Kalaburagi | ಶಿಕ್ಷಕರ ಮೇಲಿನ ಆನ್ಲೈನ್ ಕಾರ್ಯಭಾರ ಕಡಿಮೆ ಮಾಡಿ: ಸರ್ಕಾರಕ್ಕೆ ಎಂಎಲ್ಸಿ ಶಶೀಲ್ ನಮೋಶಿ ಆಗ್ರಹ

ಕಲಬುರಗಿ : ಸರ್ಕಾರಿ ಶಾಲಾ ಶಿಕ್ಷಕರ ಮೇಲಿನ ಆನ್ಲೈನ್ ಆಡಳಿತಾತ್ಮಕ ಕಾರ್ಯಭಾರವನ್ನು ಕಡಿಮೆ ಮಾಡಿ, ಅಗತ್ಯ ಡಿಜಿಟಲ್ ಸೌಲಭ್ಯಗಳನ್ನು ಒದಗಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೃತಕ ಬುದ್ಧಿಮತ್ತೆ ಹಾಗೂ ಡಿಜಿಟಲ್ ತಂತ್ರಜ್ಞಾನದ ಯುಗದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಡಿಜಿಟಲೀಕರಣ ಸ್ವಾಗತಾರ್ಹ ಬೆಳವಣಿಗೆಯಾದರೂ, ಅದರ ಸಂಪೂರ್ಣ ಹೊಣೆಗಾರಿಕೆ ಶಿಕ್ಷಕರ ಮೇಲೆಯೇ ಬೀಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ತಿಳಿಸಿದ್ದಾರೆ.
ಪ್ರಸ್ತುತ ಸರ್ಕಾರಿ ಶಾಲಾ ಶಿಕ್ಷಕರು ಬೋಧನಾ ಕಾರ್ಯದ ಜೊತೆಗೆ ಕಾಮ್ಸ್, ಸ್ಯಾಟ್ಸ್, ಯುಡೈಸ್, ಪಿಎಫ್ಎಂಎಸ್, ಆಧಾರ್ ಅಪಾರ್ ಐಡಿ, ಶಿಕ್ಷಾ ಕೋ-ಪೈಲಟ್, ಇನ್ಸ್ಪೈರ್ ಅವಾರ್ಡ್ ಮಾನಕ್, ಸೇತುಬಂಧ್ ಪರೀಕ್ಷೆಗಳ ದಾಖಲೆ ನಿರ್ವಹಣೆ, ಬಿಸಿಯೂಟ ಯೋಜನೆ, ಪಠ್ಯಪುಸ್ತಕ ಮತ್ತು ಸಮವಸ್ತ್ರ ವಿತರಣೆ, ಬಿಎಲ್ಒ ಕರ್ತವ್ಯ ಸೇರಿದಂತೆ ಅನೇಕ ಆನ್ಲೈನ್ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ. ಇದರ ಜೊತೆಗೆ ಇಲಾಖೆ ವಿವಿಧ ಮಾಹಿತಿಗಳು ಮತ್ತು ವರದಿಗಳನ್ನು ಸ್ಪ್ರೆಡ್ಶೀಟ್ ಹಾಗೂ ಮೊಬೈಲ್ ಅಪ್ಲಿಕೇಷನ್ಗಳಲ್ಲಿ ದಾಖಲಿಸುವಂತೆ ಸೂಚಿಸುತ್ತಿರುವುದರಿಂದ ಶಿಕ್ಷಕರ ಮೇಲೆ ಹೆಚ್ಚುವರಿ ಒತ್ತಡ ಉಂಟಾಗಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯದ ಅನೇಕ ಸರ್ಕಾರಿ ಶಾಲೆಗಳಲ್ಲಿ ಕಂಪ್ಯೂಟರ್ ಹಾಗೂ ಶಾಶ್ವತ ಇಂಟರ್ನೆಟ್ ಸೌಲಭ್ಯಗಳ ಕೊರತೆಯಿಂದ ಶಿಕ್ಷಕರು ತಮ್ಮ ಸ್ವಂತ ಮೊಬೈಲ್, ಡೇಟಾ ಹಾಗೂ ಇಂಟರ್ನೆಟ್ ಬಳಸಿ ಅಧಿಕೃತ ಕಾರ್ಯಗಳನ್ನು