ಕಲಬುರಗಿ | ಮರ್ಯಾದಾ ಹತ್ಯೆ ತಡೆಗಟ್ಟಲು ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ

ಕಲಬುರಗಿ: ಕಲಬುರಗಿ ತಾಲ್ಲೂಕಿನ ಮೇಳಕುಂದಾ (ಬಿ) ಗ್ರಾಮದಲ್ಲಿ ಇತ್ತೀಚೆಗೆ ನಡೆದಿರುವ ಮರ್ಯಾದಾ ಹತ್ಯೆ ಖಂಡಿಸಿ, ಮರ್ಯಾದಾ ಹತ್ಯೆ ತಡೆಗಟ್ಟಲು ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಕರ್ನಾಟಕವೇ ತಲೆ ತಗ್ಗಿಸುವಂತಹ ಮರ್ಯಾದಾ ಹತ್ಯೆಗಳು ರಾಜ್ಯದಲ್ಲಿ ನಡೆಯುತ್ತಿವೆ. ಈಚೆಗೆ ಕಲಬುರಗಿ ಜಿಲ್ಲೆಯ ಮೇಳಕುಂದಾ(ಬಿ) ಗ್ರಾಮದ ಲಿಂಗಾಯತ ಸಮುದಾಯದ ವ್ಯಕ್ತಿ ಶಂಕರ ಕೊಳ್ಳೂರ, ಶರಣು ಮತ್ತು ದತ್ತು ಇವರುಗಳು ಸೇರಿ 18 ವರ್ಷ ವಯಸ್ಸಿನ ಕವಿತಾ ಕೊಳ್ಳೂರಳನ್ನು ಕೊಂದು ಸುಟ್ಟು ಹಾಕಿದ ದಾರುಣ ಘಟನೆಯು ಹೃದಯವಿದ್ರಾವಕವಾಗಿದೆ. ಇಂತಹ ಅಹಿತಕರ ಘಟನೆಗೆ ಕಾರಣರಾದ ಆರೋಪಿಗಳನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ.
ಕವಿತಾಳ ಮೃತ ದೇಹವನ್ನು ಸುಟ್ಟು ಹಾಕಿ, ಮಗಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸುಳ್ಳು ಸುದ್ದಿ ಹಬ್ಬಿಸಿರುವುದು ನೋಡಿದರೆ ಜಾತಿ ಶ್ರೇಷ್ಠತೆಯು ಕರುಳ ಬಳ್ಳಿಯನ್ನೂ ಸುಟ್ಟು ಹಾಕುವಷ್ಟು ಕ್ರೂರವಾಗಿ ಮಾರ್ಪಟ್ಟಿರುವುದು ಖಂಡನೀಯ. ಕರ್ನಾಟಕದಲ್ಲಿ ವಚನ ಚಳುವಳಿಯು ಜಾತಿ ತಾರತಮ್ಯದ ವಿರುದ್ದ ಬಲವಾಗಿ ದನಿ ಎತ್ತಿದ ನಾಡಾಗಿದೆ. 12ನೇ ಶತಮಾನಕ್ಕೆ ಚಾತುರ್ವರ್ಣ ವ್ಯವಸ್ಥೆಯ ವಿರುದ್ಧ ಶರಣರು ಸಮರ ಸಾರಿದ್ದಾರೆ. ಜಾತಿ ವ್ಯವಸ್ಥೆಯನ್ನು ಪೋಷಿಸುವ ಎಲ್ಲ ರೀತಿಯ ಮೌಢ್ಯ ಮತ್ತು ಅವೈಜ್ಞಾನಿಕತೆಯನ್ನು ಪ್ರಶ್ನೆ ಮಾಡಿದ್ದಾರೆ. ಆಗಲೇ ಅಂತರ್ಜಾತಿಯ ವಿವಾಹಗಳನ್ನು ಮಾಡಲಾಯಿತು. ಇಂತಹ ನೆಲದಲ್ಲಿ ಗೌರವಾರ್ಹ ಪರಂಪರೆಗೆ ಅಪಮಾನ ಎಸಗುವ ಜಾತಿವಾದಿ ಕ್ರೂರ ಚಟುವಟಿಕೆಗಳನ್ನು ಪ್ರಗತಿಪರ ಒಕ್ಕೂಟ ತೀವ್ರ ಖಂಡಿಸುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.
