಗುತ್ತದೆ. ಹೀಗಾಗಿ ಕಲಬುರಗಿ ನಗರ ಸುಸ್ಥಿರ ಅಭಿವೃದ್ಧಿಗೆ ಯೋಜನಾ ತತ್ವ ಅಳವಡಿಸಿಕೊಳ್ಳುವುದು ಅತ್ಯಗತ್ಯ ಎಂದು ನಗರ ಯೋಜನಾ ಇಲಾಖೆಯ ಕಲಬುರಗಿ ವಿಭಾಗದ ಜಂಟಿ ನಿರ್ದೇಶಕ ಶೈಲೇಂದ್ರ ಸಿಂಗ್ ಅಭಿಪ್ರಾಯಪಟ್ಟರು.
ನಗರ ಭೂ ಸಾರಿಗೆ ನಿರ್ದೇಶನಾಲಯ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ, ಕಲಬುರಗಿ ಮಹಾನಗರ ಪಾಲಿಕೆ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ, ಕಲಬುರಗಿ ನಗರ ಮೊಬಿಲಿಟಿ ಯೋಜನೆ, ವಿನ್ಯಾಸ ಹಾಗೂ ಕ್ರಿಯಾ ಸಂಶೋಧನಾ ಕೇಂದ್ರ ಹಾಗೂ ಪಿ.ಡಿ.ಎಸ್.ಎಸ್. ಸ್ಕೂಲ್ ಆಫ್ ಆರ್ಕಿಟೆಕ್ಚರ್ ವಿಭಾಗದ ಸಹಯೋಗದೊಂದಿಗೆ ಇತ್ತೀಚೆಗೆ ಕಲಬುರಗಿ ನಗರದ ಪಿ.ಡಿ.ಎ. ಕಾಲೇಜಿನಲ್ಲಿ ಮೂರು ದಿನಗಳ ಕಾಲ ವಿದ್ಯಾರ್ಥಿಗಳು, ಯುವ ವೃತ್ತಿಪರರು, ನಗರ ಯೋಜಕರು ಮತ್ತು ವಿನ್ಯಾಸಕರಿಗೆ ಆಯೋಜಿಸಿದ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸೂಕ್ತ ವಿನ್ಯಾಸವಿಲ್ಲದೆ ಬೆಳೆವಣಿಗೆಯು ವಿಘಟನೆಗೊಂಡ ನಗರಗಳಿಗೆ ಹೇಗೆ ಕಾರಣವಾಗುತ್ತದೆ ಎಂಬುದನ್ನು ಒತ್ತಿ ಹೇಳಿದ ಅವರು, ಸುಸ್ಥಿರ ನಗರ ಪರಿಸರವನ್ನು ನಿರ್ಮಿಸಲು ಹೊಸ ದೃಷ್ಟಿಕೋನಗಳು, ಆಲೋಚನೆಗಳ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಯುವ ಸಮೂಹ ಇದರ ಭಾಗಿಯಾಗಬೇಕು ಎಂದ ಅವರು, ನಗರ ಮೊಬಿಲಿಟಿ ಮತ್ತು ಅಭಿವೃದ್ಧಿಯಲ್ಲಿ ಸುಸ್ಥಿರ ಪರಿಹಾರಗಳೊಂದಿಗೆ ಕಲಬುರಗಿಯ ಭವಿಷ್ಯವನ್ನು ರೂಪಿಸಲು ಯುವ ಮನಸ್ಸುಗಳಿಗೆ ಮಾನ್ಸೂನ್ ಸ್ಟುಡಿಯೋ ಒಂದು ವೇದಿಕೆಯಾಗಿದೆ ಎಂದರು.
ಇದಕ್ಕೂ ಮುನ್ನ ಕಾರ್ಯಕ್ರಮ ಉದ್ಘಾಟಿಸಿದ ಎಚ್.ಕೆ.ಇ ಸಂಸ್ಥೆಯ ಉಪಾಧ್ಯಕ್ಷ ರಾಜಾ ಭೀಮಳ್ಳಿ ಮಾತನಾಡಿ, ನಗರ ಸನ್ನಿವೇಶದಲ್ಲಿ ವಾಸ್ತುಶಿಲ್ಪಿಗಳ ಮಹತ್ವದ ಬಗ್ಗೆ ವಿವರಿಸಿದರು. ಕೆ.ಎಲ್.ಇ ಟೆಕ್ ವಿಶ್ವವಿದ್ಯಾಲಯದ ಪ್ರಮುಖ ತಜ್ಞ ಪ್ರಾಧ್ಯಾಪಕಿ ಆರ್. ಗೀತಾಂಜಲಿ ರಾವ್ ಅವರು ನಗರ ಯೋಜನೆ ಮತ್ತು ನಗರ ವಿನ್ಯಾಸದ ಕುರಿತು ಪ್ರಾತ್ಯಕ್ಷಿಕೆಯನ್ನು ಪ್ರಸ್ತುತಪಡಿಸಿದರು.
