ಕಲಬುರಗಿ | ಆರೆಸ್ಸೆಸ್ ಇಡೀ ಮಾನವಕುಲದ ವಿರೋಧಿ : ಚಿಂತಕ ಆರ್.ಕೆ.ಹುಡಗಿ

ಕಲಬುರಗಿ : ನೂರು ವರ್ಷಗಳನ್ನು ಪೂರೈಸುತ್ತಿರುವ ಆರೆಸ್ಸೆಸ್ ಇಡೀ ಮಾನವಕುಲದ ವಿರೋಧಿಯಾಗಿದೆ ಎಂದು ಚಿಂತಕ ಆರ್.ಕೆ. ಹುಡಗಿ ತಿಳಿಸಿದ್ದಾರೆ.
ನಗರದ ಕನ್ನಡ ಭವನದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ವತಿಯಿಂದ ಆಯೋಜಿಸಿದ್ದ ʼಸಹಬಾಳ್ವೆಯ ಸಂಚುಗಾರಕ್ಕೆ 100 ವರ್ಷʼ ವಿಷಯದ ಒಂದು ದಿನದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಆರೆಸ್ಸೆಸ್ ಎಲ್ಲಿ ಕಾಲಿಡುತ್ತದೋ ಅಲ್ಲಿ ಸತ್ಯನಾಶವಾಗುತ್ತದೆ. ಅದರ ಅಪಾಯಗಳನ್ನು ಅರ್ಥಮಾಡಿಕೊಂಡು, ಅದನ್ನು ಹೇಗೆ ಎದುರಿಸಬೇಕು ಎಂಬುದರ ಕುರಿತು ಗಂಭೀರ ಚರ್ಚೆ ಅಗತ್ಯವಿದೆ ಎಂದರು.
ಇತ್ತೀಚೆಗೆ ಆರೆಸ್ಸೆಸ್ ಲಿಂಗಾಯತ ಸಮುದಾಯವನ್ನು ದುರ್ಬಲಗೊಳಿಸಲು ಷಡ್ಯಂತ್ರ ನಡೆಸುತ್ತಿದೆ ಎಂದು ಆರೋಪಿಸಿದ ಅವರು, ಲಿಂಗಾಯತ ತತ್ವಧಾರೆ ಆರೆಸ್ಸೆಸ್ನ ವಿಚಾರಧಾರೆಗೆ ದೊಡ್ಡ ಸವಾಲಾಗಿದೆ. ಬಸವಣ್ಣ ಮತ್ತು ಶರಣರು ಜಾತಿ ವ್ಯವಸ್ಥೆ ವಿರುದ್ಧ ಹೋರಾಟ ಮಾಡಿಲ್ಲ ಎಂದು ಹೇಳುವ ಮೂಲಕ ಆರೆಸ್ಸೆಸ್ ಸುಳ್ಳು ಪ್ರಚಾರ ನಡೆಸುತ್ತಿದೆ ಎಂದು ದೂರಿದರು.
ಕಳೆದ 100 ವರ್ಷಗಳಲ್ಲಿ ಆರೆಸ್ಸೆಸ್ ದೇಶದ್ರೋಹಿ ಹಾಗೂ ಅಸಂವಿಧಾನಿಕ ಚಟುವಟಿಕೆಗಳನ್ನೇ ನಡೆಸಿಕೊಂಡು ಬಂದಿದೆ. ದೇಶಕ್ಕೆ ಹೆಮ್ಮೆಪಡುವಂತಹ ಕೆಲಸಗಳನ್ನು ಮಾಡದೇ ಕೇವಲ ಸಂಚುಗಾರಿಕೆಯಲ್ಲಿ ತೊಡಗಿದೆ ಎಂದು ಅವರು ಟೀಕಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪುಕೋಟೆಯ ಭಾಷಣದಲ್ಲಿ ಆರೆಸ್ಸೆಸ್ ಬಗ್ಗೆ ಮಾತನಾಡಿರುವುದು ಹಾಗೂ ನಾಣ್ಯ ಬಿಡುಗಡೆ ಮಾಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಹೇಳಿದ ಅವರು, “ಇಂದು ದೇಶದಲ್ಲಿ ಮೋದಿ ಇಲ್ಲ, ಬದಲಿಗೆ ಮೋಹನ್ ಭಾಗವತ್ ಇದ್ದಾರೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಷ್ಟ್ರೀಯ ಬಸವದಳದ ಜಿಲ್ಲಾಧ್ಯಕ್ಷ ಆರ್.ಜಿ. ಶೆಟಗಾರ್, ದೇಶಕ್ಕಾಗಿ ಜೀವನ ಸಮರ್ಪಿಸಿದವರನ್ನು ಕೊಲೆ ಮಾಡುವ ಮನಸ್ಥಿತಿ ಭಯಾನಕವಾಗಿದೆ. ಸಂವಿಧಾನ ವಿರೋಧಿ ಶಕ್ತಿಗಳ ವಿರುದ್ಧ ಕೇವಲ ಒಂದೇ ಸಮುದಾಯ ಹೋರಾಟ ಮಾಡಿದರೆ ಸಾಲದು, ಎಲ್ಲಾ ಪ್ರಗತಿಪರ ಸಂಘಟನೆಗಳು ಒಗ್ಗೂಡಬೇಕು ಎಂದರು.
