ಕಲಬುರಗಿ | ವಿಚಾರವಾದಿ ಸೂಗಯ್ಯ ಹಿರೇಮಠ ಯುವ ಬರಹಗಾರರಿಗೆ ಮಾದರಿಯಾಗಿದ್ದರು : ಪ್ರೊ. ಶಿವರಾಜ ಪಾಟೀಲ್

ಕಲಬುರಗಿ: ಬಂಡಾಯ ಸಾಹಿತಿ ಪ್ರೊ. ಸೂಗಯ್ಯ ಹಿರೇಮಠ ಅವರದ್ದು ಅಪ್ಪಟ ಜಾನಪದ ಬದುಕಾಗಿತ್ತು. ವಿಚಾರವಾದಿಯಾಗಿ, ಹೋರಾಟಗಾರರಾಗಿ ಗುರುತಿಸಿಕೊಂಡಿದ್ದ ಅವರು, ಇಂದಿನ ಯುವ ಬರಹಗಾರರಿಗೆ ಮಾದರಿಯಾಗಿದ್ದರು ಎಂದು ಮಹಾಂತಜ್ಯೋತಿ ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಶಿವರಾಜ ಪಾಟೀಲ್ ಹೇಳಿದರು.
ಸೂಗಯ್ಯ ಹಿರೇಮಠ ಸಾಹಿತ್ಯ ಸಂಸ್ಕೃತಿ ಪ್ರತಿಷ್ಠಾನ ಹಾಗೂ ಸರ್ವೋದಯ ಅಭಿವೃದ್ಧಿ ಸೇವಾ ಸಂಘದ ಸಹಯೋಗದಲ್ಲಿ ನಗರದ ವಿಶ್ವೇಶ್ವರ ಭವನದಲ್ಲಿ ರವಿವಾರ ಆಯೋಜಿಸಿದ್ದ ಪ್ರೊ. ಸೂಗಯ್ಯ ಹಿರೇಮಠ ಅವರ ಬದುಕು ಬರಹ ಒಂದು ಚಿಂತನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಮ್ಮ ಸಾಹಿತ್ಯದ ಮೂಲಕ ಅಳಿದ ನಂತರವೂ ಉಳಿದ ಸೂಗಯ್ಯನವರು ನೇರ ನಡೆ ನುಡಿ ಉಳ್ಳವರಾಗಿದ್ದರು. ನಾಡಿನ ಸುಗಂಧವನ್ನು ನಾಡಿನಾದ್ಯಂತ ಪಸರಿಸಿದ ಸರಳ, ಸಜ್ಜನಿಕೆಯ ವ್ಯಕ್ತಿಯಾಗಿದ್ದರು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ವೈದ್ಯ ಸಾಹಿತಿ ಡಾ. ಎಸ್.ಎಸ್. ಗುಬ್ಬಿ ಮಾತನಾಡಿ, ವೈಚಾರಿಕ, ವಸ್ತುನಿಷ್ಠ ಬರಹಗಾರರಾಗಿದ್ದ ಸೂಗಯ್ಯನವರು ತಮ್ಮ ಕಾವ್ಯ ಕೃತಿಗಳ ಮೂಲಕ ಸಮಾಜದ ವ್ಯವಸ್ಥೆಯನ್ನು ಅನಾವರಣಗೊಳಿಸಿದರು ಎಂದರು.
ಸಿರಿಗನ್ನಡ ವೇದಿಕೆ ಮತ್ತು ಸಾಕ್ಷಿ ಪ್ರತಿಷ್ಠಾನದ ಅಧ್ಯಕ್ಷ ಡಾ. ಗವಿಸಿದ್ದಪ್ಪ ಪಾಟೀಲ್ ಅವರು ಸೂಗಯ್ಯ ಹಿರೇಮಠ ಅವರ ಕೃತಿಗಳ ಅವಲೋಕನ ಮಾಡಿದರು. ಸಾಮಾಜಿಕ ಚಿಂತನೆಗಳ ಕುರಿತು ಸಾಹಿತಿ ಡಾ. ಚಿ.ಸಿ. ನಿಂಗಣ್ಣ, ದೇಶಿಯ ಭಾಷೆ ಹಾಗೂ ಬಂಡಾಯದ ನಿಲುವುಗಳ ಕುರಿತು ಪತ್ರಕರ್ತ, ಲೇಖಕ ಡಾ. ಶಿವರಂಜನ ಸತ್ಯಂಪೇಟೆ ಮಾತನಾಡಿದರು. ಉಪನ್ಯಾಸಕ ಪ್ರೊ. ಕೆ.ವೀರಪ್ಪ ಹಿರೇಮಠ ಅವರ ಒಡನಾಟವನ್ನು ಸ್ಮರಿಸಿದರು.
ಟ್ರಸ್ಟ್ ಗೌರವಾಧ್ಯಕ್ಷ ಪ. ಮಾನು ಸಗರ ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷ ನಟರಾಜ ಸೂಗಯ್ಯ ಹಿರೇಮಠ, ಉಪಾಧ್ಯಕ್ಷ ಗಿರಿಮಲ್ಲಪ್ಪ ಹರವಾಳ ವೇದಿಕೆಯಲ್ಲಿದ್ದರು.
ಕಾರ್ಯಕ್ರಮವನ್ನು ಶಂಕರಗೌಡ ಪಾಟೀಲ್ ನಿರೂಪಿಸಿದರು. ಚಿದಾನಂದ ಹಿರೇಮಠ ಸ್ವಾಗತಿಸಿದರು. ಕುಶಾಲ ಯಡವಳ್ಳಿ ವಂದಿಸಿದರು. ಪ್ರೊ. ಎಸ್.ಎಲ್. ಪಾಟೀಲ್, ಕನಕಪ್ಪ ಬಿಲ್ಲವ, ಮಹೇಶ ಕುಲಕರ್ಣಿ, ಬಾಬು ಮಿಟೇಕರ್, ಮಂಜುನಾಥ ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.







