ಕಲಬುರಗಿ | ಧರ್ಮಸ್ಥಳದಲ್ಲಿ ಸರಣಿ ಹತ್ಯೆ ಆರೋಪ: ನಿಷ್ಪಕ್ಷಪಾತ ತನಿಖೆಗೆ ಡಿವೈಎಫ್ಐ ಆಗ್ರಹ

ಲವಿತ್ರ ವಸ್ತ್ರದ್
ಕಲಬುರಗಿ: ಧರ್ಮಸ್ಥಳದಲ್ಲಿ ಕ್ರೂರವಾಗಿ ಹತ್ಯೆಗೈದು ಹೆಣಗಳನ್ನು ಹೂತು ಹಾಕಿದ ಪ್ರಕರಣ ಗಳ ಸಾಕ್ಷಿ ನೀಡಲು ಪ್ರತ್ಯಕ್ಷದರ್ಶಿ ದೂರದಾರರು ಮುಂದೆ ಬಂದಿದ್ದು, ರಾಜ್ಯ ಸರಕಾರ ಧರ್ಮಸ್ಥಳ ಸರಣಿ ಹತ್ಯೆ ಪ್ರಕರಣ ಕುರಿತು ಈಗಾಗಲೇ ಎಸ್.ಐ.ಟಿ ರಚಿಸಿರುವುದು ಸ್ವಾಗತಾರ್ಹ. ಆದರೆ ಈ ಪ್ರಕರಣವನ್ನು ನಿಷ್ಪಕ್ಷಪಾತ ತನಿಖೆಗೆ ಮುಂದಾಗಬೇಕು ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಕಲಬುರಗಿ ಜಿಲ್ಲಾ ಸಮಿತಿ ಒತ್ತಾಯಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಡಿವೈಎಫ್ಐ ಜಿಲ್ಲಾ ಸಮಿತಿಯು, ಈಗಾಗಲೇ ಧರ್ಮಸ್ಥಳ ಪ್ರದೇಶದಲ್ಲಿ ಕೊಲೆಗೈದು ಶವಗಳನ್ನು ಹೂತು ಹಾಕಲಾಗಿರುವ ಕುರಿತು ಪ್ರತ್ಯಕ್ಷದರ್ಶಿಯಾಗಿರುವ ದೂರುದಾರ ವ್ಯಕ್ತಿ ತಲೆಮರೆಸಿಕೊಳ್ಳದಂತೆ ಕಾಯುವ ಹಾಗೂ ರಕ್ಷಣೆ ಒದಗಿಸುವ ಮಹತ್ವದ ಜವಾಬ್ದಾರಿ ಪೊಲೀಸ್ ಇಲಾಖೆಯ ಮೇಲಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಈ ಕುರಿತು ಕಟ್ಟೆಚ್ಚರ ವಹಿಸಬೇಕಿದೆ. ಹೆಚ್ಚುಕಮ್ಮಿಯಾದರೆ ಸರಕಾರದ ಮೇಲೆ ಗಂಭೀರ ಪರಿಣಾಮ ಆಗಲಿದೆ ಎಂಬುದನ್ನು ಮರೆಯಬಾರದು ಎಂದು ಎಚ್ಚರಿಸಿದೆ.
ಧರ್ಮಸ್ಥಳದ ಪ್ರಕರಣದಲ್ಲಿ ನೊಂದವರಿಗೆ ನ್ಯಾಯ ದೊರಕಿಸಿಕೊಡಬೇಕಾದುದು ಎಲ್ಲಕ್ಕಿಂತ ಮುಖ್ಯವೆಂಬುದನ್ನು ರಾಜ್ಯ ಸರ್ಕಾರ ಸಾಬೀತುಪಡಿಸಬೇಕಿದೆ. ಸರಕಾರವು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕೆಂದು ಸಂಘಟನೆಯ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ರಾಜ್ಯ ಅಧ್ಯಕ್ಷೆ ಲವಿತ್ರ ವಸ್ತ್ರದ, ಸಲ್ಮಾನ್ ಖಾನ್, ಪ್ರಮೋದ ಪಾಂಚಾಳ, ಗಿಡ್ಡಮ್ಮ, ಶಾಂತಕುಮಾರ ಗುಡುಬಾ ಮತ್ತಿತರು ಇದ್ದರು.





