ಕಲಬುರಗಿ | ʼಆರೆಸ್ಸೆಸ್ ಹಠಾವೋ, ಸಂವಿಧಾನ ಬಚಾವೋʼ ಪ್ರತಿಭಟನಾ ಮೆರವಣಿಗೆ

ಕಲಬುರಗಿ: ಆರೆಸ್ಸೆಸ್ ಚಟುವಟಿಕೆಗಳನ್ನು ಸರಕಾರಿ ಸ್ಥಳಗಳಲ್ಲಿ ನಿಷೇಧಿಸುವಂತೆ ಸಿಎಂ ಅವರಿಗೆ ಪತ್ರ ಬರೆದಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಬೆಂಬಲಿಸಿ ರಾಷ್ಟ್ರೀಯ ಅಹಿಂದ ಸಂಘಟನೆಯ ವತಿಯಿಂದ ನಗರದಲ್ಲಿ ʼಆರೆಸ್ಸೆಸ್ ಹಠಾವೋ, ಸಂವಿಧಾನ ಬಚಾವೋʼ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಸಂಘಟನೆಯ ರಾಜ್ಯಾಧ್ಯಕ್ಷ ಮುತ್ತಣ್ಣ ಶಿವಳ್ಳಿ, ನೋಂದಣಿಯಾಗದ ಆರೆಸ್ಸೆಸ್ ಸಂಘಟನೆಯು ನಮ್ಮ ದೇಶದ ಸಂವಿಧಾನವನ್ನು ಗೌರವಿಸುವುದಿಲ್ಲ. ಹಾಗಾಗಿ ನಾವು ಈ ಸಂಘಟನೆಯನ್ನು ವಿರೋಧಿಸುತ್ತೇವೆ, ಇದರ ವಿರುದ್ಧ ರಾಜ್ಯಾದ್ಯಂತ ಚಳುವಳಿ ಕೂಡ ಮಾಡುತ್ತಿದ್ದೇವೆ ಎಂದರು.
ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಆರೆಸ್ಸೆಸ್ ನವರು ಮಾಡಿದ್ದಾರೆ. ಸಚಿವರ ವಿರುದ್ಧ ಮಾಡುತ್ತಿರುವ ಷಡ್ಯಂತ್ರವನ್ನು ಅಹಿಂದ ಸಂಘಟನೆ ಖಂಡಿಸುತ್ತದೆ, ಸಂವಿಧಾನ ವಿರೋಧಿ ಕೆಲಸ ಮಾಡುವವರ ವಿರುದ್ಧ ನಮ್ಮ ಹೋರಾಟ ನಿರಂತರವಾಗಿ ಇರಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಲಾಸ ಕೊಪ್ಪಳ, ಜೋಸೆಫ್ ಉಮೋಜಿ, ರತ್ನಾ ಕಾಮನಹಳ್ಳಿ, ಲಕ್ಷ್ಮಣ್ ದೇವಕುತ್ತ, ಜಿಲ್ಲಾಧ್ಯಕ್ಷ ಶಿವಶಂಕರ್ ಬಳ್ಳಬಟ್ಟಿ, ರವೀಂದ್ರ, ದೇವೇಂದ್ರ ಬಳ್ಳಾವರ, ಮರಿಯಪ್ಪ ಕಡಕೋಳ ಸೇರಿದಂತೆ ಹಲವರು ಇದ್ದರು.







