ಕಲಬುರಗಿ | ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗಟ್ಟಲು ಆಗ್ರಹಿಸಿ ಪ್ರತಿಭಟನೆ

ಕಲಬುರಗಿ : ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗಟ್ಟಿ, ಭಾದಿತ ಜನತೆಯ ನೆರವಿಗೆ ಮತ್ತು ಸಮರ್ಪಕ ಉದ್ಯೋಗ ಖಾತ್ರಿ ಕೆಲಸ ನೀಡುವಂತೆ ಒತ್ತಾಯಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸವಾದಿ) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾ ಪಂಚಾಯಿತ್ ಸಿಇಓ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದರು.
ಸೋಮವಾರ ಉದ್ಯೋಗ ಖಾತ್ರಿ ಕಾಯಕ ಜೀವಿಗಳ ಸಂಘಟನೆ ಮತ್ತು ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯಾದರ್ಶಿ ಕೆ.ನೀಲಾ ನೇತೃತ್ವದಲ್ಲಿ ನಗರದ ಜಿಲ್ಲಾ ಪಂಚಾಯತ್ ಕಚೇರಿಯ ಎದುರು ಬೃಹತ್ ಪ್ರತಿಭಟನೆ ನಡೆಸಿ ಸಾಲದ ಸುಳಿಯಲ್ಲಿ ನಲುಗುತ್ತಿರುವ ಜನತೆಯನ್ನು ಸರಕಾರ ರಕ್ಷಿಸಬೇಕು. ಸಾಲ ವಸೂಲಾತಿಯ ಕ್ರಮ, ಕಿರುಕುಳ, ಶೋಷಣೆ ತಡೆಗಟ್ಟಬೇಕು. ಋಣಮುಕ್ತಿ ಆಯೋಗ ತಳಹಂತದವರೆಗೂ ಜಾರಿಗೊಳಿಸಿ, ಎಲ್ಲಾ ಮೈಕ್ರೋ ಫೈನಾನ್ಸ್ ಗಳನ್ನು ನಬಾರ್ಡ್-ಆರ್ಬಿಐ ನಿಯಂತ್ರಣಕ್ಕೊಳಪಡಿಸಿ ಎಲ್ಲಾ ಮೈಕ್ರೋ ಫೈನಾನ್ಸ್ ನಿಯಂತ್ರಣಕ್ಕೆ ಪ್ರಾಧಿಕಾರ ರಚನೆ ಮಾಡಬೇಕು, ಲೇವಾದೇವಿಗಾರರ ಕಿರಿಕಳ ತಪ್ಪಿಸಲು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ದೂರು ಕೇಂದ್ರ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ಮೈಕ್ರೋ ಫೈನಾನ್ಸ್ ಲೇವಾದೇವಿ ನಿಯಂತ್ರಣ ಕಾಯ್ದೆ ಜಾರಿಗೆ ತಂದು ಸರಕಾರಿ ಸ್ವಸಹಾಯ ಸಂಘ, ಒಕ್ಕೂಟ, ಗ್ರಾಮೀಣ, ಸಹಕಾರಿ ಬ್ಯಾಂಕ್ಗಳ ಬಲವರ್ಧನೆ ಮಾಡಿ, ಸರಕಾರಿ ಒಕ್ಕೂಟದ ಪ್ರತಿ ಸಂಘಗಳಿಗೆ 15 ಲಕ್ಷ ರೂ. ಸಿಐಎಫ್ (ಕಮ್ಯೂನಿಟಿ ಇನ್ವೆಸ್ಟಮೆಂಟ್ ಫಂಡ್) ನಿಧಿ ಮೀಸಲು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.
ಪ್ರಭು ಖಾನಾಪುರ, ಚಂದಮ್ಮ ಗೋಳಾ ಸೇರಿದಂತೆ ಮುಂದಾದವರು ಪ್ರತಿಭಟನೆಯಲ್ಲಿ ಇದ್ದರು.





