Kalaburagi | ಉದ್ಯೋಗಿ, ಉದ್ಯೋಗದಾತರಿಗೆ 2,400 ಕೋಟಿ ರೂ. ಪ್ರೋತ್ಸಾಹಧನ ವಿತರಣೆ

ಕಲಬುರಗಿ: ಕಳೆದ ಆಗಸ್ಟ್ 2025ರಿಂದ ಹೊಸದಾಗಿ ಉದ್ಯೋಗಕ್ಕೆ ಸೇರಿದ ಉದ್ಯೋಗಿಗಳು ಹಾಗೂ ಉದ್ಯೋಗದಾತರಿಗೆ ಕೇಂದ್ರ ಸರ್ಕಾರದ ವಿಕಸಿತ ಭಾರತ ರೋಜಗಾರ್ ಯೋಜನೆಯಡಿ ಸುಮಾರು 2,400 ಕೋಟಿ ರೂ. ಪ್ರೋತ್ಸಾಹಧನವನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ವಿತರಣೆ ಮಾಡಿದರು.
ನವದೆಹಲಿಯ ವಿಜ್ಞಾನ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಿಬಿಟಿ (ನೇರ ಹಣ ವರ್ಗಾವಣೆ) ಮೂಲಕ ಪ್ರೋತ್ಸಾಹಧನ ವಿತರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಮೊದಲ ಬಾರಿಗೆ ಉದ್ಯೋಗಕ್ಕೆ ಸೇರುವ ಯುವಕರಿಗೆ ಶಕ್ತಿ ತುಂಬುವ ಯೋಜನೆಯಿದು. ಉದ್ಯೋಗಿಗಳು ಮತ್ತು ಉದ್ಯೋಗದಾತರು ಅಭಿವೃದ್ಧಿಯ ಪಯಣದಲ್ಲಿ ಜೊತೆಯಾಗಿ ಹೆಜ್ಜೆ ಇಡುವ ಮೂಲಕ ವಿಕಸಿತ ಭಾರತದ ನಿರ್ಮಾಣಕ್ಕೆ ಕೊಡುಗೆ ನೀಡಲಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ನೇರ ಪ್ರಸಾರವನ್ನು ಕಲಬುರಗಿಯ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಕೆಸಿಸಿಐ) ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಸ್ಥಳೀಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಶಶೀಲ ಜಿ. ನಮೋಶಿ, ಪ್ರತಿಯೊಬ್ಬರ ಜೀವನದಲ್ಲಿ ಮೊದಲ ಉದ್ಯೋಗ ಮತ್ತು ಮೊದಲ ವೇತನ ಅತ್ಯಂತ ಸ್ಮರಣೀಯ ಕ್ಷಣವಾಗಿದೆ. ಎರಡು ವರ್ಷಗಳಲ್ಲಿ 3.5 ಕೋಟಿ ಉದ್ಯೋಗ ಸೃಷ್ಟಿಸುವ ಗುರಿ ಹೊಂದಿರುವ ಈ ಯೋಜನೆ ಕಾರ್ಮಿಕ ವರ್ಗಕ್ಕೆ ಕೇಂದ್ರ ಸರ್ಕಾರ ನೀಡಿರುವ ಮಹತ್ವದ ಕೊಡುಗೆಯಾಗಿದೆ ಎಂದು ಹೇಳಿದರು.
ಇಪಿಎಫ್ಒ ಅಡಿಯಲ್ಲಿ ನೋಂದಾಯಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ಜೊತೆಗೆ ಶಿಕ್ಷಣ, ಕೌಶಲ್ಯ, ಉದ್ಯೋಗ ಹಾಗೂ ಘನತೆಯ ಬದುಕಿಗೆ ಅಗತ್ಯವಾದ ಅವಕಾಶಗಳನ್ನು ಈ ಯೋಜನೆ ಕಲ್ಪಿಸಲಿದೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಇಪಿಎಫ್ಒ ಕಲಬುರಗಿ ಪ್ರಾಂತೀಯ ಆಯುಕ್ತ ಎಂ. ಸುಬ್ರಮಣ್ಯಂ, ಯೋಜನೆಯು ಆಗಸ್ಟ್ 2025ರಿಂದ ಜುಲೈ 2026ರವರೆಗೆ ಜಾರಿಯಲ್ಲಿರಲಿದೆ. ಈ ಅವಧಿಯಲ್ಲಿ ಉದ್ಯೋಗಕ್ಕೆ ಸೇರುವ ಯುವಕರು ಹಾಗೂ ಉದ್ಯೋಗ ನೀಡುವ ಸಂಸ್ಥೆಗಳಿಗೆ ವಿಶೇಷ ಪ್ರೋತ್ಸಾಹಧನ ದೊರೆಯಲಿದೆ ಎಂದರು.
ಇಂದು ದೇಶಾದ್ಯಂತ ಸುಮಾರು 15 ಲಕ್ಷ ಉದ್ಯೋಗಿಗಳಿಗೆ ಡಿಬಿಟಿ ಮೂಲಕ ಪ್ರೋತ್ಸಾಹಧನ ವಿತರಿಸಲಾಗುತ್ತಿದ್ದು, ಕರ್ನಾಟಕದ 18,606 ಉದ್ಯೋಗಿಗಳು ಹಾಗೂ 57 ಉದ್ಯೋಗದಾತರಿಗೆ ಒಟ್ಟು 10 ಕೋಟಿ ರೂ. ಸಹಾಯಧನ ದೊರೆಯಲಿದೆ ಎಂದು ಮಾಹಿತಿ ನೀಡಿದರು.
ನೇಮಕಾತಿ ಪತ್ರ ವಿತರಣೆ :
ಕಾರ್ಯಕ್ರಮದ ವೇಳೆ ಹೊಸದಾಗಿ ಉದ್ಯೋಗಕ್ಕೆ ಆಯ್ಕೆಯಾದ ಯುವಕರಿಗೆ ವಿವಿಧ ಖಾಸಗಿ ಸಂಸ್ಥೆಗಳ ಪ್ರತಿನಿಧಿಗಳು ನೇಮಕಾತಿ ಪತ್ರಗಳನ್ನು ವಿತರಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಇಪಿಎಫ್ಒ ಪ್ರಾದೇಶಿಕ ಸಮಿತಿ ಸದಸ್ಯ ಶಂಕರ ಸುಲೆಗಾಂವ, ಕೆಕೆಸಿಸಿಐ ಅಧ್ಯಕ್ಷ ಶರಣಬಸಪ್ಪ ಪಪ್ಪಾ ಸೇರಿದಂತೆ ಅನೇಕ ಉದ್ಯಮಿಗಳು ಹಾಗೂ ಉದ್ಯೋಗಾರ್ಥಿಗಳು ಭಾಗವಹಿಸಿದ್ದರು.






