ಕಲಬುರಗಿ | ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ವತಿಯಿಂದ ಪ್ರತಿಭಟನೆ

ಕಲಬುರಗಿ : ಜಿಲ್ಲೆಯ ರೈತರ ವಿವಿಧ ಬೇಡಿಕೆಗಳು ಮತ್ತು ಸಮಸ್ಯೆಗಳ ಪರಿಹರಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲೆಯಲ್ಲಿ ತೊಗರಿ ಬೆಳೆ ನೇಟೆ ಹೋಗಿ ಸಾವಿರಾರು ರೈತರು ಕಳೆದ ಬಾರಿಗಿಂತ ಈ ಬಾರಿ ಕಂಗಾಲಾಗಿದ್ದಾರೆ, ಅವರಿಗೆ ಸೂಕ್ತ ಪರಿಹಾರ ಸರಕಾರದಿಂದ ನೀಡಬೇಕು ಹಾಗೂ ಮುಂಗಾರು ಅತಿವೃಷ್ಟಿಯಿಂದ ಹಾನಿಯಾದ ಬೆಳೆಗೆ ಪರಿಹಾರ ಕೊಡುವುದರಲ್ಲಿ ವಿಳಂಬ ನೀತಿ ತೋರುತ್ತಿರುವುದು ಸರಿಯಲ್ಲ ಎಂದು ಖಂಡಿಸಿದರು.
ಬೆಳೆ ವಿಮೆ ಇನ್ನೂ ರೈತರಿಗೆ ಹಣ ಸಂದಾಯ ಆಗಿರುವುದಿಲ್ಲ. ತೊಗರಿ ಬೆಳೆಗೆ ಕನಿಷ್ಠ ಬೆಂಬಲ ಬೆಲೆ 12,000 ರೂ. ಒದಗಿಸಬೇಕು, ಯಡ್ರಾಮಿ ತಾಲೂಕಿನ ಮಲ್ಲಾಬಾದ ಏತ ನೀರಾವರಿ ಕಾಮಗಾರಿ ಶೀಘ್ರದಲ್ಲಿ ಪೂರ್ಣಗೊಳಿಸಬೇಕು, ಪಿಎನ್ಸಿ ರಸ್ತೆ ಕಾಮಗಾರಿಯಿಂದ ರೈತರಿಗೆ ತೊಂದರೆ ಆಗಿದ್ದು, ಅದಕ್ಕೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.
ನೂತನವಾಗಿ ರಚನೆ ಆದಂತಹ ತಾಲೂಕುಗಳಿಗೆ ಮೂಲ ಸೌಕರ್ಯ ಒದಗಿಸುವುದೊಂದಿಗೆ ಅಭಿವೃದ್ಧಿಗೊಳಿಸಬೇಕು, ಎಲ್ಲಾ ಸಮಸ್ಯೆಗಳಿಗೂ ಹಾಗೂ ಬೇಡಿಕೆಗಳಿಗೂ ಶಿಘ್ರದಲ್ಲಿ ಕ್ರಮಗಳನ್ನು ಕೈಗೊಳ್ಳಬೇಕೆಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಡಾ.ಶಾಂತವೀರ ಶೀವಾಚಾರ್ಯರು, ಡಾ.ಗುರು ಮೂರ್ತಿ ಶಿವಾಚಾರ್ಯರು, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ವಾಸುದೇವ ಮೇಟಿ, ಜಿಲ್ಲಾ ಅಧ್ಯಕ್ಷ ಪ್ರಶಾಂತಗೌಡ ಮಾಲಿಪಾಟೀಲ್, ವೀರಯ್ಯ ಮುತ್ತಿಮಠ, ಮಹಿಳಾ ಜಿಲ್ಲಾಧ್ಯಕ್ಷೆ ಜ್ಯೋತಿ ಆರ್.ಹಿರೇಮಠ, ದಿವ್ಯಾ ಹಾಗರಗಿ, ಜ್ಯೋತಿ ಪಾಟೀಲ, ಪರ್ವತ ರೆಡ್ಡಿ, ಚಂದ್ರಕಲಾ, ಮಲ್ಲಣಗೌಡ ಹಗರಟಗಿ ಸೇರಿದಂತೆ ಇತರರು ಹಾಜರಿದ್ದರು.