ಡಿಎಸ್ಎಸ್ ರಾಜ್ಯ ಸಂಚಾಲಕ ಅರ್ಜುನ್ ಭದ್ರೆ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾತಂತ್ರ್ಯ ನಂತರದಿಂದಲೂ ಆರೆಸ್ಸೆಸ್ ಬುದ್ಧ, ಬಸವ, ಅಂಬೇಡ್ಕರ್ ತತ್ವಗಳನ್ನು ವಿರೋಧಿಸುತ್ತಾ ಬಂದಿದೆ. ಸಂವಿಧಾನ, ರಾಷ್ಟ್ರಗೀತೆ ಮತ್ತು ರಾಷ್ಟ್ರಧ್ವಜವನ್ನು ಗೌರವಿಸದ ಈ ಸಂಘಟನೆ ದೇಶದಲ್ಲಿ ದ್ವೇಷ ಬಿತ್ತುತ್ತಿದೆ ಎಂದು ಆರೋಪಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಸಂಚಾಲಕ ಮಲ್ಲಿಕಾರ್ಜುನ್ ಕ್ರಾಂತಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹೋರಾಟಗಾರ ಮರಿಯಪ್ಪ ಹಳ್ಳಿ, ದತ್ತಾತ್ರೇಯ ಇಕ್ಕಳಕಿ, ರಾಷ್ಟ್ರೀಯ ಬಸವದಳದ ಜಿಲ್ಲಾಧ್ಯಕ್ಷ ಆರ್.ಜಿ.ಶೆಟಗಾರ್, ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷೆ ಪದ್ಮಿನಿ ಕಿರಣಗಿ, ಗುರುಲಿಂಗಪ್ಪ ಕೋಟನೂರ, ಅರ್ಜುನ್ ಗೊಬ್ಬೂರ, ಮೀನಾಕ್ಷಿ ಅಜಾದಪುರ, ಜಯಪಾಲ ಭದ್ರೆ, ಭೀಮರಾವ್ ಗೌಡ, ಬಸಲಿಂಗಮ್ಮ ಏವೂರ, ರೇಣುಕಾ ಸಿಂಗೆ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಅಪ್ಪಣ್ಣ ಗಾಯಕ್ವಾಡ್ ಸ್ವಾಗತಿಸಿದರು.
ಭಾರತ ದೇಶವನ್ನು ಒಡೆದದ್ದು ಸಾವರ್ಕರ್ :
ಭಾರತ ದೇಶವನ್ನು ನಿಜವಾಗಿ ಒಡೆದಿದ್ದು ಸಾವರ್ಕರ್. ಈತ 1935 ರ ಹಿಂದೆಯೇ ಎರಡು ದೇಶಗಳನ್ನು ಪ್ರತಿಪಾದಿಸಿದವನು. ಇದಾದ ಬಳಿಕವೇ ಮುಹಮ್ಮದ್ ಅಲಿ ಜಿನ್ನಾ ಪ್ರತ್ಯೇಕ ದೇಶದ ಬೇಡಿಕೆ ಇಟ್ಟವನು. ಆದರೆ ಈಗ ನೋಡಿದರೆ ಗಾಂಧಿ, ನೆಹರೂ ಅವರೇ ದೇಶ ಒಡೆದವರು ಎನ್ನುತ್ತಿದ್ದಾರೆ.
-ಪ್ರೊ.ಆರ್.ಕೆ ಹುಡಗಿ (ಚಿಂತಕ)