ಕಾರ್ಯಕ್ರಮದ ಎರಡನೇ ದಿನದಂದು ಕೆ.ಎಲ್.ಇ ಟೆಕ್ ವಿಶ್ವವಿದ್ಯಾಲಯದ ಪ್ರೊ. ಕಲ್ಪೇಶ್ಕುಮಾರ್ ಪಟೇಲ್ ಅವರು ಪ್ರಸ್ತಾವಿತ ಪರಿಹಾರಗಳನ್ನು ಅಭಿವೃದ್ಧಿಪಡಿಸುವಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ಮತ್ತು ಮಾರ್ಗದರ್ಶನ ನೀಡಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಗಂಗಾಧರ ಮಳಗಿ, ಕೆಕೆಆರ್ಡಿಬಿ ಹೆಚ್ಚುವರಿ ನಿರ್ದೇಶಕಿ ಪ್ರವೀಣ ಪ್ರಿಯಾ ಡೇವಿಡ್, ನಗರ ಭೂ ಸಾರಿಗೆ ನಿರ್ದೇಶನಾಲಯದ ವಿಶೇಷಾಧಿಕಾರಿ ಡಾ.ಮೋನಿಕಾ ಕಶ್ಕರಿ, ಎಚ್.ಕೆ.ಇ. ಆಡಳಿತ ಮಂಡಳಿ ಸದಸ್ಯ ಶರಣಬಸಪ್ಪ ಹರ್ವಾಲ್, ಕಾರ್ಯದರ್ಶಿ ಉದಯಕುಮಾರ್ ಚಿಂಚೋಳಿ, ನಗರಾಭಿವೃದ್ಧಿ ಪ್ರಾಧಿಕಾರದ ನಗರ ಯೋಜನಾ ಸದಸ್ಯ ಶಿವಕುಮಾರ್ ಪಾಟೀಲ್ ಸೇರಿದಂತೆ ನಗರ ಭೂ ಸಾರಿಗೆ ನಿರ್ದೇಶನಾಲಯದ ಅಧಿಕಾರಿಗಳು ಮತ್ತು ಪಿ.ಡಿ.ಎಸ್.ಎಸ್. ವಿಭಾಗದ ಅಧ್ಯಾಪಕರು ಉಪಸ್ಥಿತರಿದ್ದರು.
ವಿದ್ಯಾರ್ಥಿ ತಂಡಕ್ಕೆ ಸನ್ಮಾನ :
ಮೂರು ದಿನಗಳ ಕಾರ್ಯಕ್ರಮದಲ್ಲಿ ತರಬೇತಿ ಪಡೆದ 3 ತಂಡಗಳಿಗೆ ನಗರ ವಿನ್ಯಾಸಕ್ಕೆ ಸಂಬಂಧಪಟ್ಟಂತೆ ನೀಡಲಾದ ಟಾಸ್ಕ್ ನಲ್ಲಿ ವಿಜೇತ ತಂಡಕ್ಕೆ ಕೆ.ಕೆ.ಆರ್.ಡಿ.ಬಿ. ಮಂಡಳಿ ಕಾರ್ಯದರ್ಶಿ ನಲಿನ್ ಅತುಲ್ ಅವರು ಅಭಿನಂದಿಸಿದರು. ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಅವಿನಾಶ್ ಎಸ್.ಶಿಂಧೆ, ಕೆ.ಕೆ.ಆರ್.ಟಿ.ಸಿ ಚೀಫ್ ಸಿಸ್ಟಮ್ ಮ್ಯಾನೇಜರ್ ಸಂತೋಷ್ ಗೊಗೇರಿ, ನಗರ ಯೋಜನಾ ಇಲಾಖೆಯ ಕಲಬುರಗಿ ವಿಭಾಗದ ಜಂಟಿ ನಿರ್ದೇಶಕ ಶೈಲೇಂದರ್ ಸಿಂಗ್ ಅವರುಗಳು ಸಾಥ್ ನೀಡಿದರು. ಈ ಸಂದರ್ಭದಲ್ಲಿ ಕಲಬುರಗಿಯ ಕಾರ್ಯಕ್ರಮ ಯಶಸ್ವಿಗೊಳಿಸಿದ್ದಕ್ಕಾಗಿ ಪಿಡಿಎಸ್ಎಸ್ ಕಾಲೇಜ್ ಆಫ್ ಆರ್ಕಿಟೆಕ್ಚರ್ ಮತ್ತು ನಗರ ಭೂ ಸಾರಿಗೆ ನಿರ್ದೇಶನಾಲಯದ ತಂಡಕ್ಕೆ ಅಧಿಕಾರಿ ವೃಂದ ಶ್ಲಾಘಿಸಿತು.







