ಕಲಬುರಗಿ | ಹೃದ್ರೋಗಿಗಳಿಗೆ ರೋಬೋಟಿಕ್ ಹೃದಯ ಶಸ್ತ್ರಚಿಕಿತ್ಸೆ

ಕಲಬುರಗಿ: ಹೃದಯ ರೋಗಿಗಳಿಗೆ ಸಾಂಪ್ರದಾಯಿಕ ಓಪನ್ಹಾರ್ಟ್ ಶಸ್ತ್ರಚಿಕಿತ್ಸೆಯ ಬದಲಾಗಿ, ಸೂಕ್ತ ರೋಗಿಗಳಲ್ಲಿ ಮಿನಿಮಲಿ ಇನ್ವೇಸಿವ್ ಹಾಗೂ ರೋಬೋಟಿಕ್ ಹೃದಯ ಶಸ್ತ್ರಚಿಕಿತ್ಸೆಯಂತಹ ಆಧುನಿಕ ವಿಧಾನಗಳನ್ನು ಬಳಸಬಹುದಾಗಿದೆ ಎಂದು ಸಿಕಂದರಾಬಾದ್ನ ಯಶೋದಾ ಆಸ್ಪತ್ರೆಯ ಕಾರ್ಡಿಯೊಥೋರಾಸಿಕ್ ಶಸ್ತ್ರಚಿಕಿತ್ಸಕ ಡಾ. ವಿಶಾಲ್ ಖಾಂಟೆ ಹಾಗೂ ಕನ್ಸಲ್ಟೆಂಟ್ ಕಾರ್ಡಿಯೊಥೋರಾಸಿಕ್ ಶಸ್ತ್ರಚಿಕಿತ್ಸಕ ಡಾ. ಮುಹಮ್ಮದ್ ವಹಾಜ್ ಅಲಿ ತಿಳಿಸಿದರು.
ಯಶೋದಾ ಆಸ್ಪತ್ರೆಯಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಿನಿಮಲಿ ಇನ್ವೇಸಿವ್ ಕಾರ್ಡಿಯಾಕ್ ಸರ್ಜರಿ (MICS) ಹಾಗೂ ರೋಬೋಟಿಕ್ ಕಾರ್ಡಿಯಾಕ್ ಸರ್ಜರಿಯ ಆಧುನಿಕ ವಿಧಾನಗಳ ಕುರಿತು ಮಾಹಿತಿ ನೀಡಿದರು.
ಸಾಂಪ್ರದಾಯಿಕ ಓಪನ್ಹಾರ್ಟ್ ಶಸ್ತ್ರಚಿಕಿತ್ಸೆಯಲ್ಲಿ ಎದೆಮೂಳೆಯನ್ನು ಕತ್ತರಿಸುವ ಸ್ಟರ್ನೋಟಮಿ ಅಗತ್ಯವಾಗುತ್ತದೆ. ಆದರೆ ಮಿನಿಮಲಿ ಇನ್ವೇಸಿವ್ ಶಸ್ತ್ರಚಿಕಿತ್ಸೆಯಲ್ಲಿ ಪಕ್ಕೆಲುಬುಗಳ ನಡುವಿನ ಸಣ್ಣ ಛೇದನಗಳ ಮೂಲಕ ಹಾಗೂ ಕೀಹೋಲ್ ವಿಧಾನದಲ್ಲಿ ಸಂಕೀರ್ಣ ಹೃದಯ ಶಸ್ತ್ರಚಿಕಿತ್ಸೆಗಳನ್ನು ನಡೆಸಲು ಸಾಧ್ಯವಿದೆ ಎಂದು ವೈದ್ಯರು ವಿವರಿಸಿದರು.
ರೋಬೋಟಿಕ್ ಶಸ್ತ್ರಚಿಕಿತ್ಸೆಯಲ್ಲಿ ಹೈ-ಡೆಫಿನಿಷನ್ 3D ದೃಶ್ಯೀಕರಣ ಹಾಗೂ ರೋಬೋಟಿಕ್ ಆರ್ಮ್ಗಳ ನೆರವಿನಿಂದ ಶಸ್ತ್ರಚಿಕಿತ್ಸಕರಿಗೆ ಹೆಚ್ಚಿನ ನಿಖರತೆ ಮತ್ತು ನಿಯಂತ್ರಣ ದೊರೆಯುತ್ತದೆ. ಆಧುನಿಕ ಮಿನಿಮಲಿ ಇನ್ವೇಸಿವ್ ಹಾಗೂ ರೋಬೋಟಿಕ್ ವಿಧಾನಗಳು ಸೂಕ್ತ ರೋಗಿಗಳಲ್ಲಿ ಕಡಿಮೆ ಆಘಾತದೊಂದಿಗೆ ಶಸ್ತ್ರಚಿಕಿತ್ಸೆ ನಡೆಸಲು ನೆರವಾಗುತ್ತವೆ ಎಂದು ಡಾ. ವಿಶಾಲ್ ಖಾಂಟೆ ಹೇಳಿದರು.
