ಕಲಬುರಗಿ | ನಿವೃತ್ತ ವಾರ್ತಾಧಿಕಾರಿ ಜಿ.ಚಂದ್ರಕಾಂತಗೆ ಆಕಾಶವಾಣಿಯ ʼಬಿʼ ಗ್ರೇಡ್ ಗೌರವ

ಕಲಬುರಗಿ: ಕಲಬುರಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿವೃತ್ತ ಉಪನಿರ್ದೇಶಕ ಜಿ.ಚಂದ್ರಕಾಂತ ಅವರು ಆಕಾಶವಾಣಿಯಿಂದ ನಡೆಸುವ ಸುಗಮಸಂಗೀತದ ಧ್ವನಿ ಪರೀಕ್ಷೆಯಲ್ಲಿ "ಬಿ" ಗ್ರೇಡ್ ಪಡೆದಿದ್ದಾರೆ. ಸೋಮಶೇಖರ್ ರುಳಿ ನೇತೃತ್ವದ ಆಕಾಶವಾಣಿ ಕೇಂದ್ರೀಯ ಆಡಿಷನ್ ಮಂಡಳಿಯು ಕಳೆದ ಡಿಸೆಂಬರ್ ಮಾಹೆಯಲ್ಲಿ ಕಲಬುರಗಿಯಲ್ಲಿ ಹಿಂದೂಸ್ತಾನಿ ಸುಗಮ ಸಂಗೀತದ ಧ್ವನಿ ಪರೀಕ್ಷೆ ನಡೆಸಿ ಶ್ರೀಯುತರಿಗೆ "ಬಿ" ಗ್ರೇಡ್ ನೀಡಿ ಗೌರವಿಸಿದೆ.
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಗೋರ ಚಿಂಚೋಳಿ ಗ್ರಾಮದ ಬಡ ಕುಟುಂಬದಲ್ಲಿ ಜನಿಸಿದ ಇವರು ಬಾಲ್ಯದಿಂದಲೇ ಸಂಗೀತದಲ್ಲಿ ಆಸಕ್ತಿ ಹೊಂದಿದ್ದರು. "ಸೌಭಾಗ್ಯ ಲಕ್ಷ್ಮೀ" ಸಾಮಾಜಿಕ ನಾಟಕದಲ್ಲಿ ಬಾಲ ನಟನಾಗಿ ಸಹ ನಟಿಸಿದ್ದಾರೆ.
ಚಂದ್ರಕಾಂತ ಅವರು ಅನೇಕ ಹಿರಿಯ ಕಲಾವಿದರೊಂದಿಗೆ ಉತ್ತಮ ಮತ್ತು ನಿಕಟ ಬಾಂಧವ್ಯ ಹೊಂದಿದ್ದಾರೆ. ಜಗತ್ಪ್ರಸಿದ್ಧ ಮೈಸೂರು ದಸರಾ, ಹಂಪಿ ಉತ್ಸವ ಸೇರಿದಂತೆ ಕರ್ನಾಟಕ ರಾಜ್ಯದಾದ್ಯಂತ ನಡೆಯುವ ಹಲವಾರು ಉತ್ಸವಗಳಲ್ಲಿ ಪಾಲ್ಗೊಂಡು ವಚನ, ತ್ರಿಭಾಷಾ ವಚನ ಗಾಯನ ಮತ್ತು ಗಜಲ್ ಗಾಯನ ಸಹ ಮಾಡಿದ್ದಾರೆ.





