ಕಲಬುರಗಿ | ಎಐ ಸದ್ಬಳಕೆ ಮಾಡುವ ನಿಟ್ಟಿನಲ್ಲಿ ಪೊಲೀಸರಿಗೆ ತರಬೇತಿ : ಅಲೋಕ್ ಕುಮಾರ್

ಕಲಬುರಗಿ: ಸೈಬರ್ ಅಪರಾಧಗಳು ನಮ್ಮ ರಾಜ್ಯ, ದೇಶಕ್ಕೆ ಸೀಮಿತವಾಗಿಲ್ಲ. ಹೊರದೇಶಕ್ಕೂ ವ್ಯಾಪಿಸಿದೆ. ಇದನ್ನು ಭೇದಿಸುವ ಸವಾಲು ನಮ್ಮ ಮುಂದಿದೆ. ಎಐ ಸದ್ಬಳಕೆ ಮಾಡುವ ನಿಟ್ಟಿನಲ್ಲಿ ಕೂಡ ಪೊಲೀಸರಿಗೆ ತರಬೇತಿ ನೀಡಲಾಗುತ್ತದೆ ಎಂದು ಪೊಲೀಸ್ ಇಲಾಖೆಯ ತರಬೇತಿ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆಲೋಕ್ ಕುಮಾರ್ ಹೇಳಿದರು.
ನಗರದ ಹೊರವಲಯದ ನಾಗನಹಳ್ಳಿಯ ಪೊಲೀಸ್ ತರಬೇತಿ ಮಹಾವಿದ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಆನ್ ಲೈನ್ ಮೂಲಕ ಹಣ ಕಳೆದುಕೊಳ್ಳುವವರ ಸಂಖ್ಯೆ ದಿನಂಪ್ರತಿ ಹೆಚ್ಚಾಗುತ್ತಿದ್ದು, ಸೈಬರ್ ಕ್ರೈಂ ಸಂಘಟಿತ ಅಪರಾಧವಾಗುತ್ತಿದೆ. ಬೆಂಗಳೂರಿನ ಇಂದಿರಾ ನಗರದ ನಿವಾಸಿ 32.81 ಕೋಟಿ ರೂ. ಕಳೆದುಕೊಂಡಿದ್ದಾರೆ. ಇಂತಹದ್ದೇ ಪ್ರಕರಣದ ಬೆನ್ನು ಹತ್ತಿದಾಗ ಬೆಳಗಾವಿಯಲ್ಲಿ 32 ಜನ ಸಿಕ್ಕಿ ಬಿದ್ದಿದ್ದಾರೆ ಎಂದರು.
ಕರ್ನಾಟಕ ಪೊಲೀಸರಿಗೆ ಸೈಬರ್ ಕ್ರೈಂ ಸೇರಿದಂತೆ ಪರಿಸ್ಥಿತಿಗೆ ಅನುಗುಣವಾಗಿ ಕಾರ್ಯನಿರ್ವಹಿಸಲು ಎಲ್ಲಾ ಹಂತದ ತರಬೇತಿ ನೀಡಲಾಗುತ್ತಿದೆ. ಎಐ ಸದ್ಬಳಕೆ ಮಾಡುವ ನಿಟ್ಟಿನಲ್ಲಿಯೂ ಸಿಬ್ಬಂದಿಗೆ ತರಬೇತಿ ನೀಡಲಾಗುವುದು. ಒಟ್ಟಿನಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಮತ್ತು ಸಮಾಜ ಘಾತುಕ ಶಕ್ತಿಗಳನ್ನು ನಿಯಂತ್ರಿಸಲು ಸಿಬ್ಬಂದಿಗಳಿಗೆ ಪರಿಪೂರ್ಣವಾದ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಾಗಹನಹಳ್ಳಿ ಪಿ.ಟಿ.ಸಿ. ಪ್ರಾಂಶುಪಾಲ ಮತ್ತು ಎಸ್.ಪಿ. ಡೆಕ್ಕಾ ಕಿಶೋರ್ ಬಾಬು ಉಪಸ್ಥಿತರಿದ್ದರು.