ಇಂತಹ ವಿಧಾನಗಳಿಂದ ಶಸ್ತ್ರಚಿಕಿತ್ಸೆಯ ನಂತರದ ನೋವು, ರಕ್ತಸ್ರಾವ ಹಾಗೂ ಸೋಂಕಿನ ಅಪಾಯ ಕಡಿಮೆಯಾಗುವ ಸಾಧ್ಯತೆಯಿದ್ದು, ಗಾಯದ ಗುರುತು ಕೂಡ ಕಡಿಮೆ ಕಾಣಿಸಿಕೊಳ್ಳಬಹುದು. ರೋಗಿಗಳು ಶೀಘ್ರ ಚೇತರಿಸಿಕೊಂಡು ತಮ್ಮ ದೈನಂದಿನ ಚಟುವಟಿಕೆಗಳಿಗೆ ಮರಳಲು ಸಹಕಾರಿಯಾಗಬಹುದು ಎಂದು ತಿಳಿಸಿದರು.
ಸೂಕ್ತ ರೋಗಿಗಳಲ್ಲಿ ಬೈಪಾಸ್ ಶಸ್ತ್ರಚಿಕಿತ್ಸೆ, ಹೃದಯದ ಕವಾಟಗಳ ದುರಸ್ತಿ ಹಾಗೂ ಕೆಲವು ಜನ್ಮಜಾತ ಹೃದಯ ದೋಷಗಳ ಚಿಕಿತ್ಸೆಯಲ್ಲಿಯೂ ಮಿನಿಮಲಿ ಇನ್ವೇಸಿವ್ ಮತ್ತು ರೋಬೋಟಿಕ್ ವಿಧಾನಗಳನ್ನು ಬಳಸಬಹುದಾಗಿದೆ ಎಂದು ಡಾ. ಮುಹಮ್ಮದ್ ವಹಾಜ್ ಅಲಿ ಹೇಳಿದರು.
ಈ ಸಂದರ್ಭದಲ್ಲಿ ಮಿನಿಮಲಿ ಇನ್ವೇಸಿವ್ ಕಾರ್ಡಿಯಾಕ್ ಸರ್ಜರಿಗೆ ಒಂದು ವಾರದ ಹಿಂದೆ ಒಳಗಾಗಿದ್ದ ಒಬ್ಬರು ಹಾಗೂ ಒಂದು ತಿಂಗಳ ಹಿಂದೆ ರೋಬೋಟಿಕ್ ಕಾರ್ಡಿಯಾಕ್ ಸರ್ಜರಿಗೆ ಒಳಗಾಗಿದ್ದ ಮತ್ತೊಬ್ಬ ರೋಗಿ ತಮ್ಮ ಚಿಕಿತ್ಸೆಯ ಅನುಭವವನ್ನು ಹಂಚಿಕೊಂಡರು. ಇಬ್ಬರೂ ಚೇತರಿಸಿಕೊಂಡಿರುವುದಾಗಿ ತಿಳಿಸಿದರು.
ಯಶೋದಾ ಆಸ್ಪತ್ರೆಗಳಲ್ಲಿ ಕಾರ್ಡಿಯಾಕ್ ಸೈನ್ಸಸ್, ಹೃದಯ ಕಸಿ ಹಾಗೂ ರೋಬೋಟಿಕ್ ಚಿಕಿತ್ಸೆಯಂತಹ ಅತ್ಯಾಧುನಿಕ ವೈದ್ಯಕೀಯ ಸೇವೆಗಳನ್ನು ಒದಗಿಸಲಾಗುತ್ತಿದೆ. ಆಧುನಿಕ ಡಯಾಗ್ನೋಸ್ಟಿಕ್ ಸೌಲಭ್ಯಗಳು, ಸುಸಜ್ಜಿತ ಆಪರೇಷನ್ ಥಿಯೇಟರ್ಗಳು ಹಾಗೂ ಸುಧಾರಿತ ಕ್ರಿಟಿಕಲ್ ಕೇರ್ ಘಟಕಗಳ ಮೂಲಕ ಈ ಭಾಗದ ಜನರಿಗೆ ಗುಣಮಟ್ಟದ ವೈದ್ಯಕೀಯ ಸೇವೆಗಳನ್ನು ತಲುಪಿಸುವ ಉದ್ದೇಶ ಹೊಂದಲಾಗಿದೆ ಎಂದು ವೈದ್ಯರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೇಶವ್ ಕುಲಕರ್ಣಿ, ಸತೀಶ ಮಂಟಗಿ ಉಪಸ್ಥಿತರಿದ್ದರು.