ನಿರ್ವಹಿಸುವಂತಾಗಿದೆ. ಇದರಿಂದ ಆರ್ಥಿಕ ಹೊರೆ ಹೆಚ್ಚುವುದರ ಜೊತೆಗೆ ಕಣ್ಣಿನ ಸಮಸ್ಯೆ, ಕುತ್ತಿಗೆ ಮತ್ತು ಬೆನ್ನುನೋವು, ತಲೆನೋವು ಹಾಗೂ ಮಾನಸಿಕ ಒತ್ತಡದಂತಹ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಕೆಲವೆಡೆ ಆನ್ಲೈನ್ ಕಾರ್ಯಭಾರದ ಒತ್ತಡದಿಂದ ಅಪಘಾತಗಳು ಸಂಭವಿಸಿರುವ ವರದಿಗಳೂ ಬಂದಿವೆ. ಈ ಹಿನ್ನೆಲೆಯಲ್ಲಿ ಪ್ರತಿಯೊಂದು ಶಾಲೆಗೆ ಕಂಪ್ಯೂಟರ್ ಹಾಗೂ ಶಾಶ್ವತ ಇಂಟರ್ನೆಟ್ ಸೌಲಭ್ಯ ಕಲ್ಪಿಸಬೇಕು. ಇಲ್ಲವೇ ಶಿಕ್ಷಕರಿಗೆ ಉಚಿತ ಟ್ಯಾಬ್ಲೆಟ್, ಇಂಟರ್ನೆಟ್ ಸೌಲಭ್ಯ, ಮಾಸಿಕ ಮೊಬೈಲ್ ಅಥವಾ ಡೇಟಾ ಭತ್ಯೆ ನೀಡಬೇಕು. ಪರ್ಯಾಯವಾಗಿ ಪ್ರತಿ ಶಾಲೆಗೆ ಒಬ್ಬ ಕಂಪ್ಯೂಟರ್ ಆಪರೇಟರ್ ನೇಮಕ ಮಾಡುವಂತಹ ಶಾಶ್ವತ ಪರಿಹಾರಗಳನ್ನು ಸರ್ಕಾರ ಜಾರಿಗೆ ತರಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈ ಬೇಡಿಕೆ ಶಿಕ್ಷಕರ ಅನುಕೂಲಕ್ಕಾಗಿ ಮಾತ್ರವಲ್ಲ; ಬೋಧನಾ ಗುಣಮಟ್ಟ ಸುಧಾರಿಸಲು, ವಿದ್ಯಾರ್ಥಿಗಳಿಗೆ ಹೆಚ್ಚಿನ ಸಮಯ ಮೀಸಲಿಡಲು ಹಾಗೂ ಶಿಕ್ಷಕರ ಆರೋಗ್ಯ ಕಾಪಾಡಲು ಅಗತ್ಯವಾಗಿದೆ ಎಂದು ನಮೋಶಿ ತಿಳಿಸಿದ್ದಾರೆ.
“ಶಿಕ್ಷಕರ ಸಮಯ ಮತ್ತು ಶಕ್ತಿಯನ್ನು ಡೇಟಾ ನಮೂದಿಸಲು ಬಳಸುವುದಕ್ಕಿಂತ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಬಳಸಬೇಕು. ಇಂದು ಶಿಕ್ಷಕರು ಶಿಕ್ಷಕರಿಗಿಂತ ಹೆಚ್ಚಾಗಿ ಕಚೇರಿ ಸಿಬ್ಬಂದಿಯ ಕೆಲಸ ನಿರ್ವಹಿಸುವಂತಾಗಿದೆ. ಸರ್ಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರ ಪರಿಹಾರ ಕಂಡುಹಿಡಿಯಬೇಕು” ಎಂದು ಅವರು ಒತ್ತಾಯಿಸಿದ್ದಾರೆ.
ಶಿಕ್ಷಕರ ಸಂಘಗಳು, ಶಿಕ್ಷಣಾಭಿಮಾನಿಗಳು ಹಾಗೂ ಸಾರ್ವಜನಿಕರು ಈ ವಿಷಯದಲ್ಲಿ ಸರ್ಕಾರದ ಗಮನ ಸೆಳೆಯಲು ಒಗ್ಗಟ್ಟಿನಿಂದ ಧ್ವನಿ ಎತ್ತಬೇಕು ಎಂದು ಶಶೀಲ್ ನಮೋಶಿ ಕರೆ ನೀಡಿದ್ದಾರೆ.