ಮರ್ಯಾದಾ ಹತ್ಯೆ ತಡೆ ಕಾಯ್ದೆಯನ್ನು ರೂಪಿಸಬೇಕು. ಇಂತಹ ಪ್ರಕರಣಗಳು ಘಟಿಸದಂತೆ ಅದನ್ನು ಜಾರಿಗೊಳಿಸಬೇಕು, ನಗರ ಮತ್ತು ಪಟ್ಟಣಗಳಲ್ಲಿ ಇಂತಹ ಅಮಾನವೀಯ ಘಟನೆ ಘಟಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು, ಯುವಜನತೆಯು ಜವಾಬ್ದಾರಿಯಿಂದ ಬಾಳಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವಂತಾಗಬೇಕು, ಇಂತಹ ಅಮಾನವೀಯತೆಯನ್ನು ಎಲ್ಲರೂ ತೀವ್ರವಾಗಿ ಖಂಡಿಸಬೇಕು. ಮತ್ತು ಇಂತಹ ಪ್ರಕರಣಗಳು ಘಟಿಸಿದಾಗ ಪ್ರತಿಭಟನಾತ್ಮಕವಾದ ದನಿ ಎತ್ತಬೇಕು, ಜಾತಿ ತಾರತಮ್ಯವನ್ನು ಹೋಗಲಾಡಿಸಲು ಕ್ರಮ ವಹಿಸಬೇಕು ಹಾಗೂ ಜಾತಿ ದೌರ್ಜನ್ಯಗಳನ್ನು ನಿಲ್ಲಿಸಲು ಕ್ರಮ ವಹಿಸಬೇಕು ಎಂದು ಮುಖಂಡರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪ್ರಜ್ಞಾ ಕಾನೂನು ಸಲಹಾ ಸಮಿತಿಯ ಕಾರ್ಯದರ್ಶಿ ಕೆ.ನೀಲಾ, ಜೆಎಂಎಸ್ ಸಮಿತಿಯ ಉಪಾಧ್ಯಕ್ಷೆ ಡಾ.ಮೀನಾಕ್ಷಿ ಬಾಳಿ, ಪ್ರಜ್ಞಾ ಕಾನೂನು ಸಲಹಾ ಸಮಿತಿಯ ಖಜಾಂಚಿ ಡಾ.ಪ್ರಭು ಖಾನಪುರೆ, ಡಿವೈಎಫ್ಐ ಅಧ್ಯಕ್ಷರಾದ ಲವಿತ್ರ ವಸ್ತ್ರದ್, ಪದ್ಮಿನಿ ಕಿರಣಗಿ, ದೇವದಾಸಿ ವಿಮೋಚನಾ ಸಂಘಟನೆ ಅಧ್ಯಕ್ಷೆ ಚಂದಮ್ಮ, ಎಸ್ಎಫ್ಐ ನ ಸುಜಾತಾ ವೈ, ಸುಧಾಮ ಧನ್ನಿ, ಶ್ರೀಮಂತ ಬಿರಾದಾರ, ಭಾರತ ಜ್ಞಾನ ವಿಜ್ಞಾನ ಸಮಿತಿ ಅಧ್ಯಕ್ಷ ಶಿವಶರಣ ಮುಳೆಗಾಂವ್, ಪಾಂಡುರಂಗ ಮಾವಿನಕರ, ಸಲ್ಮಾನ್ ಖಾನ್, ಪ್ರಮೋದ್ ಸೇರಿದಂತೆ ಮತ್ತಿತರರು ಇದ್ದರು.







